ಮಕ್ಕಳು ಸಸಿ ಇದ್ದಂತೆ ನೀರು ಹಾಕುವ ಕೆಲಸ ಪೋಷಕರದ್ದು : ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ

suddionenews
2 Min Read

ಚಿತ್ರದುರ್ಗ,(ಮೇ 07) : ಮಕ್ಕಳು ಸಸಿ ಇದ್ದಂತೆ ನೀರು ಹಾಕುವ ಕೆಲಸ ಪೋಷಕರದ್ದು. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಉತ್ತಮವಾದ ವಿಚಾರ ತಿಳಿಸಿದರೆ ಮಕ್ಕಳು ಸರಿಯಾದ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗುತ್ತದೆ ಎಂದು ಉಪವಿಭಾಗಾಧಿಕಾರಿ ಆರ್. ಚಂದ್ರಯ್ಯ ತಿಳಿಸಿದರು.

ನಗರದ ಜಿಲ್ಲಾ ಬಾಲಭವನ ಆವರಣದಲ್ಲಿ ರಾಜ್ಯಬಾಲಭವನ ಸೊಸೈಟಿ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಬಾಲಭವನ ಸಮಿತಿ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಚಿತ್ರದುರ್ಗ ತಾಲ್ಲೂಕು ಮಟ್ಟದ ಮಕ್ಕಳ ಬೇಸಿಗೆ ಶಿಬಿರದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಚಿಕ್ಕ ಮಕ್ಕಳು ಈಗತಾನೇ ಚಿಗುರುವಂತಹ ಸಸಿಗಳು ಇದ್ದಹಾಗೆ. ನಾವು ಬೆಳೆಯುವ ಸಸಿಗಳಿಗೆ ಹೇಗೆ ಗೊಬ್ಬರ, ನೀರು ಹಾಕಿ ಪೋಷಣೆ ಮಾಡಿ ಆರೋಗ್ಯಕರವಾಗಿ ಬೆಳೆಸುತ್ತೇವೆಯೋ ಅದೇ ರೀತಿ ಚಿಕ್ಕ ಮಕ್ಕಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಾದ ನೃತ್ಯ, ಕರಾಟೆ, ಚಿತ್ರಕಲೆ, ಮಣ್ಣಿನ ಗೊಂಬೆ ತಯಾರಿಕೆ ಇತ್ಯಾದಿ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸುವಂತಹ ಕೆಲಸವನ್ನು ಪೋಷಕರು ಮಾಡಬೇಕು ಇದ್ದರಿಂದ ಮಕ್ಕಳು ಹಲವಾರು ಚಟುವಟಿಕೆಗಳನ್ನು ಕಲಿತು ಮಾನಸಿಕವಾಗಿ, ದೈಹಿಕವಾಗಿ  ಸಧೃಡರಾಗುತ್ತಾರೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಮಾತನಾಡಿ, ಬೇಸಿಗೆ ಶಿಬಿರಕ್ಕೆ ಬಂದು ಕಲಿಯುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಅಭಿವೃದ್ಧಿಯಾಗುತ್ತದೆ. ಶಿಬಿರಗಳನ್ನು ನಡೆಸುವುದರಿಂದ ಪ್ರತಿ ಮಕ್ಕಳಲ್ಲೂ ನಾಯಕತ್ವದ ಗುಣ, ಸೇಹ ಮನೋಭಾವನೆ, ಸಹನೆ, ಹೊಂದಾಣಿಕೆ ಸ್ವಭಾವ ಬೆಳೆಯುತ್ತದೆ ಎಂದರು.

ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸುವ ಸಲುವಾಗಿ ಹೊರಸಂಚಾರ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಭಾವನಾತ್ಮಕವಾಗಿ ಪರಿಸರದೊಂದಿಗೆ ಹೊಂದಿಕೊಳ್ಳುತ್ತಾರೆ ಪರಿಸರ ಪ್ರಜ್ಞೆ ಮೂಡಿಸಿ ಉತ್ತಮ ಪ್ರಜೆಗಳನ್ನಾಗಿ ಮಾಡಲು ಉಪಯೋಗವಾಗುತ್ತದೆ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್. ಸುಧಾ ಮಾತನಾಡಿ, ರಾಜ್ಯಬಾಲ ಭವನ ಸೊಸೈಟಿ ಅವರ ಮಾರ್ಗಸೂಚಿಯಂತೆ ಪ್ರತಿದಿನ ವಿವಿಧ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷ ಶಿಕ್ಷಕರೊಂದಿಗೆ ವಿವಿಧ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ತರಗತಿಗಳನ್ನು ಮಾಡಲಾಗುತ್ತಿದೆ. ಲೇಖನಸಾಮಗ್ರಿಗಳು, ಮಧ್ಯಾಹ್ನ ಉಪಹಾರವನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನಿರೂಪಣಾಧಿಕಾರಿಗಳು ನರಸಿಂಹರಾಜು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಮಂಜುಳಾ, ಅತಿಕ ಖಾನಂ, ಜಿಲ್ಲಾ ಬಾಲ ಭವನ ಸಂಯೋಜಕ ಡಿ ಕುಮಾರ್ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *