ಬೆಳಗಾವಿ: ಕಾಂಗ್ರೆಸ್ ಸರ್ಕಾರದಲ್ಲಿ ಸದ್ಯಕ್ಕೆ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಭದ್ರವಾಗಿ ಕೂತಿದ್ದಾರೆ. ಆದರೆ ಸಿಎಂ ಸ್ಥಾನದ ಆಕಾಂಕ್ಷೆ, ನಿರೀಕ್ಷೆ, ಪ್ರಯತ್ನಗಳು ಕಡಿಮೆ ಆಗಿಲ್ಲ. ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಹಾಕಿದ್ದಾರೆ.
ಅಷ್ಟು ಸುಲಭವಾಗಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನವನ್ನು ಬಿಟ್ಟುಕೊಡುವುದಿಲ್ಲ. ವಿಜಯೇಂದ್ರ ದೆಹಲಿಗೆ ಕರೆದುಕೊಂಡು ಹೋಗಿದ್ದರು. ಬಿಜೆಪಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಅಧ್ಯಕ್ಷರು ಮಾತುನಡೆಸಿದ್ದರು. ಅಮಿತ್ ಶಾ ಅವರ ಮುಂದೆಯೂ ಈ ಬಗ್ಗೆ ಬಹಳ ಚರ್ಚೆಯಾಗಿತ್ತು. ಸಿಎಂ – ಡಿಸಿಎಂ ಎಲ್ಲವೂ ವ್ಯಾಪಾರವಾಗಿತ್ತು. ಅಮಿತ್ ಶಾ ಅಂದು ಒಪ್ಪಲಿಲ್ಲ ಎಂದು ಆರೋಪ ಮಾಡಿದ್ದಾರೆ.
ಅಮಿತ್ ಶಾ ಅವರು ಹೇಳಿದ್ದು ಇಷ್ಟೇ. ಡಿಕೆ ಶಿವಕುಮಾರ್ ಜೋಡಿ ಸರ್ಕಾರ ಮಾಡುವುದು ಬೇಡ ಅಂತ. ಇದು ಅಧಿಕೃತವಾಗಿ ನಮ್ಮ ಬಿಜೆಪಿಯ ಸಂಸದರೇ ಹೇಳಿದ ಮಾತು. ಅಮಿತ್ ಶಾ ಅವರ ಮುಂದೆ ಚರ್ಚೆಯಾಗಿದೆ. ಅವರು ಒಪ್ಪಿಲ್ಲ. ಅದಕ್ಕೇನೆ ಪ್ರಹ್ಲಾದ್ ಜೋಶಿ ಅವರು ಒಂದು ಸ್ಟೇಟ್ಮಂಟ್ ಕೊಟ್ಟರು ಮೊನ್ನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆಗೆ ಸರ್ಕಾರ ಮಾಡುವುದಿಲ್ಲ. ಯಾಕಂದ್ರೆ ಈ ವ್ಯಾಪಾರ ನಡೆದಿತ್ತಲ್ಲ ಅದಕ್ಕೆ ಆ ಮಾತನ್ನ ಹೇಳಿದ್ರು. 13 ಕಿಲೋ ಮೀಟರ್ ದೂರದಲ್ಲಿ ಹೋಗಿ ಊಟ ಮಾಡವ್ರಲ್ಲ. ಹಂಗೆ ಅಲ್ಲಿ 28.5 ಕಿಲೋ ಮೀಟರ್ ದೆಹಲಿಯಲ್ಲಿ, ನೊಯ್ಡಾ ರಸ್ತೆಯಲ್ಲಿ ಫೈವ್ ಸ್ಟಾರ್ ಹೊಟೇಲ್ ನಲ್ಲಿ ಮುಖ್ಯಮಂತ್ರಿ ಆಗಬೇಕು ಅಂತ ಮೀಟಿಂಗ್ ಮಾಡಿದರು. ಬಿಜೆಪಿ ಅಧ್ಯಕ್ಷ – ಕಾಂಗ್ರೆಸ್ ಅಧ್ಯಕ್ಷ. ನಡೆದಿತ್ತು, ಆದರೆ ಫೇಲ್ ಆಗ್ಯಾದ. ಅದಕ್ಕೆ ಸುಮ್ಮ ಬಂದ್ ಕುಂತರಾ. ಈಗ ಇಲ್ಲಿಯೇ ಏನಾದ್ರೂ ಮಾಡಬೇಕು ಅಂತಿದ್ದಾರೆ ಎಂದು ಹೊಸ ಬಾಂಬ್ ಹಾಕಿದ್ದಾರೆ.


