ಬೆಂಗಳೂರು: ರವಿಚಂದ್ರನ್ ಹಾಗೂ ಹಂಸಲೇಖ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾಗಳೆಲ್ಲಾ ಮ್ಯೂಸಿಕಲ್ ಹಿಟ್ ಆಗಿದ್ದೆ ಜಾಸ್ತಿ. ಆದ್ರೆ ನೋಡ ನೋಡುತ್ತಲೇ ಇಬ್ಬರು ದೂರಾಗಿ ಬಿಟ್ಟರು. ಇಡೀ ಇಂಡಸ್ಟ್ರಿಗೆ ಇದು ಶಾಕಿಂಗ್ ನ್ಯೂಸ್. ಕಾರಣ ಮಾತ್ರ ಯಾರಿಗೂ ಗೊತ್ತಿಲ್ಲ. ಅಲ್ಲೊಂದು ಇಲ್ಲೊಂದು ಗಾಳಿ ಸುದ್ದಿ ಓಡಾಟ. ಆದರೆ ಇಷ್ಟು ವರ್ಷಗಳ ಬಳಿಕ ಆ ಒಳ್ಳೆ ಸ್ನೇಹ ದೂರಾಗಿದ್ದೇಕೆ ಎಂಬುದನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ತಿಳಿಸಿದ್ದಾರೆ.
ನಮ್ಮಿಬ್ಬರ ಸ್ನೇಹ ಯಾಕೆ ದೂರವಾಯ್ತು ಅಂತ ಗೊತ್ತಿಲ್ಲ. ಇವತ್ತಿಗೂ ನಾನು ಅವರು ಜಗಳ ಆಡಿಲ್ಲ, ಕಾರಣ ಗೊತ್ತಿಲ್ಲ. ಏನೇನೋ ಕಾರಣಗಳನ್ನು ಹೇಳಬಹುದು. ಬಿಡಬೇಕಲ್ಲ ನೀವೂ. ಹೇಳ್ಬೇಕಲ್ಲ ಅಂತ ನಾವೂ ಕಾರಣಗಳನ್ನ ಹೇಳ್ತಾ ಹೋಗ್ತೀವಿ. ಆದರೆ ಯಾವುದು ಬಿಟ್ಟೋಗುವಂತಹ ಕಾರಣವೇ ಅಲ್ಲ. ನೀವೋಗ್ರಿ ಬೇಡ ನೀವೂ ಎನ್ನುವಂತಹ ಕಾರಣಗಳ್ಯಾವು ಅವರಿಗೂ ಇರಲಿಲ್ಲ, ನನಗೂ ಇರಲಿಲ್ಲ. ಆದರೆ ಗಳಿಗೆ, ಡೆಸ್ಟಿನಿ ನಮ್ಮನ್ನ ಹೇಗೆ ಸೇರಿಸಿತ್ತೋ ಹಂಗೆ ದೂರ ಮಾಡುತ್ತೆ.
ಬಹುಶಃ ಆ ಟ್ರ್ಯಾಕ್ ಓಪನ್ ಆಗಬೇಕಿತ್ತೇನೋ. ನಾನು ಬರೆಯಬೇಕಿತ್ತೇನೋ, ನನ್ನ ಕೈನಲ್ಲೂ ಪೆನ್ ಬರಬೇಕಿತ್ತೇನೋ, ನಾನು ಹಾಡುಗಳನ್ನ ಮಾಡಬೇಕಿತ್ತೇನೋ, ನಾನು ಮ್ಯೂಸಿಕ್ ಮಾಡಬೇಕಿತ್ತೇನೋ ಅದರಿಂದ ನಾವಿಬ್ಬರು ದೂರವಾಗುವ ಪರಿಸ್ಥಿತಿ ಬಂದಿರಬೇಕೆನೋ. ಈಗ ನಾನು ನೋಡುದ್ರೆ ನನ್ನ ಡಿಪಾರ್ಟ್ಮೆಂಟ್ ಗೆ ಅವರೇ ಬಂದ್ರಲ್ಲ. ಇಷ್ಟು ದಿನ ನಾವೂ ಆಕ್ಷನ್ ಹೇಳ್ತಾ ಇದ್ವಿ, ನೀವೂ ರಿಯಾಕ್ಟ್ ಮಾಡ್ತಾ ಇದ್ರಿ. ಈಗ ನೀವಿಲ್ಲಿ ಬನ್ನಿ. ನಾವೂ ಅಲ್ಲಿಂದ ರಿಯಾಕ್ಟ್ ಮಾಡ್ತೀವಿ ಅಂತ ಹಂಸಲೇಖಾ ನಿರ್ದೇಶನದ ಒಕೆ ಸಿನಿಮಾಗೆ ಶುಭಾಶಯ ತಿಳಿಸಿದ್ದಾರೆ.

