ಬೆಂಗಳೂರು; 18 ವರ್ಷಗಳ ಕಪ್ ಗೆಲ್ಲುವ ಕನಸ್ಸನ್ನ ಆರ್ಸಿಬಿ ತಂಡವೇನೋ ನೆರವೇರಿಸಿತ್ತು. ಆದರೆ ಆ ಸಂತಸವನ್ನ ಹನ್ನೊಂದು ಜನರ ಸಾವು ಮರೆಮಾಚಿದೆ. ಕಪ್ ನೋಡಿ ಖುಷಿಪಡಬೇಕೋ, ಹನ್ನೊಂದ ಜನರ ಕುಟುಂಬದ ಕಣ್ಣೀರು ಕಂಡು ಮರುಕ ಪಡಬೇಕೋ ತಿಳಿಯದ ಸ್ಥಿತಿಯಲ್ಲಿದ್ದಾರೆ ನಾಡಿನ ಜನ. ಈ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸುಮೊಟೋ ಕೇಸನ್ನ ದಾಖಲಿಸಿಕೊಂಡಿತ್ತು. ಇಂದಿಗೆ ವಿಚಾರಣೆ ಮುಂದೂಡಿದ್ದ ಕೋರ್ಟ್ ನತ್ತ ಎಲ್ಲರ ಚಿತ್ತ ನೆಟ್ಟಿದೆ.
ಘಟನೆ ಬಗ್ಗೆ ಸ್ವತಃ ಪಿಐಎಲ್ ದಾಖಲಿಸಿಕೊಂಡಿರುವ ಕೋರ್ಟ್ ಸರ್ಕಾರದ ನಿರ್ಲಕ್ಷ್ಯ, KSCA ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆ ಮಾಡಲಿದೆ. ಕಾಲ್ತುಳಿತ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇಂದು ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಒಂದಷ್ಟು ಪ್ರಶ್ನೆಗಳನ್ನ ಕೇಳಲಿದೆ. ಕೋರ್ಟ್ ನ ಎಲ್ಲಾ ಪ್ರಶ್ನೆಗಳಿಗೂ ಸಿದ್ದರಾಮಯ್ಯ ಸರ್ಕಾರ ಉತ್ತರ ಕೊಡಲು ರೆಡಿಯಾದಂತೆ ಕಾಣಿಸ್ತಾ ಇದೆ.
ಯಾಕಂದ್ರೆ ನಿನ್ನೆಯಷ್ಟೇ ಸಿಎಂ ನಿವಾಸ ಕಾವೇರಿಯಲ್ಲಿ ಮಹತ್ವದ ಸಭೆಯನ್ನ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಈ ಸಭೆಯಲ್ಲಿ ಗೃಹ ಸಚಿವರು, ಅಡ್ವೋಕೇಟ್, ಕಾನೂನು ಸಚಿವರು ಭಾಗಿಯಾಗಿದ್ದರು. ಇಂದು ಕೋರ್ಟ್ ಮುಂದೆ ಸಂಭ್ರಮಾಚರಣೆಯ ವೇಳೆ ಸರ್ಕಾರ ಕೈಗೊಂಡ ಕ್ರಮ, ವಿಧಾನಸೌಧದ ಮೆಟ್ಟಿಲ ಮೇಲೆ ನಡೆಸಿದ ಕಾರ್ಯಕ್ರಮ, ವಿಕ್ಟರಿ ಪರೇಡ್ ಕ್ಯಾನ್ಸಲ್ ಮಾಡಿದ್ದೇಕೆ, ಕ್ರೀಡಾಂಗಣದಲ್ಲಿ ಗೇಟನ್ನ ತೆರೆಯುವ, ಮುಚ್ಚುವ ಅಧಿಕಾರ ಯಾರದ್ದು, ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಅವಘಡ ನಡೆದಿರೋದಲ್ಲ ಹೀಗೆ ಕೋರ್ಟ್ ಹಲವು ವಿಚಾರಗಳನ್ನ ಮನವರಿಕೆ ಮಾಡಿಕೊಡುವುದಕ್ಕೆ ನಿನ್ನೆ ಸಭೆಯಲ್ಲಿ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.



