ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 31 : ಸೋಶಿಯಲ್ ಮೀಡಿಯಾ, ಫೇಸ್ಬುಕ್, ಕೆಲವು ದೃಶ್ಯ ಮಾಧ್ಯಮಗಳಲ್ಲಿ ಮಾಜಿ ಸಚಿವ ಹೆಚ್.ಆಂಜನೇಯರವರನ್ನು ತೇಜೋವಧೆ ಮಾಡುತ್ತಿರುವ ಭಾಸ್ಕರ್ಪ್ರಸಾದ್ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಮಾದಿಗ ಜಾಗೃತಿ ವೇದಿಕೆ ವತಿಯಿಂದ ಪೊಲೀಸ್ ಉಪಾಧೀಕ್ಷಕರಿಗೆ ಗುರುವಾರ ದೂರು ನೀಡಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿದ ಮಾದಿಗ ಜಾಗೃತಿ ವೇದಿಕೆ ಕಾರ್ಯಕರ್ತರು ಒನಕೆ ಒಬವ್ವ ವೃತ್ತದಲ್ಲಿ ಭಾಸ್ಕರ್ಪ್ರಸಾದ್ರವರ ಫೋಟೋ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಾತ್ಯತೀತ ನಾಯಕರಾಗಿರುವ ಹೆಚ್.ಆಂಜನೇಯರವರು ಮಾದಿಗ ಸಮುದಾಯವಷ್ಟೆ ಅಲ್ಲ. ಎಲ್ಲಾ ಸಮಾಜದವರ ಜೊತೆ ಉತ್ತಮ ಒಡನಾಟವಿಟ್ಟುಕೊಂಡಿರುವುದನ್ನು ಸಹಿಸದ ಭಾಸ್ಕರ್ಪ್ರಸಾದ್ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೆಚ್.ಆಂಜನೇಯರವರ ಹೆಸರನ್ನು ದುರಪಯೋಗಪಡಿಸಿಕೊಳ್ಳುತ್ತಿರುವುದು ಮಾದಿಗರಿಗೆ ಅತೀವ ನೋವುಂಟಾಗಿದೆ. ಒಳ ಮೀಸಲಾತಿ ಹೋರಾಟದಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಭಾಸ್ಕರ್ಪ್ರಸಾದ್ ಕಳೆದ ಮೂರು ನಾಲ್ಕು ದಶಕಗಳಿಂದ ಎಲ್ಲಿ ಹೋಗಿದ್ದರೂ ಕೂಡಲೆ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಿಯಾದರೂ ಕಂಡರೆ ಘೇರಾವ್ ಹಾಕಲಾಗುವುದೆಂದು ಮಾದಿಗ ಜಾಗೃತಿ ವೇದಿಕೆ ಎಚ್ಚರಿಸಿದೆ.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡಿ.ಕುಮಾರಸ್ವಾಮಿ, ಅಣ್ಣಪ್ಪ ಮದಕರಿಪುರ, ಕಿರಣ್ಕುಮಾರ್ ಕುರುಬರಹಳ್ಳಿ, ಹೆಚ್.ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ಶೇಖರಪ್ಪ, ರಾಮಣ್ಣ, ರಘು ಇಂಗಳದಾಳ್, ಅಂಜಿನಮೂರ್ತಿ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




