ಹಾಸನ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಇದಕ್ಕೆ ಬಿಜೆಪಿಗರ ವಿರೋಧವಿದ್ರೆ, ಸಂಸದ ಯದುವೀರ್ ಒಡೆಯರ್ ಅವರು ಸ್ಚಾಗತ ಮಾಡಿದ್ದಾರೆ. ಈ ಬಗ್ಗೆ ಬಾನು ಮುಷ್ತಾಕ ಅವರು ಹಾಸನದಲ್ಲಿ ಮಾತನಾಡಿದ್ದಾರೆ.
ನಾನು ಇದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಕೋಟ್ಯಾಂತರ ಕನ್ನಡಿಗರು ಪ್ರೀತಿ, ಅಭಿಮಾನ ಕೊಡ್ತಾ ಇದ್ದಾರೆ. ಒಬ್ಬರು ಅಥವಾ ಇಬ್ಬರ ನೆಗೆಟಿವಿಟಿಗೆ ನಾನ್ಯಾಕೆ ಪ್ರತಿಕ್ರಿಯೆ ನೀಡಬೇಕು. ಜನರೇ ಆ ಪ್ರತಿಕ್ರಿಯೆಗಳನ್ನ ಕೊಡ್ತಾ ಇದ್ದಾರೆ. ನಾನು ಕೊಡಬೇಕಾದ್ದ ಅಗತ್ಯವಿಲ್ಲ. ರಾಜಕೀಯವನ್ನ ಮಾಡಬೇಕು. ವಿರೋಧ ಪಕ್ಷ, ಆಡಳಿತ ಪಕ್ಷ ಅಂತ ಇರಬೇಕು. ಯಾವ ವಿಚಾರದಲ್ಲಿ ರಾಜಕೀಯ ಮಾಡಬೇಕು, ಮಾಡಬಾರದು ಅನ್ನೋ ಪ್ರಜ್ಞೆ ಸಕ್ರೀಯ ರಾಜಕಾರಣಿಗಳಿಗೆ ಇರಬೇಕು.
ಹಾಗೇ ಬಿಜೆಪಿಯಲ್ಲಿ ಮೈಸೂರಿನ ಯದುವೀರ್ ಅವರಂತಹ ಸಂತತಿ ಜಾಸ್ತಿಯಾಗಲಿ ಎಂದು ಇಷ್ಟಪಡ್ತೀನಿ ನಾನು. ಒಂದು ಸಮತೋಲನದಿಂದ ಒಂದು ವಿಷಯವನ್ನ ಅನ್ವೇಷಿಸಿ, ಯಾವುದೇ ರೀತಿಯಲ್ಲಿಯೂ ದ್ವಂದ್ವ ಸೃಷ್ಟಿಸದಂತೆ ಹೇಳಿಕೆಗಳನ್ನ ನೀಡುವುದು, ಅಂತಹ ವಿದ್ಯಾವಂತ ಹಾಗೂ ಸುಸಂಸ್ಕೃತ ಮನಸ್ಸುಗಳಿಗೆ ಮಾತ್ರ ಸಾಧ್ಯ. ಬೂಕರ್ ಅಂತಹ ಬಹುಮಾನ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಿಗಬೇಕಾದರೆ ಅದು ಸುಲಭದ ಮಾತಲ್ಲ. ಅದನ್ನು ಸಹ ಕೆಲವರು ಕೇವಲವಾಗಿ ಮಾತಾಡ್ತಾ ಇದ್ದಾರೆ. ಅದರ ಬಗ್ಗೆ ನನಗೇನು ಬೇಜಾರಿಲ್ಲ. ಅವರವರ ಮಟ್ಟಕ್ಕೆ ಅವರು ಮಾತಾಡ್ತಾರೆ.
2023 ನೇ ಇಸವಿಯಲ್ಲಿ ನಾನು ಜನಸಾಹಿತ್ಯ ಸಮ್ಮೇಳನದಲ್ಲಿ ಆಡಿದ್ದಂತ ಕೆಲವು ಮಾತುಗಳನ್ನು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಹಾಕಿ, ಅದನ್ನು ಸಹ ತನ್ನ ವಿರುದ್ಧ ಬಹು ದೊಡ್ಡ ಆರೋಪವೆಂದು ಬಿಂಬಿಸುತ್ತಾ ಇದ್ದಾರೆ. ಅಂದು ನಡೆದ ಸಮ್ಮೇಳನದಲ್ಲಿಕನ್ನಡ ಸಾಹಿತ್ಯ ಪರಿಷತ್ ಮೂಲಕ ಮುಸ್ಲಿಂ ಸಾಗಿತಿಗಳನ್ನು ದೂರವಿಟ್ಟಿದ್ದಕ್ಕಾಗಿ ಪ್ರತಿರೋಧವಾಗಿ ಆ ಒಂದು ಸಮ್ಮೇಳನವನ್ನ ಆಯೋಜನೆ ಮಾಡಲಾಗಿತ್ತು. ನನಗೆ ನೇರವಾಗಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಮುಸ್ಲಿಂ, ದಲಿತರು, ಮಹಿಳೆಯರ ಪರವಾಗಿ ನಾನು ಮಾತನಾಡಬೇಕಿತ್ತು. ಮಾತನಾಡಿದ್ದೀನಿ. ಅದರಲ್ಲಿ ಹೇಳಿರುವಂತ ಎಲ್ಲವೂ ಅರ್ಥವಾಗಿರಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ.






