ಸುದ್ದಿಒನ್, ಚಿತ್ರದುರ್ಗ, ನವೆಂಬರ್. 12 : ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಶ್ರೀ ಜಗದ್ಗುರು ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಇಂದಿನಿಂದ (ನವೆಂಬರ್ 12) 16ರ ವರೆಗೆ ನಡೆಯಲಿರುವ ರಾಜ್ಯಮಟ್ಟದ ವೈಭವದ ಸ್ವದೇಶೀ ಮೇಳ ನಡೆಯಲಿದೆ.
ಈ ಮೇಳದಲ್ಲಿ ವಿಶೇಷವಾಗಿ ಪ್ರತಿನಿತ್ಯ ಸಂಜೆ ದೇಶೀ ಹಾಗೂ ವಿಶೇಷವಾಗಿ ಜಾನಪದ ಕಲಾ ಪ್ರಸ್ತುತಿಗಳ ವೈಭವವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಂದ ಅನಾವರಣಗೊಳ್ಳಲಿದ್ದು, ಸ್ವದೇಶೀ ಮೇಳದಲ್ಲಿ ಸಂಸ್ಕಾರ ಭಾರತೀ ತಂಡಕ್ಕೆ ಕಲಾ ಪ್ರಸ್ತುತಿಯ ಕಾರ್ಯಕ್ರಮಗಳ ನಿರ್ವಹಣಾ ಜವಾಬ್ದಾರಿ ನೀಡಲಾಗಿದ್ದು ಅದನ್ನು ಯಶಸ್ವಿಯಾಗಿ ನಿರ್ವಹಿಸಲು ತಂಡಗಳ ಸಂಯೋಜನೆ ಮಾಡಲಾಗಿದೆ ಎಂದು ಸಂಸ್ಕಾರ ಭಾರತೀ (ರಿ.) ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್ ರಾವ್ ಶಾನುಭೋಗ್ ಮಾಹಿತಿ ನೀಡಿದರು.
ಸಂಸ್ಕಾರ ಭಾರತೀ ಪ್ರಾಂತ ಕಾರ್ಯದರ್ಶಿಗಳಾದ ಮಾರುತಿ ಮೋಹನ್, ಜಿಲ್ಲಾ ಅಧ್ಯಕ್ಷರಾದ ಉಮೇಶ್ ವೀರಣ್ಣ ತುಪ್ಪದ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್ ರಾವ್ ಶಾನುಭೋಗ್, ಜಿಲ್ಲಾ ಕಾರ್ಯಾಧ್ಯಕ್ಷರಾದ ನಾಗರಾಜ್ ಸಂಗಂ, ಜಿಲ್ಲಾ ಸಮಿತಿ ಸಂರಕ್ಷಕರಾದ ಡಾ. ಬಿ. ರಾಜಶೇಖರಪ್ಪ, ಟಿ.ಕೆ. ನಾಗರಾಜರಾವ್, ಪ್ರಾಂತ ಸಾಹಿತ್ಯ ವಿಭಾಗ ಪ್ರಮುಖ್ ಡಾ. ರಾಜೀವಲೋಚನ, ಪ್ರಾಂತ ಮಾತೃಶಕ್ತಿ ಸಹ ಪ್ರಮುಖ್ ಶ್ರೀಮತಿ ವರಲಕ್ಷ್ಮಿ, ಜಿಲ್ಲಾ ಉಪಾಧ್ಯಕ್ಷರು ಸೂರ್ಯನಾರಾಯಣ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಮುರಾರ್ಜಿ ಮತ್ತಿತರರ ನೇತೃತ್ವದಲ್ಲಿ ವಿವಿಧ ಸಮಿತಿ ಉಪಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು ಮೇಳದಲ್ಲಿ ಕಲಾ – ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೆ ಸೂಕ್ತ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇಂದು (12 ನವೆಂಬರ್ 2025, ಬುಧವಾರ) ಸಂಜೆ 7ಕ್ಕೆ ಹೆಸರಾಂತ ರಾಷ್ಟ್ರಮಟ್ಟದ ಕಲಾವಿದರಾದ ಅಜಿತ್ ಬಸಾಪುರ ಛಬ್ಬಿ ಅವರ ತಂಡದಿಂದ ಜಾನಪದ ಕಲಾ ವೈಭವ ಕಾರ್ಯಕ್ರಮ ನೆರವೇರಲಿದೆ.







