ಕೊಪ್ಪಳ; ಜಾತಿ ಗಣತಿ ವರದಿಯ ಅಂಕಿ ಅಂಶಗಳು ಬಹಿರಂಗವಾದೊಡನೆ ಬೆಂಕಿಯ ಜ್ವಾಲೆ ಹಬ್ಬಿದೆ. ಇದೀಗ ಜಯ ಮೃತ್ಯುಂಜಯ ಸ್ವಾಮೀಜಿ ಕೂಡ ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಕಾಂತರಾಜ ವರದಿ ಅವೈಜ್ಞಾನಿಕವಾಗಿ. ಪ್ರಬಲವಾದ ಲಿಂಗಾಯತರ ರಾಜಕೀಯವನ್ನು ಮುಗಿಸಲು ಮಾಡಿರುವ ತಂತ್ರವಿದು ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ವರದಿ ವೈಜ್ಞಾನಿಕವಾಗಿದ್ದರೆ ನಾವೂ ಒಪ್ಪಿಕೊಳ್ಳಬಹುದಿತ್ತು. ಈ ಜಾತಿಗಣತಿ ವರದಿಯನ್ನ ಎಲ್ಲಿಯೋ ಕುಳಿತು ತಯಾರಿಸಿದ್ದಾರೆ. ಸಿದ್ಧಗಂಗಾ ಮಠದ ಸ್ವಾಮಿಗಳು ಕೂಡ ನಮ್ಮ ಮಠಕ್ಕೆ ವರದಿ ಬಂದಿಲ್ಲ ಅಂತ ತಿಳಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ಣಯಕ್ಕೆ ನನ್ನ ಬೆಂಬಲವಿದೆ. ಪಂಚಮಸಾಲಿ ಸಮಾಜವೇ 1.30 ಕೋಟಿ ಜನಸಂಖ್ಯೆ ಇದೆ. ಆದರೆ ಅದನ್ನೇ ಕೇವಲ 16 ಲಕ್ಷ ಎಂದು ತೋರಿಸಿದ್ದಾರೆ. ಸಿದ್ದರಾಮಯ್ಯ ಅವರು ಈ ವರದಿಯನ್ನು ತಿರಸ್ಕರಿಸಬೇಕು. ಮರು ಸಮೀಕ್ಷೆಗೆ ಒಪ್ಪಿಗೆ ನೀಡಬೇಕು ಎಂದಿದ್ದಾರೆ.
ಲಿಂಗಾಯತ ಸಮುದಾಯದ ಶಾಸಕರು ಎಲ್ಲರು ಒಗ್ಗಟ್ಟಾಗಿ ಸಭೆ ನಡೆಸಲಿ. ಈ ವರದಿಯಿಂದ ಸಮಾಜದಲ್ಲಿ ವೈಮನಸ್ಸು ಬೆಳೆಯುತ್ತಿದೆ. ಇದು ಸಮೀಕ್ಷೆ ಗಣತಿ ಅಲ್ಲ. ಈ ವರದಿ ತಿರಸ್ಕರಿಸಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲಿ. ಲಿಂಗಾಯತರು ಒಳಪಂಗಡ ಬಿಟ್ಟು ಒಗ್ಗಟ್ಟಾಗಿರಿ. ಸಮಯ ಬಂದರೆ ಸಚಿವರು, ಶಾಸಕರು ರಾಜೀನಾಮೆ ಕೊಡುವುದಕ್ಕೂ ಸಿದ್ಧರಾಗಿರಿ. ಸಮಾಜಕ್ಕಾಗಿ ನೀವೂ ಧ್ವನಿ ಎತ್ತದೆ ಇದ್ದರೆ ಸಮಾಜ ನಿಮ್ಮನ್ನು ಕ್ಷಮಿಸುವುದಿಲ್ಲ. ನಾಳೆ ಪಕ್ಷದಲ್ಲಿ ಟಿಕೆಟ್ ಕೇಳುವಾಗಲೂ ಜನಸಂಖ್ಯೆ ಮಖ್ಯವಾಗುತ್ತದೆ. ಸಮುದಾಯಕ್ಕೆ ಅನ್ಯಾಯವಾದಾಗ ಧ್ವನಿ ಎತ್ತಬೇಕು ನೀವೆಲ್ಲಾ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಅವರು ಲಿಂಗಾಯತ ಸಮುದಾಯದ ಮಂದಿಗೆ ಕರೆ ನೀಡಿದ್ದಾರೆ.




