ದಾವಣಗೆರೆ; ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ವಿದ್ಯಾರ್ಥಿಗಳ ಬದುಕಿಗೆ ಬಹಳ ಮುಖ್ಯವಾದದ್ದು. ತಮ್ಮ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಈ ಎರಡು ಪರೀಕ್ಷೆಗಳು ಬಹಳ ಮುಖ್ಯವಾಗುತ್ತವೆ. ಆದರೆ ಶಿಕ್ಷಕರೇ ಆಗಲಿ, ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರೇ ಆಗಲಿ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡಬಾರದು. ಆದರೆ ದಾವಣಗೆರೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

ಹೌದು ಮಾರ್ಚ್ 1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಶುರುವಾಗಿವೆ. ಇಂದು ಸೈನ್ಸ್ ವಿಭಾಗದವರಿಗೆ ಗಣಿತ ವಿಷಯದ ಪರೀಕ್ಷೆ ನಡೆದಿದೆ. ದಾವಣಗೆರೆ ಜಿಲ್ಲೆ ಜಗಳೂರಿನ ಮಾಲತಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಜಗಳೂರಿನ ನಳಂದ ಪಿಯು ಕಾಲೇಜಿನ ಪಿಯು ಸೌಜನ್ಯ ಇಂದು ಪರೀಕ್ಷೆ ಬರೆಯುತ್ತಿದ್ದರು. ಪಿಯು ಪರೀಕ್ಷೆ ಎಂದರೆ ಸಾಮಾನ್ಯವಾಗಿಯೇ ವಿದ್ಯಾರ್ಥಿಗಳು ಹೆಚ್ಚು ಗಮನ ಕೊಟ್ಟು ಓದಿರುತ್ತಾರೆ. ಎಲ್ಲಾ ಪ್ರಶ್ನಡಗಳಿಗೂ ಉತ್ತರ ಬರೆಯುವ ವಿದ್ಯಾರ್ಥಿಗಳಿಗೆ ಅಡಿಷನಲ್ ಶೀಟ್ ಅವಶ್ಯಕತೆ ಇರುತ್ತದೆ. ಆಲ್ಮೋಸ್ಟ್ ಎಲ್ಲಾ ವಿದ್ಯಾರ್ಥಿಗಳು ಅಡಿಷನಲ್ ಶೀಟ್ ತೆಗೆದುಕೊಂಡೆ ಪರೀಕ್ಷೆ ಬರೆಯುತ್ತಾರೆ.

ಸೌಜನ್ಯ ಕೂಡ ಪರೀಕ್ಷೆ ಬರೆಯುವಾಗ ಅಡಿಷನಲ್ ಶೀಟ್ ಕೇಳಿದ್ದಾರೆ. ಆದರೆ ಮೇಲ್ವಿಚಾರಕ ಆ ಶೀಟ್ ಗಳನ್ನ ನೀಡಿಲ್ಲ. ಸುಮಾರು ಏಳು ಅಂಕಗಳಿಗೆ ಉತ್ತರ ಗೊತ್ತಿದ್ದರು, ಬರೆಯುವುದಕ್ಕೆ ಶೀಟ್ ಇಲ್ಲ. ಸಮಯ ಮುಗಿದ ಮೇಲೆ ಆ ವಿದ್ಯಾರ್ಥಿನಿ ಹಾಗೇ ಪೇಪರ್ ಕೊಟ್ಟು ಬಂದಿದ್ದಾಳೆ. ಹೊರಗೆ ಬಂದು ತನ್ನ ತಾಯಿ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದಾಳೆ. ಪರೀಕ್ಷೆಗಳ ಒಂದೊಂದು ಮಾರ್ಕ್ಸ್ ಕೂಡ ಬಹಳ ಮುಖ್ಯವಾಗುತ್ತದೆ. ಆದರೆ ಏಳು ಮಾರ್ಕ್ಸ್ ಗೆ ಉತ್ತರ ಬರೆಯುವ ಅವಕಾಶವಿಲ್ಲ ಎಂದರೆ ಆ ವಿದ್ಯಾರ್ಥಿನಿ ಮನಸ್ಸು ಹೇಗಾಗಿರುತ್ತದೆ.

