ಬೆಂಗಳೂರು: ರೈತರು ಈ ದೇಶದ ಬೆನ್ನೆಲುಬು ಅಂತಾರೆ. ಅವರು ಬೆಳೆದರೇನೆ ಮನುಷ್ಯ ತಿನ್ನೊಕೆ ಸಾಧ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ವ್ಯವಸಾಯದ ಭೂಮಿಯನ್ನ ಮಾರಾಟ ಮಾಡಿ, ರೈತರು ಕೂಡ ಇನ್ಯಾವುದೋ ಕೆಲಸ ಮಾಡಿಕೊಂಡು ಕೂತಿದ್ದಾರೆ. ಆದರೆ ದೇವನಹಳ್ಳಿ ರೈತರು ತಮ್ಮ ಭೂಮಿಗಾಗಿ ಹೋರಾಟ ಮಾಡಿ ಕಡೆಗೂ ಗೆದ್ದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಯ ರೈತರ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಹೊರಟಿದ್ದ ನಿರ್ಧಾರದಿಂದ ರಾಜ್ಯ ಸರ್ಕಾರ ಹೊರ ಬಂದಿದೆ.
ಒಟ್ಟು 1775 ಎಕರೆ ಭೂಸ್ವಾಧೀನ ಸಂಬಂಧ ರೈತರಲ್ಲಿಯೇ ಪರ ವಿರೋಧವಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದ ಬಳಿಕ, ಎರಡ್ಮೂರು ಸುತ್ತು ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ಇದೀಗ ರೈತರ ಪರವಾಗಿಯೇ ತೀರ್ಪು ನೀಡಿದ್ದಾರೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ನಿರ್ಧಾರ ಮಾಡಿದೆ.
ಈ ಸಂಬಂಧ ತೀರ್ಮಾನ ಪ್ರಕಟಿಸಿರುವ ಸಿದ್ದರಾಮಯ್ಯ ಅವರು, ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಡಿದ್ದೇವೆ. ಆದರೆ ರೈತರೇ ಮುಂದೆ ಬಂದು ತಮ್ಮ ಭೂಮಿಯನ್ನು ಕೊಡುವುದಕ್ಕೆ ಒಪ್ಪಿದರೆ ಒಪ್ಪಂದದ ಮೇರೆಗೆ ಭೂಮಿಯನ್ನು ತೆಗೆದುಕೊಳ್ಳುತ್ತೇವೆ. ನಮಗೆ ಕೈಗಾರಿಕಾ ವಲಯ ಬೆಳೆಯಬೇಕು. ರೈತರಿಗೆ ಸೂಕ್ತ ಪರಿಹಾರವನ್ನು ನೀಡುತ್ತೇವೆ.
ಯಾವ ರೈತರು ಭೂಮಿಯನ್ನು ನೀಡಲು ಮುಂದೆ ಬರುತ್ತಾರೋ ಆ ರೈತರ ಭೂಮಿಯನ್ನು ಮಾತ್ರ ಪಡೆಯುತ್ತೇವೆ. ರೈತರು ವ್ಯವಸಾಯ ಮಾಡುತ್ತಿರುವ ಕಾರಣ ಈಗ ಭೂಸ್ವಾಧೀನವನ್ನು ಕೈಬಿಟ್ಟಿದ್ದೇವೆ. ರೈತರ ಜಮೀನನ್ನು ಉಳಿಸುವುದಕ್ಕೆ ಈ ತೀರ್ಮಾನ ಕೈಗೊಂಡಿದ್ದೇವೆ. ಹಾಗಂತ ಎಲ್ಲಾ ಕಡೆಗೂ ಇದೆ ತೀರ್ಮಾನ ಅನ್ವಯವಾಗುವುದಿಲ್ಲ ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.


