ವಚನಕಮ್ಮಟ ರಾಜ್ಯಮಟ್ಟದ ರ‌್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ | ವಚನ ಸಾಹಿತ್ಯದಿಂದ ಸುಖ ಶಾಂತಿ ನೆಮ್ಮದಿ : ಬಸವಪ್ರಭು ಸ್ವಾಮೀಜಿ

2 Min Read

ಸುದ್ದಿಒನ್, ಚಿತ್ರದುರ್ಗ, ಜು. 06 : ಚಿಕ್ಕಮಕ್ಕಳ ಮೇಲೆ ನೀತಿ ಪಾಠಗಳು ಬಹಳಷ್ಟು ಪರಿಣಾಮ ಬೀರುವುದರಿಂದ ಪೋಷಕರಾಗಲಿ, ಶಿಕ್ಷಕರಾಗಲಿ ಕಷ್ಟಪಟ್ಟಾದರೂ ಸರಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳತ್ತ ಮಕ್ಕಳ ಮನಸ್ಸನ್ನು ಕೇಂದ್ರೀಕರಿಸುವತ್ತ ಗಮನಹರಿಸಬೇಕಿದೆ ಎಂದು ಶಿರಸಂಗಿ ಮಠದ ಶ್ರೀ ಬಸವಮಹಾಂತ ಸ್ವಾಮಿಗಳು ಕರೆ ನೀಡಿದರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ 2021-22 ಹಾಗೂ 2022-23ನೇ ಸಾಲಿನ ರಾಜ್ಯಮಟ್ಟದ ರ‌್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.


ಬಸವಾದಿ ಶಿವಶರಣರ ವಚನಗಳಲ್ಲಿ ಜೀವನ ಮೌಲ್ಯಗಳಿವೆ. ಅವುಗಳು ಚಿಕ್ಕವಯಸ್ಸಿನ ಮಕ್ಕಳ ಮನಸ್ಸಿಗೆ ಹೋದರೆ ಸಾಧ್ಯವಾದಷ್ಟು ಆ ವಚನಗಳ ಮೂಲಕ ಬದುಕನ್ನು ಸಾಗಿಸುವ ಪ್ರಯತ್ನ ಮಾಡುತ್ತದೆ. ಮೊಬೈಲ್ ಈಗ ವಿಶ್ವವ್ಯಾಪಿ ಹಾಗೆಯೇ ಮಕ್ಕಳಿಂದ ಮುದುಕರವರೆಗೂ ಅನಿವಾರ್ಯ ಎನ್ನುವಂತಾಗಿದೆ. ಆದ್ದರಿಂದ ಅದನ್ನು ಯಾವ ಕೆಲಸಕ್ಕೆ ಎಷ್ಟು ಬೇಕೋ ಅಷ್ಟನ್ನು ಬಳಸಿಕೊಂಡಲ್ಲಿ ಅದು ನಮಗೆ ಉಪಯೋಗದ ವಸ್ತುವಾಗುತ್ತದೆ. ಅತಿಯಾಗಿ ಬಳಸಿದಲ್ಲಿ ಅದು ಶಾಪವೂ ಆಗಬಹುದು. ಇವುಗಳಿಂದ ಹೊರಬರಲು ವಚನಮಾರ್ಗ ಹಿಡಿಯುವುದು ಹಿಡಿಸುವುದು ತುರ್ತು ಅಗತ್ಯವಿದೆ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯರು, ವಚನಕಮ್ಮಟ ಪರೀಕ್ಷೆಯ ಈ ಮೊದಲು ನಿರ್ದೇಶಕರೂ ಆಗಿದ್ದ ಪ್ರೊ. ಸಿ.ಎಂ. ಚಂದ್ರಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕಳೆದ 24 ವರ್ಷಗಳ ಹಿಂದೆ ವಚನ ಕಮ್ಮಟ ಪರೀಕ್ಷೆಗಳ ಮೂಲಕ ನಾಡಿನಾದ್ಯಂತ ಬಸವಾದಿ ಶಿವಶರಣರ ವಚನ ಸಾಹಿತ್ಯದ ಅರಿವು ಮೂಡಿಸುವ ಕೆಲಸ ಆರಂಭವಾಯಿತು.


ವಚನಗಳ ಮೂಲಕ ಪ್ರೇರಣೆಗೊಂಡಂತಹ ಲೇಖಕರು, ಸಾಹಿತಿಗಳು, ಕವಿಗಳು ಮೌಲಿಕ ಸಾಹಿತ್ಯ ಕೃತಿಗಳನ್ನು ನೀಡಿರುವುದನ್ನು ವಚನಕಮ್ಮಟ ಪರೀಕ್ಷೆಗಳಿಗೆ ಪಠ್ಯವಾಗಿ ಇಡಲಾಗಿದೆ. ಇಂತಹ ಪರೀಕ್ಷೆ ರಾಜ್ಯದ ಸರ್ಕಾರಿ, ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಉತ್ತಮ ರೀತಿಯ ಸಹಕಾರ ದೊರೆತು ಪರೀಕ್ಷೆ ತೆಗೆದುಕೊಳ್ಳುವವರ ಸಂಖ್ಯೆ ಲಕ್ಷಕ್ಕೆ ಬಂತು ನಿಂತಿತು. ರಾಜ್ಯವಲ್ಲದೇ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಿಗೂ ಉತ್ತರಿಸಿದ್ದು ಉಲ್ಲೇಖನೀಯ ಎಂದು ಹೇಳಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು ಮಾತನಾಡಿ, ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಶರಣರು ಸ್ವರ್ಗ – ನರಕಗಳನ್ನು ನಾವಾಡುವ ಮಾತಿನಲ್ಲೆ ಕಲ್ಪಿಸಿದ್ದಾರೆಂದರೆ ಅವರು ಎಂತಹ ಜೀವನ ಸಾಗಿಸಿರಬೇಕೆಂಬುದಕ್ಕೆ ಅವರು ನಡೆ-ನುಡಿಗಳೆ ಸಾಕ್ಷಿ. ಆ ವಚನ ಸಾಹಿತ್ಯದಲ್ಲಿ ಮನುಷ್ಯರಿಗೆ ಸುಖ ಶಾಂತಿ ನೆಮ್ಮದಿಯ ದಾರಿ ತೋರಿಸುತ್ತದೆ ಎಂದು ನುಡಿದರು.


ರಾಜ್ಯದ ಬಹುತೇಕ ಜಿಲ್ಲೆಗಳಿಂದ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗಿನ ವಿದ್ಯಾರ್ಥಿಗಳು ಅವರೊಂದಿಗೆ ಸಂಯೋಜಕರು ಆಗಮಿಸಿದ್ದರು. ಜಮುರಾ ಕಲಾ ಲೋಕದ ಕಲಾವಿದರ ವಚನ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭಕ್ಕೆ ವಚನಕಮ್ಮಟ ಪರೀಕ್ಷೆಗಳ ನಿರ್ದೇಶಕ ಎಂ. ವೀರಭದ್ರಪ್ಪ ಸ್ವಾಗತಿಸಿದರು. ಶಿಕ್ಷಕಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಉಪನ್ಯಾಸಕ ಟಿ.ಪಿ.ಜ್ಞಾನಮೂರ್ತಿ ಅವರು ಶರಣು ಸಮರ್ಪಣೆ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks