ನವದೆಹಲಿ: ಬೆಟ್ಟಿಂಗ್ ಆಪ್ ಗಳಿಗೆ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಶಾಸಕ ವೀರೇಂದ್ರ ಪಪ್ಪಿ ಈಗಾಗಲೇ ಅರೆಸ್ಟ್ ಆಗಿದ್ದಾರೆ. ಇದರ ಜೊತೆಗೆ ಇಡಿಯಿಂದ ಆಸ್ತಿ ವಶಪಡಿಸಿಕೊಳ್ಳುವ ನಿರ್ಧಾರವನ್ನು ಪ್ರಶ್ನಿಸಿ ವೀರೇಂದ್ರ ಪಪ್ಪಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಈ ಮೇಲ್ಮನವಿ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಈ ಸಂಬಂಧ ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಎ ಎಸ್ ಚಂದೂರ್ಕರ್ ಅರ್ಜಿ ವಿಚಾರಣೆಯನ್ನ ನಡೆಸಿದರು. ಪಿಎಂಎಲ್ಎ ತೀರ್ಪಿನ ಸಾಂವಿಧಾನಿಕತೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಇತರ ಅರ್ಜಿಗಳ ಜೊತೆಗೆ ಈ ಅರ್ಜಿಯನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ. ಕಾಯ್ದೆಯಲ್ಲಿ ದೋಷವಿದೆ ಎಂಬುದು ಕಂಡು ಬಂದಿದೆ. ನ್ಯಾಯಾಂಗೇತರ ಸದಸ್ಯರು ಆಸ್ತಿ ಹಕ್ಕು ಮತ್ತು ಸಾಂವಿಧಾನಿಕ ರಕ್ಷಣೆಗಳನ್ನು ಒಳಗೊಂಡ ಸಂಕೀರ್ಣ ವಿಷಯಗಳ ಬಗ್ಗೆ ಹೇಗೆ ನಿರ್ಣಯ ತೆಗೆದುಕೊಳ್ಳಲು ಸಾಧ್ಯ ಎಂದು ನ್ಯಾಯಮುಯರ್ತಿಗಳಾದ ಪಿ.ಎಸ್.ನರಸಿಂಹ ಅವರು ಪ್ರಶ್ನಿಸಿದ್ದಾರೆ.
ಪಿಎಂಎಲ್ಎಯ ಸೆಕ್ಷನ್ 20 ಮತ್ತು 21ರ ಸಿಂಧುತ್ವ ಪ್ರಶ್ನಿಸಿ ಅರ್ಜಿದಾರರು ಮಾಡಿದ ಎಲ್ಲ ಅರ್ಜಿಗಳ ಕುರಿತು ಪೀಠವು ನೋಟಿಸ್ ಜಾರಿ ಮಾಡಿತು. ಪಿಎಂಎಲ್ಎಯ ಸೆಕ್ಷನ್ 6ರ ಸಿಂಧುತ್ವದ ಕುರಿತು ಬಾಕಿ ಇರುವ ಪ್ರಕರಣಗಳ ಜೊತೆಗೆ ಈ ಅರ್ಜಿ ವಿಚಾರಣೆ ನಡೆಸಬೇಕು ಎಂದು ಪೀಠ ನಿರ್ದೇಶಿಸಿದೆ. ವೀರೇಂದ್ರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಹಾಗೂ ರಂಜಿತ್ ಕುಮಾರ್, ‘ಈ ಕಾನೂನಿನ ನಿಯಮಗಳು ಹೊಣೆಗಾರಿಕೆಯಿಲ್ಲದೆ ವರ್ತಿಸಲು ಇ.ಡಿ.ಗೆ ಅವಕಾಶ ನೀಡುತ್ತವೆ. ಇದರಿಂದ ವ್ಯಾಪಕ ಅಧಿಕಾರ ದುರುಪಯೋಗ ಆಗುತ್ತಿದೆ’ ಎಂದು ದೂರಿದರು. `ಪಿಎಂಎಲ್ಎಯ ಸೆಕ್ಷನ್ 20 ಮತ್ತು 21 ಅಡಿಯಲ್ಲಿ ಇ.ಡಿಗೆ 180 ದಿನ ಯಾವುದೇ ಕಾರಣ ನೀಡದೆ ಸ್ವತ್ತು ಮತ್ತು ದಾಖಲೆಗಳನ್ನು ಜಪ್ತಿಯಲ್ಲಿರಿಸಿಕೊಳ್ಳಲು ಅಧಿಕಾರ ಇದೆ. ಪಿಎಂಎಲ್ಎನ ತೀರ್ಪು ನೀಡುವ ಪ್ರಾಧಿಕಾರದಲ್ಲಿ ಸದ್ಯ ಏಕಸದಸ್ಯರಿದ್ದಾರೆ ಮತ್ತು ಅವರಿಗೆ ನ್ಯಾಯಾಂಗದ ಹಿನ್ನೆಲೆಯಿಲ್ಲ. ಇಡೀ ದೇಶಕ್ಕೆ ಒಬ್ಬ ವೆಚ್ಚ ಪರಿಶೋಧಕರು ತೀರ್ಪು ನೀಡುವ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇ.ಡಿ. ಅಧಿಕಾರಿಗಳು ಇದುವರೆಗೆ ಮಾಡಿರುವ ಜಪ್ತಿಗಳ ಪೈಕಿ ಶೇ 99 ಪ್ರತಿಶತವನ್ನು ಅವರೇ ದೃಢೀಕರಿಸಿದ್ದಾರೆ’ ಎಂದು ಪೀಠದ ಗಮನಕ್ಕೆ ತಂದರು.

