ಸಾಮಾನ್ಯನಾಗಿದ್ದ ಮಹರ್ಷಿಗಳು ಅಸಾಮಾನ್ಯನಾಗಿದ್ದು ವಿಕಾಸದ ಆದಿ : ಗಂಗಾಧರ್

2 Min Read

ಸುದ್ದಿಒನ್, ಚಿತ್ರದುರ್ಗ. ಅಕ್ಟೋಬರ್. 07 : ಸಾಮಾನ್ಯನಿಂದ ಹಿಡಿದು ಅಸಾಮಾನ್ಯ ವ್ಯಕ್ತಿಯಾಗುವ ಹಿನ್ನಲೆಯಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳು ನಡುವಿನ ದಾರಿಯ ಏಳು ಬೀಳುಗಳು ನಂತರ ಕೊನೆಗೆ ಸಿಗುವ ಆತ್ಯಂತಿಕ ಅನುಭವದ ಸಾರದ ಮೊತ್ತದ ರೂಪವೇ ಮಹರ್ಷಿ ವಾಲ್ಮೀಕಿಗಳು ಎಂದು ಉಪನ್ಯಾಸಕರಾದ ಗಂಗಾಧರ್ ಅವರು ಅಭಿಪ್ರಾಯಪಟ್ಟರು.

ನಗರದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಅವರ ಜಯಂತಿಯಲ್ಲಿ ಮಹರ್ಷಿಗಳ ಭಾವ ಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಮಾತನಾಡಿದರು.

ಗ್ರಂಥಪಾಲಕ ವೀರಯ್ಯ ಎಂ.ಮಾತನಾಡಿ ಯಾವುದೇ ಒಬ್ಬ ಪುಣ್ಯ ಪುರುಷರ ಜೀವನ ಮೌಲ್ಯಗಳು ಒಂದು ಜಾತಿಗೆ ಸೀಮಿತವಲ್ಲ. ಅವು ಎಲ್ಲ ಕಾಲಕ್ಕೂ ಮತ್ತೆ ಸರ್ವಜನಾಂಗಕ್ಕೂ ಅನುಸರಿಸಲು ಯೋಗ್ಯವಾಗಿವೆ. ಹಾಗೇಯೇ ವಾಲ್ಮೀಕಿಗಳು ತಮ್ಮ ವ್ಯಕ್ತಿತ್ವ ರೂಪಿಸಿಕೊಂಡು ನಂತರ ಸಮಾಜ ಸುಧಾರಣೆಯ ಮಾರ್ಗದ ಮಹಾಕಾವ್ಯ ಬರದರೆಂದು ಹೇಳಿದರು.

ಕಾಲೇಜಿನ ಬೋಧಕ ಕೆ. ಸುರೇಶ್ ಮಾತನಾಡಿ ರತ್ನಾಕರ ಎನ್ನುವ ವ್ಯಕ್ತಿ ತನ್ನಲ್ಲಿ ಆದ ಘಟನೆಗಳನ್ನು ನೆನಸಿಕೊಳ್ಳುತ್ತ ಮುಂದೆ ಇಂಥವುಗಳು ಆಗಬಾರದೆಂದು ತಪಸ್ಸಿನಲ್ಲಿ ಮಗ್ನರಾಗಿದ್ದ ದಿನಗಳ ಸಂದರ್ಭದಲ್ಲಿ ಸುತ್ತಲೂ ಹುತ್ತ ಬೆಳೆದ ಕಾರಣ ಅವರಿಗೆ ವಾಲ್ಮೀಕಿ ಎಂದು ಹೆಸರು ಬಂತೆಂದು ಸ್ಮರಿಸಿಕೊಂಡರು.

ಕಾಲೇಜಿನ ಅಧೀಕ್ಷಕ ಸಿ. ಎನ್ .ಮೋಹನ್ ಮಾತನಾಡಿ ಪ್ರಪಂಚದ ಎಲ್ಲ ದಾರ್ಶನಿಕರು ತಮ್ಮ ಬದುಕಿನಲ್ಲಿ ಕಷ್ಟದ ಹಾದಿಯನ್ನ ಕ್ರಮಿಸಿಯೇ ಸಮಾಜ ಸುಧಾರಣೆಯತ್ತ ಸಾಗಿದ್ದಾರೆ.ಮಹರ್ಷಿಗಳೂ ಸಹ ತಮ್ಮ ಜೀವನದಲ್ಲಿ ನೋವು ಸಂಕಷ್ಟ ಎದುರಿಸಿ ಕಡೆಯಲ್ಲಿ ಎಚ್ಚೆತ್ತುಕೊಂಡು ಉತ್ತಮ ಮಾರ್ಗ ಕಂಡುಕೊಂಡು ಸಮಾಜಕ್ಕೆ ಸತ್ಪಥವನ್ನು ತೋರಿಸಿದ್ದಾರೆಂದರು.

ಕಚೇರಿ ಸಿಬ್ಬಂದಿ ಲಿಂಗರಾಜು ಮಾತನಾಡಿ ಮಹಾಮಹಿಮರ ಜೀವನ ಆದರ್ಶದ ಮೌಲ್ಯಗಳನ್ನು ನಾವು ಕೇವಲ ಆಡಂಬರದ, ತೋರಿಕೆಯ ರೀತಿಯಲ್ಲಿ ಆಚರಿಸುವುದಕ್ಕಿಂತ ಅವರ ನೈಜ ವಿಚಾರಗಳನ್ನು ಪ್ರಚಾರ ಮತ್ತು ಪ್ರಸಾರ ಮಾಡಬೇಕಿದೆ ಎಂದು ಹೇಳಿದರು.

ಮತ್ತೋರ್ವ ಕಾಲೇಜಿನ ಕಛೇರಿ ಸಿಬ್ಬಂದಿ ರುದ್ರಮೂರ್ತಿ ಎಂ. ಜೆ ಮಾತನಾಡಿ ಈ ನಾಡಿಗೆ ತಮ್ಮ ತ್ಯಾಗ ಬಲಿದಾನದಿಂದ ಅಮೂಲ್ಯ ಕೊಡುಗೆಗಳನ್ನು ನೀಡಿದಂತಹ ಮಹಾಮಹಿಮರ ಕೆಲವರ ಜೀವನದಲ್ಲಿಯೂ ತಪ್ಪುಗಳು ಆಗಿವೆ. ಅವುಗಳು ಮತ್ತೆ ಪುನರಾವರ್ತನೆ ಆಗದಂತೆ ನೋಡಿಕೊಂಡು ಜೀವನದಲ್ಲಿ ಜಾಗೃತಿಯಿಂದ ಮುನ್ನಡೆದು ಈ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಅಂತಹವರ ಜಯಂತಿ ಸ್ಮರಣೆ ಕೇವಲ ಔಪಚಾರಿಕವಾಗಿರದೆ ಸಾಧ್ಯವಾದಷ್ಟು ನಮ್ಮ ಜೀವನದಲ್ಲಿ ಅವರ ಮಾರ್ಗದರ್ಶನ ನಡೆ ನುಡಿ ಅಳವಡಿಸಿಕೊಂಡರೆ ಜಯಂತಿಗಳಿಗೆ, ಸ್ಮರಣೆಗೆ ಅರ್ಥ ಬರುತ್ತದೆ ಎನ್ನುವ ಕಳಕಳಿಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಬಾಬು.ಬಿ ಹಾಗೂ ಕೆಲ ವಿದ್ಯಾರ್ಥಿಗಳು ಹಾಜರಿದ್ದರು.

Share This Article