ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 05 : ಶಾಸಕ ವೀರೇಂದ್ರ ಪಪ್ಪಿ ಅವರನ್ನು ಮತ್ತೆ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದ ವಿರೇಂದ್ರ ಪಪ್ಪಿ ಅವರು, ನಾವೂ ಜನ ಸೇವೆ ಮಾಡುವುದಕ್ಕೆ ರಾಜಕೀಯಕ್ಕೆ ಬರ್ತಾ ಇರೋದು. ಜನಸಾಮಾನ್ಯರದ್ದಾಗಲಿ ಅಥವಾ ಸರ್ಕಾರದ್ದಾಗಲಿ ಹಣ ಬೇಕಿಲ್ಲ. ನಾವೂ ಹಿಂದಿನಿಂದಲೇ ಕೋಟ್ಯಾಧೀಶ್ವರರು ಅಂತ ಹೇಳಿದ್ದರು. ಆದರೆ ಆ ಶ್ರೀಮಂತಿಕೆ ಬಂದಿದ್ದೆಲ್ಲಿಂದ ಅಂತ ಇಡಿ ಅಧಿಕಾರಿಗಳು ಬೆನ್ನತ್ತಿ ಹುಡುಕಾಟ ನಡೆಸಿದ್ದಾರೆ.
ಅಕ್ರಮವಾಗಿ ನಡೆಸುತ್ತಿದ್ದ ಕಿಂಗ್ 567, ರಾಜಾ 567, ಲಯನ್ 568 ಸೇರಿದಂತೆ ಇತ್ಯಾದಿಗಳ ಹೆಸರಿನಲ್ಲಿ ನಡೆಸುತ್ತಿರುವ ಆನ್ಲೈನ್ ಬೆಟ್ಟಿಂಗ್ ತಾಣಗಳನ್ನು ಪತ್ತೆ ಮಾಡಿದ್ದಾರೆ. ಅಲ್ಲದೇ ಹಣ ವರ್ಗಾವಣೆಗೆ ವೆಬ್ಸೈಟ್, ರೂಟಿಂಗ್ ಮಾಡಲು ಹಲವು ಗೇಟ್ವೇಗಳನ್ನು ಬಳಕೆ ಮಾಡಿದ್ದು, ಅಲ್ಪಾವಧಿಯಲ್ಲಿಯೇ 2 ಸಾವಿರ ಕೋಟಿ ರೂಪಾಯಿ ಲಾಭಗಳಿಸಿರುವ ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಈ ದಂಧೆಗೆ ಶಾಸಕ ವೀರೇಂದ್ರ ಪಪ್ಪಿಯ ಸಹೋದರ ಕೆ.ಸಿ. ತಿಪ್ಪೆಸ್ವಾಮಿ ಕಿಂಗ್ ಪಿನ್ ಎಂದೇ ಹೇಳಲಾಗಿದೆ.
ಇವರು ಬೇರೆ ಬೇರೆ ವ್ಯಾಪಾರ, ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಇಡಿ ಅಧಿಕಾರಿಗಳು ಇನ್ನು ಸಾಕಷ್ಟು ರೀತಿಯಲ್ಲಿ ತನಿಖೆಯನ್ನು ನಡೆಸುತ್ತಿದ್ದಾರೆ. ಯಾವೆಲ್ಲಾ ಮೂಲಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ, ಎಲ್ಲೆಲ್ಲಾ ಹಣದ ಮೂಲವಿದೆ, ಬೇರೆ ಏನೆಲ್ಲಾ ವ್ಯವಹಾರ ಇರಬಹುದು ಎಂಬೆಲ್ಲಾ ಆಯಾಮದಿಂದ ತನಿಖೆ ನಡೆಯುತ್ತಿದೆ. ಇಂದು ಇಡಿ ಕಸ್ಟಡಿ ಅಂತ್ಯವಾಗಿದ್ದ ಹಿನ್ನೆಲೆ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ಮತ್ತೆ ನಾಲ್ಕು ದಿನ ಕಸ್ಟಡಿಗೆ ನೀಡಲಾಗಿದೆ. ಜೊತೆಗೆ ಪೊಲೀಸರಿಗೂ ಒಂದಷ್ಟು ನಿಯಮಗಳನ್ನ ಕೋರ್ಟ್ ನೀಡಿದೆ. 9 ಗಂಟೆಯ ಒಳಗೆ ವಿಚಾರಣೆ ಮುಗಿಸಲು ಸೂಚನೆ ನೀಡಿದೆ.






