ಹೊಳಲ್ಕೆರೆ, ಮೇ,11 : ಪ್ರತಿಯೊಬ್ಬರೂ ದುಡಿದು ತಿನ್ನಬೇಕೆಂಬುದು ಬಸವಣ್ಣನವರು ಬೋಧಿಸಿದ ಕಾಯಕ ತತ್ವವನ್ನು ಮತ್ತವರ ವಿಚಾರಧಾರೆಗಳನ್ನು ಗ್ರಾಮೀಣ ಭಾಗದ ಜನ ಹೆಚ್ಚಾಗಿ ಅರ್ಥಮಾಡಿಕೊಂಡು ನಡೆಯಬೇಕಾಗಿದೆ. ಅಂತಹ ವಾತಾವರಣ ನಮ್ಮ ಹಿರಿಯರು ಈಗಿನ ಕಿರಿಯರಿಗೆ ಬಸವಣ್ಣನವರ ವಿಚಾರ ಮತ್ತಿತರ ಧಾರ್ಮಿಕ ತತ್ವಗಳನ್ನು ಬೋಧಿಸುತ್ತಾ ಸಾಗಬೇಕಾಗಿದೆ ಎಂದು ಈಚಘಟ್ಟ ಪಂಚಾಯತಿ ಮಾಜಿ ಉಪಾಧ್ಯಕ್ಷ ಯು.ಎಸ್ ತಿಪ್ಪೇಸ್ವಾಮಿ ಅವರು ವಿನಂತಿ ಮಾಡಿದರು.
ಅವರು ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಮಹಾ ಮಾನವತಾವಾದಿ, ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಪ್ರಯುಕ್ತ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಿಗೆ ಪ್ರಚಾರಕ್ಕೆ ಹೊರಟಿರುವ ಪ್ರಚಾರ ವಾಹನದ ಮೇಲೆ ಇಟ್ಟಿದ್ದ ಬಸವಣ್ಣನವ ಪ್ರತಿಮೆಗೆ ಪುಷ್ಪವೃಷ್ಟಿ ಮಾಡಿ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮಗಳಲ್ಲಿ ಧಾರ್ಮಿಕ ವಾತಾವರಣವಿದ್ದರೆ ಅಲ್ಲಿ ಸದ್ಭಕ್ತಿ, ಮೂಡಿ ಸದಾಚಾರ ,ಸನ್ನಡತೆ ಇರಲು ಸಾಧ್ಯವಿದೆ ಎಂದರು.
ಗ್ರಾಮದ ವೀರಭದ್ರೇಶ್ವರ ಅಭಿವೃದ್ಧಿ ಸೇವಾ ಸಮಿತಿ ಕಾರ್ಯದರ್ಶಿ ಯು.ಎಸ್. ಉಜ್ಜಿನ ಸ್ವಾಮಿ ಅವರು ಮಾತಾಡಿ ಗ್ರಾಮದಲ್ಲಿ ಬಸವಣ್ಣನವರ ಜಯಂತೋತ್ಸವದ ಹಿನ್ನೆಲೆಯಿಂದ ಹಬ್ಬದ ವಾತಾವರಣ ಮನೆ ಮಾಡಿದೆ. ಎರಡು ದಿನಗಳ ಕಾಲ ಬಸವಣ್ಣನವರ ಜಯಂತಿ ನಿಮಿತ್ತ ವಿವಿಧ ಸಾ೦ಸ್ಕೃತಿಕ, ಸಾಹಿತ್ಯಿಕ ವಿಚಾರಗಳ ಜೊತೆಗೆ ವಚನ ಕಂಠಪಾಠ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ನಮ್ಮ ಸಮಾರಂಭಕ್ಕೆ ಬೇರೆ ಗ್ರಾಮಗಳವರು ಬರಲಿ ಎಂದು ಆಮಂತ್ರಣ ನೀಡಿ ,ಪ್ರಚಾರಕ್ಕಾಗಿ ಈ ವಾಹನದಲ್ಲಿ ಬಸವಣ್ಣನವರ ಮೂರ್ತಿಯನ್ನು ಇಟ್ಟು ಕರಪತ್ರ ಹಂಚುತ್ತ ವಾಹನದಲ್ಲಿ ವಚನಗಳನ್ನು ಆಡಿಸುತ್ತಾ ಪ್ರಚಾರ ಮಾಡಲಾಗುತ್ತದೆ ಎಂದರು.
ಗ್ರಾಮದ ರೈತ ಮುಖಂಡ ಸಿ.ಡಿ ಕರಿಬಸಪ್ಪ ಮಾತನಾಡಿ ಗ್ರಾಮ ಒಗ್ಗಟ್ಟಾಗಿರಲು ಹಿರಿಯರ ಹಾಗೂ ಸ್ವಾಮಿಗಳಂತವರ ಮಾತು ಅವಶ್ಯಕತೆ ಇದೆ. ಯುವಕರಿಗೆ ಧಾರ್ಮಿಕ ಸಮಾರಂಭಗಳ ಅವಶ್ಯಕತೆ ಇದೆ. ಅದರಿಂದ ಸನ್ಮಾರ್ಗದತ್ತ ನಡೆಯಲು ಅವಕಾಶವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ಮೂಲೆಮನೆ ವೀರೇಶ್, ಡಿ.ಎಂ. ವೀರಭದ್ರಪ್ಪ ,ನಾಗರಾಜ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಯುವಕರು ಸೇರಿ ಪ್ರಚಾರ ವಾಹನಕ್ಕೆ ಸಹಕರಿಸಿದರು.




