ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಮುಂದುವರೆದಿದೆ. ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಮಾತಿನ ಗುದ್ದಾಟ ಗದ್ದಲ ನಡೆದಿದೆ.
ವಿಧಾನಸಭೆಯಲ್ಲಿ ಚರ್ಚೆ ಮುಂದುವರೆಸಿದ ಹೆಚ್ ಡಿ ಕುಮಾರಸ್ವಾಮಿ ಅವರು, ಎತ್ತಿನಹೊಳೆ ಆಗುತ್ತೋ ಅಥವಾ ಕಾಂಟ್ರಾಕ್ಟರ್ ಜೇಬು ತುಂಬುತ್ತೋ..? ಎಂದು ಪ್ರಶ್ನಿಸಿದ್ದಾರೆ. ಆಲಮಟ್ಟಿ ಡ್ಯಾಂ ಕಟ್ಟಿದ್ದು ಯಾರು..? ಆದ್ರೆ ಕ್ರೆಡಿಟ್ ನೀವೂ ತೆಗೆದುಕೊಳ್ಳುತ್ತಿದ್ದೀರಾ. ಆಲಮಟ್ಟಿ ಪ್ರಾಜೆಕ್ಟ್ ಮಾಡಲು ಜೆಡಿಎಸ್ ಸರ್ಕಾರವೇ ಬರಬೇಕಾಯಿತು. ನೀವೂ ನಿದ್ದೆ ಮಾಡುತ್ತಿದ್ರಿ ಎಂದು ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ.
ಈ ವೇಳೆ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ವಿಪಕ್ಷ ಉಪನಾಯಕ ಯುಟಿ ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಪಕ್ಷ ಮತ್ತೊಂದು ಪ್ರತಿಪಕ್ಷದ ಬಗ್ಗೆಯೇ ಮಾತಾಡ್ತಿರೋದು ಇದೇ ಮೊದಲು. ಪ್ರತಿಪಕ್ಷ ಯಾವತ್ತಿಗೂ ಆಡಳಿತ ಪಕ್ಷದ ಬಗ್ಗೆ ಮಾತನಾಡಬೇಕು ಎಂದು ವಿವರಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕರಿಗೆ ಹಿರಿಯ ಸದಸ್ಯ ರಮೇಶ್ ಕುಮಾರ್ ಸೂಚನೆ ನೀಡಿದ್ದಾರೆ. ವಿಪಕ್ಷ ನಾಯಕರಿಲ್ಲ. ಹೀಗಾಗಿ ಉಪನಾಯಕ ಮಾತನಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಕುಮಾರಸ್ವಾಮಿ ಅವರು ಸಾರಾಗವಾಗಿ ಮಾತನಾಡಲಿ. ಏನು ಬೇಕಾದರೂ ಮಾತನಾಡಲಿ, ಆವೇಶಕ್ಕೆ ಒಳಗಾಗುವುದು ಬೇಡ ಎಂದು ರಮೇಶ್ ಕುಮಾರ್ ಸೂಚನೆ ನೀಡಿದ್ದಾರೆ.