ಮಂಡ್ಯ: ಚುನಾವಣೆ ಹತ್ತಿರವಾಗುತ್ತಿದ್ದಂತೆ ತಮ್ಮ ಪಕ್ಷ ಗೆಲ್ಲಿಸಿಕೊಂಡು ಬರುವುದರ ಜೊತೆಗೆ ಬೇರೆ ಪಕ್ಷ ಗೆಲ್ಲದಂತೆಯೂ ನೋಡಿಕೊಳ್ಳುವ ತಯಾರಿ ನಡೆಸುತ್ತಿರುತ್ತವೆ ರಾಜಕೀಯ ಪಕ್ಷಗಳು. ಅದಕ್ಕಾಗಿ ಕೆಲವೊಂದು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನೇ ಹಾಕದೆ ಇನ್ನೊಂದು ಪಕ್ಷಕ್ಕೆ ಬೆಂಬಲ ನೀಡುವುದು. ಈಗ ಕಾಂಗ್ರೆಸ್ ನಲ್ಲೂ ಅದೇ ಆಗುತ್ತಿದೆ.
ಮೇಲುಕೋಟೆ ಕ್ಷೇತ್ರಕ್ಕೆ ಈ ಬಾರಿಯೂ ಅಭ್ಯರ್ಥಿಯನ್ನು ಹಾಕದೆ, ಬಿಜೆಪಿ ಸೋಲಿಸಲು ರೈತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯನಿಗೆ ಬೆಂಬಲ ಸೂಚಿಸಲು ನಿರ್ಧಾರ ಮಾಡಿದೆ. ಮಂಡ್ಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಚೆಲುವರಾಯಸ್ವಾಮಿ ದರ್ಶನ್ ಗೆ ಬೆಂಬಲ ನೀಡಲು ಹೊರಟಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪುಟ್ಟರಾಜುರನ್ನು ಸೋಲಿಸಲು ಈ ಪ್ಲ್ಯಾನ್ ಮಾಡಲಾಗಿದೆ. ಚೆಲುವರಾಯಸ್ವಾಮಿಯ ಈ ನಿರ್ಧಾರ ಇದೀಗ ಸ್ವಪಕ್ಷದವರಿಗೇನೆ ಕೋಪ ತರಿಸಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಹೆಚ್ ಎನ್ ರವೀಂದ್ರ ಈ ಬಾರಿಯ ಚುನಾವಣೆಯಲ್ಲಿ ಮೇಲುಕೋಟೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಈಗ ಅಭ್ಯರ್ಥಿಯನ್ನೇ ಹಾಕದೆ ರೈತ ಸಂಘದ ದರ್ಶನ್ ಗೆ ಬೆಂಬಲ ನೀಡಿರುವುದು ರವೀಂದ್ರ ಅವರಿಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ಚುನಾವಣಾ ಕಣದಿಂದಾನೇ ಹಿಂದೆ ಸರಿಯುವ ಪ್ಲ್ಯಾನ್ ಮಾಡಿದ್ದಾರಂತೆ.