ಸುದ್ದಿಒನ್, ಚಿತ್ರದುರ್ಗ, ಜೂನ್. 12 : ರೂ. 3,342 ಕೋಟಿ ವೆಚ್ಚದ ಚಿಕ್ಕಜಾಜೂರು-ಚಿತ್ರದುರ್ಗ-ಚಳ್ಳಕೆರೆ-ಬಳ್ಳಾರಿವರೆಗಿನ 185 ಕಿ.ಮೀಟರ್ ಉದ್ದದ ರೈಲ್ವೆ ಮಾರ್ಗವನ್ನು ದ್ವಿಪಥ ರೈಲ್ವೆ ಮಾರ್ಗವನ್ನಾಗಿ (ಡಬ್ಲಿಂಗ್) ನಿರ್ಮಾಣ ಮಾಡಲು ರೈಲ್ವೆ ಮಂಡಳಿಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಇಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ವಿಷಯವಾಗಿ ರೈಲ್ವೆ ಸಚಿವರುಗಳಿಗೆ ಸಂಸದ ಗೋವಿಂದ ಕಾರಜೋಳರವರು ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ ಒತ್ತಡ ಹೇರಿದ್ದರು. ಈ ಯೋಜನೆಗೆ ಅನುಮೋದನೆ ನೀಡಿರುವ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದೀಜಿಯವರಿಗೆ ರೈಲ್ವೆ ಸಚಿವರುಗಳಾದ ಶ್ರೀ ಅಶ್ವಿನಿ ವೈಷ್ಣವಿರವರಿಗೆ, ವಿ. ಸೋಮಣ್ಣರವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನತೆಯ ಪರವಾಗಿ ಸಂಸದರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಸದರಿ ಮಾರ್ಗದಲ್ಲಿ 174 ಹೆಕ್ಟೇರ್ ಭೂಸ್ವಾಧೀನದ ಅವಶ್ಯಕತೆಯಿದ್ದು, ಚಿತ್ರದುರ್ಗ ಲೋಸಕಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಳಲ್ಕೆರೆ ತಾಲ್ಲೂಕು, ಅಮೃತಾಪುರ ರೈಲ್ವೆ ನಿಲ್ದಾಣ ಹೊಸ ರೈಲ್ವೆ ನಿಲ್ದಾಣವಾಗಿ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ 29 ಪ್ರಮುಖ ಸೇತುವೆಗಳು 230 ಸಣ್ಣ ಸೇತುವೆಗಳು 12 ಲೆವೆಲ್ ಕ್ರಾಸಿಂಗ್ಗಳು ನಿರ್ಮಾಣವಾಗಲಿವೆ. ಈ ಯೋಜನೆಯನ್ನು 4 ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶವನ್ನು ರೈಲ್ವೆ ಇಲಾಖೆ ಹೊಂದಿದೆ.
ಈ ಮಾರ್ಗವು ಮಂಗಳೂರು ಬಂದರಿನೊಂದಿಗೆ ಹೈದರಾಬಾದ್, ಹೊಸಪೇಟೆ, ಬಳ್ಳಾರಿ, ಕೈಗಾರಿಕಾ ಪ್ರದೇಶಗಳಿಗೆ ಹಾಗೂ ಬಳ್ಳಾರಿ – ಚಿತ್ರದುರ್ಗ ಗಣಿ ಪ್ರದೇಶಗಳಿಗೆ ನೇರ ಸಂಪರ್ಕವನ್ನು ಹೊಂದುವ ಮೂಲಕ ಹೆಚ್ಚು ಉಪಯುಕ್ತವಾಗಲಿದೆ. ಅಲ್ಲದೆ, ಹೈದರಾಬಾದ್, ಬಳ್ಳಾರಿ, ಹಂಪಿ ಸೇರಿದಂತೆ ಹಲವಾರು ಪ್ರವಾಸಿ ತಾಣಗಳಿಗೆ ಹೆಚ್ಚು ಸಹಕಾರಿಯಾಗಲಿದೆ. ಮಂಗಳೂರು ಬಂದರಿಗೆ ಕಬ್ಬಿಣದ ಅದಿರು ಸಾಗಾಟಕ್ಕೆ ಈ ಮಾರ್ಗ ಹೆಚ್ಚು ಅನುಕೂಲಕರವಾಗಲಿದೆ. ಒಟ್ಟಾರೆಯಾಗಿ ಹೈದರಾಬಾದ್ ಕರ್ನಾಟಕವನ್ನು ಮಧ್ಯ ಕರ್ನಾಟಕದೊಂದಿಗೆ ಕರಾವಳಿ ಕರ್ನಾಟಕಕ್ಕೆ ಬೆಸೆಯುವ ಈ ಮಾರ್ಗ ಸಾರ್ವಜನಿಕವಾಗಿ ಹೆಚ್ಚು ಅನುಕೂಲಕರವಾಗಲಿದೆ.



