ಮಕ್ಕಳಿಗೆ ಕೆಮ್ಮು, ನೆಗಡಿ ಅನ್ನೋದು ಸರ್ವೇ ಸಾಮಾನ್ಯ. ವಾತಾವರಣದ ಮೇಲೂ ಕಾಯಿಲೆಗಳು ಡಿಪೆಂಡ್ ಆಗುತ್ತವೆ. ಮಕ್ಕಳಿಗೆ ಕೆಮ್ಮು ಕಾಣಿಸಿಕೊಂಡ ಕೂಡಲೇ ತಾಯಂದಿರು ಸಿರಪ್ ಅನ್ನು ಹಾಕಿ ಬಿಡುತ್ತಾರೆ. ಆದ್ರೆ ಆ ಸಿರಪ್ ಮಕ್ಕಳ ಜೀವಕ್ಕೆ ಅಪಾಯ ಅನ್ನೋದು ಈಗ ಬಯಲಾಗಿದೆ. ಕೇಂದ್ರ ಸರ್ಕಾರ ಪೋಷಕರಿಗೆ ಎಚ್ಚರಿಕೆಯನ್ನ ನೀಡಿದೆ.
ಮಧ್ಯಪ್ರದೇಶ, ರಾಜಸ್ಥಾನದಲ್ಲಿ 12 ಮಕ್ಕಳ ಸಾವುನ ಪ್ರಕರಣ ಆತಂಕವನ್ನ ಸೃಷ್ಟಿಸಿದೆ. ಮೂತ್ರಪಿಂಡದ ವೈಫಲ್ಯದಿಂದ ಈ ಹನ್ನೆರಡು ಮಕ್ಕಳು ಸಾವನ್ನಪ್ಪಿವೆ. ಇದಕ್ಕೆಲ್ಲ ಕಾರಣ ಕೆಮ್ಮಿನ ಸಿರಪ್ ಎನ್ನಲಾಗಿದೆ. ಈ ದುರಂತದ ಬೆನ್ನಲ್ಲೇ ಕೇಂದ್ರ ಸರ್ಕಾರ ಎಚ್ಚೆತ್ತಿದ್ದು, ಎಲ್ಲಾ ರಾಜ್ಯಗಳಿಗೂ ಆರೋಗ್ಯ ಇಲಾಖೆ ಸೂಚನೆಯನ್ನ ನೀಡಿದೆ. ಕೆಮ್ಮಿನ ಟಾನಿಕ್ ನೀಡುವಾಗ ಬಹಳ ಎಚ್ಚರಿಕೆ ಇರಲಿ ಎಂದೇ ಹೇಳಿದೆ.
ಆರೋಗ್ಯ ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ ಒಂದಷ್ಟು ಸಲಹೆಗಳನ್ನ ನೀಡಿದೆ. ಪುಟ್ಟ ಮಕ್ಕಳಿಗೆ ಕೆಮ್ಮು ಕಾಣಿಸಿಕೊಂಡರೆ ಅದಾಗಿಯೇ ವಾಸಿಯಾಗುವುದಕ್ಕೆ ಬಿಡಬೇಕು. ಅದರಲ್ಲೂ 5 ವರ್ಷಕ್ಕಿಂತ ಒಳಗಿನ ಮಕ್ಕಳಿಗೆ ಈ ಸೀರಪ್ ಬಳಸಬಾರದು. ಕೆಮ್ಮು ಜಾಸ್ತಿ ಇದೆ, ಕಡಿಮೆ ಆಗ್ತಾನೆ ಇಲ್ಲ ಎಂದಾಗ ವೈದ್ಯರನ್ನ ಸಂಪರ್ಕಿಸಿ, ಸೀರಪ್ ತೆಗೆದುಕೊಳ್ಳಬೇಕು. ಅದು ಸೀಮಿತ ಪ್ರಮಾಣದಲ್ಲಿ ನೀಡಬೇಕಾಗಿರುತ್ತದೆ. ಮಕ್ಕಳ ಆರೈಕೆಯಲ್ಲಿ ಮನೆ ಔಷಧಿಯಲ್ಲದ ಔಷಧಿಗಳನ್ನು ಹೆಚ್ಚು ಬಳಕೆ ಮಾಡಬಾರದು. GMP ಅಡಿಯಲ್ಲಿ ತಯಾರಿಸಿದ ಸುರಕ್ಷಿತ ಔಷಧಿಗಳನ್ನು ಮಾತ್ರ ಸಂಗ್ರಹಿಸಿ ಮಕ್ಕಳಿಗೆ ನೀಡಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸರ್ಕಾರಿ ಆಸ್ಲತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಈ ಸಂಬಂಧ ಮಾಹಿತಿ ನೀಡಿದೆ.

