ಬೆಂಗಳೂರು: ದೊಡ್ಮನೆಯ ನಂದಾದೀಪ.. ಕರುನಾಡ ಮಂದಿಯ ಪ್ರೀತಿಯ ಮುತ್ತು ಶಿವಣ್ಣನಿಗೆ ಬಹಳ ದಿನಗಳಿಂದ ಅನಾರೋಗ್ಯದ ಸಮಸ್ಯೆ ಇದೆ. ಇಷ್ಟು ದಿನ ಒಂದಷ್ಟು ಟ್ರೀಟ್ಮೆಂಟ್ ತೆಗೆದುಕೊಂಡಿದ್ದಾರೆ. ಆದರೆ ಒಂದು ಸರ್ಜರಿ ಮಾತ್ರ ಬಾಕಿ ಇದ್ದ ಕಾರಣ ಶಿವಣ್ಣ, ತಮ್ಮ ಕುಟುಂಬ ಸಮೇತ ಅಮೆರಿಕಾಗೆ ತೆರಳಿದ್ದಾರೆ. ಅಲ್ಲಿ ಇಂದು ಸರ್ಜರಿ ನಡೆಯಲಿದೆ. ಹೀಗಾಗಿ ಅಭಿಮಾನಿಗಳೆಲ್ಲ ಶಿವಣ್ಣ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.
ಶಿವಣ್ಣನಿಗಾಗಿ ದೇವರ ಮೊರೆ ಹೋಗಿದ್ದಾರೆ. ಸರ್ಜರಿ ಯಶಸ್ವಿಯಾಗಿ ತವರಿಗೆ ಮರಳಲಿ ಎಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಿದ್ದಾರೆ. ವಿರೇಶ್ ಥಿಯೇಟರ್ ಬಳಿ ಇರುವ ನಾಗಸುಬ್ರಮಣ್ಯ ದೇವಸ್ಥಾನದಲ್ಲಿ ಶಿವಣ್ಣನ ಆರೋಗ್ಯ ಚೇತರಿಕೆಗಾಗಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರಸ್ತುತ ಅಮೆರಿಕಾದಲ್ಲಿ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಶಿವಣ್ಣ ಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ದೇವಸ್ಥಾನಗಳಲ್ಲಿ ಶಿವಣ್ಣನ ಫೋಟೋ ಹಿಡಿದು, ದೇವರ ಬಳಿ ಪ್ರಾರ್ಥನೆ ಮಾಡಿದ್ದಾರೆ.
ಇನ್ನು ಶಿವಣ್ಣ ಅಮೆರಿಕಾಗೆ ಹೋಗುವುದಕ್ಕೂ ಮೊದಲೇ ಅವರ ಆಪ್ತರೆಲ್ಲ ಮನೆಗೆ ಬಂದು ಹಾರೈಸಿದ್ದರು. ಕೊಂಚ ಭಯಗೊಂಡಿದ್ದ ಶಿವಣ್ಣನಿಗೆ ಆತ್ಮಸ್ಥೈರ್ಯ ತುಂಬಿದರು. ಮನೆ ಮಂದಿಗೆಲ್ಲಾ ಧೈರ್ಯ ಹೇಳಿದರು. ಸುದೀಪ್, ಬಿಸಿ ಪಾಟೀಲ್ ಸೇರಿದಂತೆ ಎಲ್ಲರು ಜೊತೆಗಿದ್ದೀವಿ ಎಂಬ ವಿಶ್ವಾಸ ನೀಡಿದರು. ಇಂದು ಆಪರೇಷನ್ ನಡೆಯುತ್ತಿದ್ದು, ಒಂದು ತಿಂಗಳ ಕಾಲ ಶಿವಣ್ಣ ಅಮೆರಿಕಾದ ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ. ಜನವರಿ 26ಕ್ಕೆ ಭಾರತಕ್ಕೆ ಬರಲಿದ್ದಾರೆ. ಶಿವಣ್ಣ ಜೊತೆಗೆ ಗೀತಾ ಶಿವರಾಜ್ಕುಮಾರ್ ಅವರು ಅಮೆರಿಕಾಗೆ ತೆರಳಿದ್ದು, ಜೊತೆಗೆ ಇದ್ದಾರೆ. ಸರ್ಜರಿ ಯಶಸ್ವಿಯಾಗಿ, ಆರೋಗ್ಯಯುತವಾಗಿ ಶಿವಣ್ಣ ಬರಲೆಂದು ನಾನಾ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿದ್ದಾರೆ.


