ಬೆಂಗಳೂರು: ದಾವಣಗೆರೆಯ ಶಾಸಕರಾಗಿದ್ದಂತ ಶಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ಉಪಚುನಾವಣೆಯಲ್ಲಿ ಟಿಕೆಟ್ ಯಾರಿಗೆ ಎಂಬ ಅಗ್ಗಜಗ್ಗಾಟವೇ ಜಾಸ್ತಿಯಾಗಿದೆ. ಶಾಮನೂರು ಶಿವಶಂಕರಪ್ಪ ಅವರ ಕುಟುಂಬಸ್ಥರೇ ಟಿಕೆಟ್ ನಿರೀಕ್ಷೆ ಮಾಡುತ್ತಿದ್ದು, ಇತ್ತ ಅಲ್ಪಸಂಖ್ಯಾತರು ಸರತಿ ಸಾಲಿನಲ್ಲಿದ್ದಾರೆ. ಈ ವಿಚಾರ ರಾಜ್ಯದಲ್ಲಿ ಜೋರು ಚರ್ಚೆಯಲ್ಲಿದೆ. ಡಿಕೆ ಶಿವಕುಮಾರ್ ಈ ಬಗ್ಗೆ ಒಂದು ಖಡಕ್ ಸಂದೇಶ ರವಾನೆ ಮಾಡಿದ್ದಾರೆ.
ಡಿಕೆಶಿ ನಿರ್ದೇಶನದ ಮೇರೆಗೆ ವಿಧಾನಸೌಧದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಸಭೆ ನಡೆದಿದ್ದು, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಚಿವ ಜಮೀರ್ ಅಹ್ಮದ್ ಖಾನ್, ಕ.ಹೆಚ್.ಮುನಿಯಪ್ಪ, ಈಶ್ವರ ಖಂಡ್ರೆ, ಕೃಷ್ಣ ಭೈರೇಗೌಡ, ಡಾ.ಶರಣಪ್ರಕಾಶ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಶಾಸಕ ತನ್ವೀರ್ ಸೇಠ್, ಹೆಚ್.ಎಂ.ರೇವಣ್ಣ, ವಿ.ಆರ್ ಸುದರ್ಶನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಡಿಕೆ ಶಿವಕುಮಾರ್ ಅವರು ನೀಡಿರುವ ಸಂದೇಶದ ಬಗ್ಗೆ ಸಮಿತಿಯ ಸಂಚಾಲಕ ಮಂಜುನಾಥ್ ಭಂಡಾರಿ ಮಾತನ್ನಾಡಿದ್ದಾರೆ. ಯಾವ ರೀತಿಯ ಚುನಾವಣೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಅದರ ಪ್ರಕಾರ 24ನೇ ತಾರೀಖು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ದಾವಣಗೆರೆಗೆ ಸಂಬಂಧಪಟ್ಟಂತೆ ಪಕ್ಷದ ನಾಯಕರುಗಳನ್ನ, ಪಕ್ಷದ ಮುಂಚೂಣಿ ಘಟಕದ ಅಧ್ಯಕ್ಷರುಗಳ ಸಭೆ ಕರೆಯಲು ನಿರ್ಧರಿಸಲಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಚರ್ಚೆಗಳು ನಡೆದಿವೆ. ಅದರ ನಡುವೆ ಅಧ್ಯಕ್ಷರು ಬಹಳ ಸ್ಪಷ್ಟವಾಗಿ ಸಂದೇಶ ನೀಡಿದ್ದಾರೆ. ಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಯಾರೇ ಆಗಲಿ ಹೇಳಿಕೆಗಳನ್ನ ಕೊಡಬಾರದು. ಚುನಾವಣೆಯಲ್ಲಿ ಗೆಲ್ಲುವುದನ್ನ ನೋಡಬೇಕೆ ವಿನಃ, ಅಭ್ಯರ್ಥಿ ಬಗ್ಗೆ ಅಲ್ಲ. ಹೈಕಮಾಂಡ್ ಹಾಗೂ ರಾಜ್ಯಮಟ್ಟದ ನಾಯಕರು ಅಭ್ಯರ್ಥಿಯ ಬಗ್ಗೆ ಹೇಳ್ತಾರೆ ಎಂದಿದ್ದಾರೆ ಎಂಬ ಮಾಹಿತಿಯನ್ನ ನೀಡಿದರು.






