ಕಳಂಕಿತರು, ಭ್ರಷ್ಟಾಚಾರಿಗಳಿಗೆ ಕಾಂಗ್ರೆಸ್ ನಾಯಕರುಗಳನ್ನು ಟೀಕಿಸುವ ಹಕ್ಕಿಲ್ಲ : ರಮೇಶ್‍ಬಾಬು

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ಕಳಂಕಿತರು, ಭ್ರಷ್ಠಾಚಾರಿಗಳು ಆರ್.ಎಸ್.ಎಸ್.ನವರನ್ನು ಮೆಚ್ಚಿಸಲು ಕಾಂಗ್ರೆಸ್ ನಾಯಕರುಗಳನ್ನು ಟೀಕೆ ಮಾಡುವುದರ ಬದಲಿಗೆ ಜನಪರ ವಿಚಾರಗಳನ್ನು ಮುಂದಿಟ್ಟುಕೊಂಡು ಮಾತನಾಡಿದರೆ ರಾಜ್ಯದ ಜನ ಗೌರವ ನೀಡುತ್ತಾರೆಂದು ವಿಧಾನಪರಿಷತ್ ಸದಸ್ಯ ರಮೇಶ್‍ಬಾಬು ಕುಟುಕಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶನಿವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಒಳ ಗುಂಪುಗಾರಿಕೆಯಿಂದ ಕಂಗೆಟ್ಟಿರುವ ಬಿಜೆಪಿಯವರು ಕಾಂಗ್ರೆಸ್ ವಿರುದ್ದ ಧ್ವನಿ ಎತ್ತುವ ಶಕ್ತಿ ಕಳೆದುಕೊಂಡಿದ್ದಾರೆ. ಪ್ರಿಯಾಂಕಾಗಾಂಧಿರವರ ಒಂದು ಪತ್ರಕ್ಕೆ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಇವರುಗಳು ತಲ್ಲಣಗೊಂಡಿದ್ದಾರೆ. ಶೋಭಾ ಕರಂದ್ಲಾಜೆ ಕೇಂದ್ರ ಸಚಿವರಾಗಿ ಎರಡು ವರ್ಷಗಳಾಗಿದೆ ರಾಜ್ಯಕ್ಕೆ ಒಂದು ರೂ.ಅನುದಾನ ತರುವ ಪ್ರಯತ್ನ ಮಾಡಿಲ್ಲ. ರವಿಕುಮಾರ್ ಮಹಿಳಾ ಅಧಿಕಾರಿಗಳ ಬಗ್ಗೆ ಏಕವಚನದಿಂದ ಮಾತನಾಡುತ್ತಾರೆ. ನೀಲಿ ಚಿತ್ರದ ನಾಯಕ ಸಿ.ಸಿ.ಪಾಟೀಲ್ ಇವರುಗಳಿಗೆ ಕಾಂಗ್ರೆಸ್ ನಾಯಕರುಗಳ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆಯಿಲ್ಲ. ನೋಟು ಎಣಿಸುವ ಮಿಷನ್ ಇಟ್ಟುಕೊಂಡಿರುವ ಕೆ.ಎಸ್.ಈಶ್ವರಪ್ಪ ಅಧಿಕಾರ ಕಳೆದುಕೊಂಡಿದ್ದಾರೆ. ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಸವನಗೌಡ ಪಾಟೀಲ್ ಯತ್ನಾಳ್ ಇವರುಗಳು ಮೊದಲು ತಮ್ಮ ಹಿನ್ನೆಲೆ, ನಡತೆಯನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

2500 ಎಕರೆ ಭೂಮಿಯನ್ನು ಅಕ್ರಮವಾಗಿ ವಿತರಿಸಿರುವ ಆರ್.ಅಶೋಕ್, ಸಿ.ಟಿ.ರವಿ ಇವರುಗಳಿಗೆ ಪ್ರಿಯಾಂಕಖರ್ಗೆ ಬಗ್ಗೆ ಮಾತನಾಡುವ ಅಧಿಕಾರವಿಲ್ಲ. ಪ್ರತಾಪ ಸಿಂಹನಿಗೆ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದ ರಮೇಶ್‍ಬಾಬು ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಜನಪರ ಕೆಲಸಗಳಾಗುತ್ತಿರುವುದನ್ನು ಕೋಮುವಾದಿ ಬಿಜೆಪಿ.ಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲವೆಂದರು.
ಐದು ವರ್ಷಗಳ ಹಿಂದೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನಖರ್ಗೆ
ಸುರ್ಜೆವಾಲಾ, ವೇಣುಗೋಪಾಲ್, ರಾಹುಲ್‍ಗಾಂಧಿ ಇವರುಗಳಿಂದ ನನಗೆ ವಿಧಾನಪರಿಷತ್ ಸದಸ್ಯತ್ವ ಸ್ಥಾನ ಸಿಕ್ಕಿದೆ. ಪದವೀಧರ ಕ್ಷೇತ್ರದ ಚುನಾವಣೆಗೆ ಈಗಾಗಲೆ  ನೊಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಪಕ್ಷದ ಪರವಾಗಿರುವ ಪದವೀಧರರನ್ನು ಗುರುತಿಸಿ ನೊಂದಣಿ ಮಾಡಿಸುವಂತೆ ಕಾರ್ಯಕರ್ತರು ಹಾಗೂ ಮುಖಂಡರುಗಳಲ್ಲಿ ರಮೇಶ್‍ಬಾಬು ಮನವಿ ಮಾಡಿದರು.

ರಾಜ್ಯದ ಪಂಚ ಗ್ಯಾರೆಂಟಿಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ತಲುಪುತ್ತಿದೆ. ನಮ್ಮ ಪಕ್ಷದ ಯೋಜನೆಗಳನ್ನು ಬಿಜೆಪಿ.ಯವರು ಕಾಪಿ ಮಾಡುತ್ತಿದ್ದಾರೆ. ಪ್ರತಿ ವರ್ಷ ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ರೂ.ಗಳ ವಿವಿಧ ಯೋಜನೆಗಳನ್ನು ನೇರವಾಗಿ ಜನರಿಗೆ ತಲುಪುತ್ತಿದೆ. ಮೂವತ್ತು ಸಾವಿರ ಕೋಟಿ ರೂ.ಗಳನ್ನು ರೈತರ ವಿದ್ಯುತ್‍ಗೆ ಕೊಡುತ್ತಿದೆ ಎಂದರು.

ಮುಂದಿನ ಫೆಬ್ರವರಿ ಇಲ್ಲವೆ ಮಾರ್ಚ್‍ನಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿದೆ. ಪಕ್ಷದ ಕಾರ್ಯಕರ್ತರು ಈಗಿನಿಂದಲೆ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ವಿನಂತಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ಎನ್.ಡಿ.ಕುಮಾರ್, ಬಾಲಕೃಷ್ಣಸ್ವಾಮಿ, ಲಕ್ಷ್ಮಿಕಾಂತ್, ಅಲ್ಲಾಭಕ್ಷಿ, ಸೈಯದ್ ಖುದ್ದೂಸ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.

Share This Article
Enable Notifications OK No thanks