ಮೂಡದ ಒಮ್ಮತ, ಮುಂದುವರಿದ ಕುತೂಹಲ : ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ

 

 

ಸುದ್ದಿಒನ್

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಸುಮಾರು ಒಂದು ವಾರ ಕಳೆದರೂ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಮಾತ್ರ ಇನ್ನೂ ಮುಂದುವರೆದಿದೆ. ದಿನಗಳು ಕಳೆದಂತೆ ಹೊಸ ಸರ್ಕಾರ ರಚನೆಯ ಸಮಸ್ಯೆಯೂ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಹೆಸರು ಇನ್ನೂ ಅಂತಿಮಗೊಂಡಿಲ್ಲವಾದರೂ ಮೂಲಗಳ ಪ್ರಕಾರ ಮುಖ್ಯಮಂತ್ರಿ ಭಾರತೀಯ ಜನತಾ ಪಕ್ಷದವರೇ ಆಗುವುದು ಬಹುತೇಕ ಖಚಿತವಾಗಿದೆ. ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಸ್ತುತ ತಮ್ಮ ತವರೂರಾದ ಸತಾರಾದಲ್ಲಿದ್ದಾರೆ. ಇಂದು ಸಂಜೆ ವೇಳೆಗೆ ಅವರು ಮುಂಬೈ ತಲುಪುವ ಸಾಧ್ಯತೆ ಇದೆ. ಇಂದು ಸಂಜೆಯೊಳಗೆ ಶಿಂಧೆ ಮುಂಬೈಗೆ ಬರದೇ ಇದ್ದರೆ ಮುಖ್ಯಮಂತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಅಸಮಾಧಾನ ಹೊಂದಿದ್ದಾರೆಂಬುದು ಸ್ಪಷ್ಟವಾಗುತ್ತದೆ.

ಮಹಾರಾಷ್ಟ್ರದ ಉಸ್ತುವಾರಿಯನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದು ಇನ್ನೆರಡು ದಿನದಲ್ಲಿ ಗೊತ್ತಾಗಲಿದೆ. ಶಿಂಧೆ ಗುಂಪಿನ ನಾಯಕ ಸಂಜಯ್ ಶಿರ್ಸತ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಶಿಂಧೆ ಅವರ ಆರೋಗ್ಯ ಹದಗೆಟ್ಟಿದ್ದು, ಅದಕ್ಕಾಗಿಯೇ ಅವರು ತಮ್ಮ ಸ್ವಗ್ರಾಮದಲ್ಲಿ ಉಳಿದುಕೊಂಡಿದ್ದಾರೆ ಎಂದು ಶಿರ್ಸತ್ ಹೇಳಿದ್ದಾರೆ. ಇಂದು ಸ್ವಲ್ಪ ಉತ್ತಮವಾಗಿದೆ. ಸತಾರಾದಿಂದ ಮುಂಬೈಗೆ ಬರುವ ಸಾಧ್ಯತೆ ಇದೆ. ಇಂದು ಸಂಜೆ ಅಥವಾ ನಾಳೆ ಮಹಾಯುತಿ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಸಚಿವ ಸ್ಥಾನದ ಬಗ್ಗೆ ಒಮ್ಮತ ಮೂಡಲಿದೆ. ಗೃಹ ಸಚಿವ ಮತ್ತು ಹಣಕಾಸು ಸಚಿವರ ಸಮಸ್ಯೆಗೆ ಶಿಂಧೆ ಬಣ ಪರಿಹಾರ ಕಂಡುಕೊಳ್ಳಲಿದೆ ಎಂದು ಸಂಜಯ್ ಶಿರ್ಸಾತ್ ನಂಬಿದ್ದಾರೆ.

ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ಮಹಾಯುತಿಯಲ್ಲಿ ಯಾವುದೇ ಒಡಕು ಇಲ್ಲ ಎನ್ನುತ್ತಿದ್ದಾರೆ ಮೂರೂ ಪಕ್ಷಗಳ ಮುಖಂಡರು. ದೆಹಲಿಯಲ್ಲಿ ಸಿಎಂ ಸ್ಥಾನದ ನಿರ್ಧಾರ ಕೈಗೊಳ್ಳಲಾಗುವುದು. ಮತ್ತೊಂದೆಡೆ, ದೇವೇಂದ್ರ ಫಡ್ನವೀಸ್ ಏಕನಾಥ್ ಶಿಂಧೆಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಹಂಗಾಮಿ ಸಿಎಂ ಶಿಂಧೆ ಕಳೆದ 2 ದಿನಗಳಿಂದ ಸ್ವಗ್ರಾಮ ಸತಾರಾದಲ್ಲಿದ್ದರು. ಇಂದು ಮಧ್ಯಾಹ್ನ ವಿಶೇಷ ಹೆಲಿಕಾಪ್ಟರ್‌ನಲ್ಲಿ ಥಾಣೆ ತಲುಪಲಿದ್ದಾರೆ. ಹೀಗಿರುವಾಗ ಏಕನಾಥ್ ಶಿಂಧೆ ಶುಕ್ರವಾರ ಏಕಾಏಕಿ ತಮ್ಮ ಊರು ತಲುಪಿದ್ದಾರೆ. ಶಿಂಧೆ ಅವರು ಸತಾರಾಕ್ಕೆ ತೆರಳಿದ್ದರಿಂದ ಮಹಾರಾಷ್ಟ್ರದಲ್ಲಿ ನಡೆಯಬೇಕಿದ್ದ ಎನ್‌ಡಿಎ ಸಭೆಯನ್ನು ರದ್ದುಗೊಳಿಸಲಾಗಿತ್ತು. ಶಿಂಧೆ ಅವರು ಹಣಕಾಸು ಮತ್ತು ಗೃಹ ಖಾತೆಗಳನ್ನು ಬಯಸಿದ್ದಾರೆ. ಹಿಂದಿನ ಸರಕಾರದಲ್ಲಿ ಗೃಹ ಮತ್ತು ಹಣಕಾಸು ಇಲಾಖೆಗಳೆರಡೂ ಉಪಮುಖ್ಯಮಂತ್ರಿಯವರ ಅಧೀನದಲ್ಲಿತ್ತು. ಸದ್ಯ ಈ ಪ್ರಸ್ತಾವನೆಯನ್ನು ಬಿಜೆಪಿ ತಿರಸ್ಕರಿಸಿದೆ. ಬಿಜೆಪಿ ಅವರಿಗೆ ಉಪಮುಖ್ಯಮಂತ್ರಿ ಜೊತೆಗೆ ಪಿಡಬ್ಲ್ಯೂಡಿ ಆಫರ್ ಮಾಡಿದೆ.

ಮಹಾರಾಷ್ಟ್ರ ಸಿಎಂ ಹೆಸರು ಇನ್ನೂ ಅಂತಿಮಗೊಂಡಿಲ್ಲವಾದರೂ ಬಿಜೆಪಿಯವರೇ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ. ಸಿಎಂ ಅಭ್ಯರ್ಥಿ ಅಂತಿಮವಾಗದಿದ್ದರೂ ಪ್ರಮಾಣ ವಚನ ಸ್ವೀಕಾರದ ದಿನಾಂಕ ಹಾಗೂ ಸ್ಥಳವನ್ನು ಅಂತಿಮಗೊಳಿಸಲಾಗಿದೆ. ಪಕ್ಷದ ಮೂಲಗಳ ಪ್ರಕಾರ ಡಿಸೆಂಬರ್ 5 ರಂದು ಮಧ್ಯಾಹ್ನ 1 ಗಂಟೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಂಬೈನ ಆಜಾದ್ ಮೈದಾನದಲ್ಲಿ ಸಮಾರಂಭ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *