ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 17 : ಎಂ ಸ್ಯಾಂಡ್ ಬಳಸಿ ವಿಶ್ವದಲ್ಲಿಯೇ ಅತಿ ದೊಡ್ಡದಾದ ಆಂಜನೇಯಸ್ವಾಮಿಯ ರೇಖಾಚಿತ್ರ ಬಿಡಿಸಿರುವುದು ನೋಬೆಲ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್ಗೆ ಸೇರ್ಪಡೆಯಾಗಿದ್ದು, ಮೆಡಲ್ ಹಾಗೂ ಸರ್ಟಿಫಿಕೆಟ್ ಸಿಕ್ಕಿದೆ ಎಂದು ಸಾಯಿಕ್ಯಾಡ್ ಕಂಪನಿಯ ಮಂಜುನಾಥರೆಡ್ಡಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುರುವನೂರು ಗ್ರಾಮದಲ್ಲಿ ಸಂಘಟಿ ಹನುಮಂತಪ್ಪನವರಿಗೆ ಸೇರಿದ ಐದು ಎಕರೆ ಜಮೀನಿನಲ್ಲಿ ಒಂದು ವಾರಗಳ ಕಾಲ ಶ್ರಮಪಟ್ಟು ಆಂಜನೇಯಸ್ವಾಮಿ ರೇಖಾಚಿತ್ರವನ್ನು ಬಿಡಿಸಿದ್ದೇವೆ. ಇದಕ್ಕೆ ಜನಾರ್ಧನ್ ಹಾಗೂ ಮೋಹನ್ ಇವರುಗಳು ನನ್ನ ಜೊತೆ ಕೈಜೋಡಿಸಿದರು. ಇಷ್ಟು ದೊಡ್ಡದಾದ ರೇಖಾಚಿತ್ರವನ್ನು ಇದುವರೆವಿಗೂ ಯಾರೂ ಬಿಡಿಸಿರಲಿಲ್ಲ. ಮೊದಲು ತರಕಾರಿಯಿಂದ ಆಂಜನೇಯಸ್ವಾಮಿಯ ರೇಖಾಚಿತ್ರ ಬಿಡಿಸಬೇಕೆಂದುಕೊಂಡಿದ್ದೆವು. ಅಷ್ಟೊಂದು ಪ್ರಮಾಣದಲ್ಲಿ ತರಕಾರಿಯನ್ನು ಹೊಂದಿಸುವುದು ಕಷ್ಟವಾಗುತ್ತದೆನ್ನುವ ಕಾರಣಕ್ಕೆ ಎಂ ಸ್ಯಾಂಡ್ನಿಂದ ಸಿದ್ದಪಡಿಸಿರುವ ರೇಖಾಚಿತ್ರವನ್ನು ಸಹಸ್ರಾರು ಭಕ್ತರು ವೀಕ್ಷಿಸಿ ಇಷ್ಟಪಟ್ಟಿದ್ದಾರೆಂದು ಮಂಜುನಾಥರೆಡ್ಡಿ ಹರ್ಷ ವ್ಯಕ್ತಪಡಿಸಿದರು.
ದೇವರ ಸೇವೆ ಅಂದುಕೊಂಡು ಬಿಡಿಸಿರುವ ಇಷ್ಟೊಂದು ದೊಡ್ಡ ಗಾತ್ರದ ಆಂಜನೇಯಸ್ವಾಮಿ ರೇಖಾಚಿತ್ರಕ್ಕೆ ನೋಬಲ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್ ದೊರಕಿರುವುದು ನಮಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ ಎಂದು ಸಂಭ್ರಮಿಸಿದರು.
ಜನಾರ್ಧನ್ ಹಾಗೂ ಮೋಹನ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

