ಸುದ್ದಿಒನ್, ಬೆಂಗಳೂರು, ಮಾರ್ಚ್. 06 : ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ₹4,48,000 ಕೋಟಿ(ಅಂದಾಜು) ಮೊತ್ತದ ರಾಜ್ಯ ಬಜೆಟ್ ಮಂಡಿಸುತ್ತಾರೆ.
ವಿದ್ಯಾರ್ಥಿ ಪರಿಷತ್ ನ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ವಿದ್ಯಾರ್ಥಿ ಸಂಘದ ಚುನಾವಣೆಯು, ಈ ಬಾರಿಯ ಬಜೆಟ್ ನಲ್ಲಿ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಹಾಗೂ ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವನ್ನು ಹೊಂದುವ ನಿಟ್ಟಿನಲ್ಲಿ ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಪ್ರಾರಂಭಿಸುವುದಾಗಿ ಬಜೆಟ್ ನಲ್ಲಿ ಸರ್ಕಾರವು ಘೋಷಿಸಿದ್ದು, ವಿದ್ಯಾರ್ಥಿ ಪರಿಷತ್ತು ಈ ನಿರ್ಧಾರವನ್ನು ಸ್ವಾಗತಿಸುತ್ತದೆ ಎಂದು ಎಬಿವಿಪಿ (ಕರ್ನಾಟಕ ದಕ್ಷಿಣ) ರಾಜ್ಯ ಕಾರ್ಯದರ್ಶಿ ಗೋಪಿ ರಂಗಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಮತ್ತು ಡಿಮ್ಡ್ ವಿಶ್ವವಿದ್ಯಾನಿಲಯಗಳಲ್ಲಿ ಜಾತಿ ಆಧಾರದ ಮೇಲೆ ನಡೆಯುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಎಂದು ಉಲ್ಲೆಖಿಸಿರುವ ರೋಹಿತ್ ವೆಮುಲ ಕಾಯಿದೆ ಜಾರಿಗೆ ತರುವ ನಿರ್ಧಾರ ತಂದಿರುತ್ತದೆ, ಇದು ಕಾಲೇಜು ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳಲ್ಲಿ, ವಿದ್ಯಾರ್ಥಿ ಸಮುದಾಯವನ್ನು ಜಾತಿ ಆಧಾರಿತವಾಗಿ ವಿಘಟಿಸುವ ಒಂದು ಕಳವಳವನ್ನು ಉಂಟು ಮಾಡಿದ್ದು, ಈ ರೀತಿಯ ಕಾನೂನು ಶಿಕ್ಷಣ ವ್ಯವಸ್ಥೆಗೆ ಮಾರಕ ಎಂದು ಎಬಿವಿಪಿ ಅಭಿಪ್ರಾಯ ಪಡುತ್ತದೆ.
ಈ ಬಜೆಟ್ ನಲ್ಲಿ ಶಾಲಾ ಪಠ್ಯಪುಸ್ತಕಗಳ ಬೆಲೆ ಹೆಚ್ಚಳವನ್ನು ಮಾಡಿದ್ದು ಉದಾಹರಣೆಗೆ ನಾಲ್ಕನೇ ತರಗತಿ ಪುಸ್ತಕದ ಬೆಲೆ ₹31 ರಿಂದ ₹51ಕ್ಕೆ ಹೆಚ್ಚಿಸಲಾಗಿದೆ ಹಾಗೆಯೇ 1ನೇ ತರಗತಿಯ ಮೃದಾಂಗ ಪುಸ್ತಕದ ಬೆಲೆ ₹42 ರಿಂದ ₹60ಕ್ಕೆ ಏರಿಸಲಾಗಿದೆ, ಈ ರೀತಿಯ ಏರಿಕೆಯು ಉಚಿತ ಯೋಜನೆಗಳ ಪುಷ್ಟಿಕಾರಣಕ್ಕಾಗಿ ಮಾಡಿದ್ದೂ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡಿರುವ ಕೊಡಲಿ ಪೆಟ್ಟಾಗಿದ್ದು ಅಭಾವಿಪ ಇದನ್ನು ಖಂಡಿಸುತ್ತದೆ.
50,000ಸರ್ಕಾರಿ ಉದ್ಯೋಗ ನೇಮಕಾತಿಗೆ ಅವಕಾಶಗಳನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ 2,000 ಬೋಧಕ ಹುದ್ದೆಗಳ ನೇಮಕಾತಿಗಳನ್ನು ಮಾಡುವ ಬಗ್ಗೆ ಬಜೆಟ್ ನಲ್ಲಿ ತಿಳಿಸಿದ್ದು, ಇನ್ನೂ ಅಗತ್ಯವಾದ ಸಾವಿರಾರು ಖಾಲಿ ಹುದ್ದೆಗಳನ್ನು ತುಂಬಿಕೊಳ್ಳುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕಾಗಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಿಗೆ ಬಲವರ್ಧನೆ, ಉತ್ಕೃಷ್ಟತ ಕೇಂದ್ರಗಳ ಸ್ಥಾಪನೆ ಹಾಗೂ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ADB ನೆರವಿನೊಂದಿಗೆ 2,500 ಕೋಟಿ ವೆಚ್ಚದಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನ ಯೋಜನೆಯನ್ನು ಜಾರಿಗೆ ತರಲಾಗಿದೆ ಹಾಗೂ 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ 11 ಪಾಲಿಟೆಕ್ನಿಕ್ ಕಾಲೇಜುಗಳನ್ನು ಮಾದರಿ ಸಂಸ್ಥೆಗಳನ್ನಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಈ ಯೋಜನೆ ಕೇವಲ 10 % ಸರ್ಕಾರಿ ಸಂಸ್ಥೆಗಳನ್ನು ತಲುಪಲಿದ್ದು, ದುಸ್ಥಿತಿ ತಲುಪಿರುವ ಪದವಿ ಶಿಕ್ಷಣ ಮತ್ತು ಶೋಚನಿಯ ಸ್ಥಿತಿಯಲ್ಲಿರುವ ಪಾಲಿಟೆಕ್ನಿಕ್ ಗಳ ಬಗ್ಗೆ ಸರ್ಕಾರ ಕಾಳಜಿವಹಿಸಿದಂತೆ ತೋರುತ್ತಿಲ್ಲ. 3 ವರ್ಷಗಳಿಗೆ 100 ಕೋಟಿ ಅಲ್ಲಿ 50 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಗತ್ಯವಿರುವ ಪೀಠೋಪಕರಣಗಳು ಹಾಗೂ ಕಟ್ಟಡ ದುರಸ್ತಿಗೆ ಹಣ ನೀಡಲಾಗಿದ್ದು, ಸಧ್ಯದ ಪರಿಸ್ಥಿತಿಯಲ್ಲಿ ನೂರಾರು ಕಾಲೇಜುಗಳ ಕಟ್ಟಡಗಳಲ್ಲಿ ಸರಿಯಾದ ಶೌಚಾಲಯ ಇಲ್ಲದಿರುವುದು, ತರಗತಿಗಳು ಸೋರುತ್ತಿರುವುದು, ಬೆಂಚುಗಳ ವ್ಯವಸ್ಥೆ ಇಲ್ಲದಿರುವುದರಿಂದ ಈ ಅನುದಾನವನ್ನು ಹೆಚ್ಚಿಸಿ ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಿಗೆ, ಪಾಲಿಟೆಕ್ನಿಕ್ ಅನುಧಾನ ನೀಡಬೇಕಾದ ಅಗತ್ಯವನ್ನು ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಚಿವರು ಮರೆತಂತಿದೆ.
ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ನಲ್ಲಿ 10 % ಅನುಧಾನ ನೀಡಿದ್ದು ಬಜೆಟ್ ಗಾತ್ರ ಏರಿದ್ದರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುಧಾನವನ್ನು ನೀಡಿಲ್ಲ, ವಿಶ್ವವಿದ್ಯಾಲಯಗಳ ಆರ್ಥಿಕ ಪರಿಸ್ಥಿತಿ ದಿವಾಳಿತನದ ಕಡೆ ಸಾಗಿದ್ದು, ವಿ.ವಿ. ಗಳಿಗೆ ಯಾವುದೇ ವಿಶೇಷ ಅನುಧಾನ ನೀಡದೆ ಇರುವುದರಿಂದ ನಾಳಿನ ದಿನಗಳಲ್ಲಿ ಇದು ವಿದ್ಯಾರ್ಥಿಗಳಿಗೆ ಶುಲ್ಕದ ರೀತಿಯಲ್ಲಿ ವಸೂಲಿಗೆ ಕಾರಣವಾಗಲಿದೆ.
ಈ ರೀತಿಯಾಗಿ ಶಿಕ್ಷಣ ಕ್ಷೇತ್ರದ ಬಗ್ಗೆ ಸರ್ಕಾರವು ಬಜೆಟ್ ನಲ್ಲಿ ಸರ್ವಾಂಗೀನ ಅಭಿವೃದ್ಧಿಗೆ ಪೂರಕವಾದ ಯೋಜನೆ ಅಥವಾ ಹಣಕಾಸನ್ನು ಹೊಂದಿಸಿಲ್ಲ ಎನ್ನುವುದು ರಾಜ್ಯದ ಶಿಕ್ಷಣ ತಜ್ಞರ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುವರ ಅಭಿಪ್ರಾಯವಾಗಿದೆ ಎಂದು ಗೋಪಿ ರಂಗಸ್ವಾಮಿ ತಿಳಿಸಿದ್ದಾರೆ.




