ದಯಾಮರಣದ ಕುರಿತು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ಪ್ರಕಟ

13 ವರ್ಷಗಳ ಹಿಂದೆ ಸಂಭವಿಸಿದ ಅಪಘಾತವೊಂದರಲ್ಲಿ ತೀವ್ರ ಮಿದುಳಿನ ಗಾಯಕ್ಕೆ ಒಳಗಾಗಿ ಕೋಮಾದಲ್ಲಿದ್ದ 32 ವರ್ಷದ ಹರೀಶ್ ರಾಣಾ ಅವರಿಗೆ ಗೌರವಯುತವಾಗಿ ಸಾಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಇದು ದೇಶದ ನ್ಯಾಯಾಂಗ ಇತಿಹಾಸದಲ್ಲೇ ನ್ಯಾಯಾಲಯದ ಆದೇಶದ ಮೇರೆಗೆ ನೀಡಲಾದ ಮೊದಲ ‘ಪರೋಕ್ಷ ದಯಾಮರಣ’ (Passive Euthanasia) ಪ್ರಕರಣವಾಗಿದೆ.

ತೀವ್ರ ಮಿದುಳಿನ ಗಾಯದಿಂದ ಚೇತರಿಸಿಕೊಳ್ಳುವ ಯಾವುದೇ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ, ಅವರಿಗೆ ನೀಡಲಾಗುತ್ತಿರುವ ಕೃತಕ ಆಹಾರ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಹಿಂಪಡೆಯುವ ಮೂಲಕ ‘ಪರೋಕ್ಷ ದಯಾಮರಣ’ಕ್ಕೆ (Passive Euthanasia) ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಅನುಮತಿ ನೀಡಿದೆ.

ತಮ್ಮ ಮಗನ ನರಕಯಾತನೆಯನ್ನು ನೋಡಲಾರದೆ ಹರೀಶ್ ರಾಣಾ ಅವರ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ವೈದ್ಯಕೀಯ ಚಿಕಿತ್ಸೆಯನ್ನು ಹಿಂಪಡೆಯಲು ಅನುಮತಿ ನೀಡುವ ಮೂಲಕ ಹರೀಶ್ ರಾಣಾ ಅವರಿಗೆ ‘ಗೌರವಯುತ ಸಾವು’ ಕಾಣಲು ಹಾದಿ ಮಾಡಿಕೊಟ್ಟಿದೆ.

ಈ ತೀರ್ಪು ಭವಿಷ್ಯದಲ್ಲಿ ಚೇತರಿಕೆಯ ಸಾಧ್ಯತೆಯೇ ಇಲ್ಲದ ಮತ್ತು ಕೃತಕವಾಗಿ ಆಹಾರ ನೀಡುವ ಮೂಲಕ ಜೀವಂತವಾಗಿರಿಸಲಾದ ಸಾವಿರಾರು ರೋಗಿಗಳ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಬದುಕುವ ಹಕ್ಕಿನಂತೆಯೇ ಪ್ರತಿಯೊಬ್ಬರಿಗೂ ಘನತೆಯಿಂದ ಸಾಯುವ ಹಕ್ಕಿದೆ ಎಂಬುದನ್ನು ಈ ತೀರ್ಪು ಎತ್ತಿ ಹಿಡಿದಿದೆ.

Share This Article