ಬೆಂಗಳೂರು: ಸುಬ್ಬಾರೆಡ್ಡಿ ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕರಾಗಿದ್ದರು. ಆದರೆ ಅವರ ಶಾಸಕ ಸ್ಥಾನವನ್ನು ಕೋರ್ಟ್ ಅಸಿಂಧುಗೊಳಿಸಿತ್ತು. ಇದೀಗ ಅಸಿಂಧುಗೊಂಡ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ಗೌರವಿಸುತ್ತೇನೆ ಎಂದಿದ್ದಾರೆ.
ಇದು ದೊಡ್ಡ ಪ್ರಕರಣವೇನು ಅಲ್ಲ. ಸೋತಿರುವವರೆಲ್ಲರೂ ಈ ರೀತಿ ರಾಜಕೀಯ ದ್ವೇಷ ತೀರಿಸಿಕೊಳ್ಳಲು ಮುಂದಾದರೆ, ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಕಷ್ಟವಾಗುತ್ತದೆ. ಪ್ರಸ್ತುತ ತಾನು ದೆಹಲಿಗೆ ತೆರಳುತ್ತಿದ್ದು, ಅಲ್ಲಿಂದ ಮರಳಿದ ನಂತರ ಈ ಕುರಿತು ವಿಸ್ತೃತವಾಗಿ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.
ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ ಬೆನ್ನಲ್ಲೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ .ಅಶೋಕ್ ಪ್ರತಿಕ್ರಿಯೆ ನೀಡಿದ್ದರು. ವೋಟ್ ಚೋರಿ ಕಹಾ ಹೈ?ಕಾಂಗ್ರೆಸ್ ಪಾರ್ಟಿ ಮೇ ಹೈ! ರಾಹುಲ್ ಗಾಂಧಿ ಅವರು ಈಗ ಬಾಗೇಪಲ್ಲಿಗೆ ಬಂದು ವೋಟ್ ಚೋರಿ, ಎಲೆಕ್ಷನ್ ಚೋರಿ ವಿರುದ್ಧ ಪ್ರತಿಭಟನೆ ಮಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ. ನಮ್ಮ ದೇಶದಲ್ಲಿ ಮತಗಳ್ಳತನ, ಚುನಾವಣಾ ಅಕ್ರಮಕ್ಕೆ ಯಾರಾದರೂ ಪಿತಾಮಹ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಅವರ ಪೂರ್ವಜರು ಎಂದು ಲೇವಡಿ ಮಾಡಿದ್ದರು. ಮತ್ತೊಂದು ಪೋಸ್ಟ್ ನಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ ಮಹಾದೇವಪ್ಪ ಅವರೇ, ನಾಯಿ ಯಾರು?ಬಾಲ ಯಾರು?ನಾವು ನೀವೆಲ್ಲಾ ಅಂದರೆ ಯಾರ್ಯಾರು?ಸ್ವಲ್ಪ ಸ್ಪಷ್ಟನೆ ನೀಡಿ ಎಂದು ಒತ್ತಾಯಿಸಿದ್ದರು. ಸದ್ಯ ಶಾಸಕ ಸ್ಥಾನದಿಂದ ವಜಾಗೊಂಡಿರುವ ಸುಬ್ಬಾರೆಡ್ಡಿ ಅವರು ಮುಂದೆ ಕಾನೂನು ಹೋರಾಟ ಮಾಡುವ ಸಾಧ್ಯತೆ ಇದೆ.



