ದುಶ್ಚಟಗಳಿಂದ ದೂರವಿರಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ : ನಗರಸಭೆ ಅಧ್ಯಕ್ಷೆ ಸುಮಿತಾ ಕರೆ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 13 : ಆರೋಗ್ಯಕ್ಕೆ ಹಾನಿಕಾರಕವಾಗಿರುವ ದುಶ್ಚಟಗಳಿಂದ ಪೌರ ಕಾರ್ಮಿಕರು ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ನಗರಸಭೆ ಅಧ್ಯಕ್ಷೆ ಸುಮಿತಾ ಕರೆ ನೀಡಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಇವರ ಸಹಯೋಗದೊಂದಿಗೆ ನಗರಸಭೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಕ್ಯಾನ್ಸರ್ ಹಾಗೂ ಶ್ವಾಸಕೋಶದ ಬಗ್ಗೆ ಜಾಗೃತಿ ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಿನ ಬೆಳಗಾದರೆ ನಗರದ ಸ್ವಚ್ಚತೆಯಲ್ಲಿ ತೊಡಗುವ ನೀವುಗಳು ಮೊದಲು ನಿಮ್ಮ ಆರೋಗ್ಯ ಕಡೆ ಗಮನ ಕೊಡಿ. ಧೂಮಪಾನ, ಮದ್ಯಪಾನ, ಗುಟ್ಕ, ಪಾನ್‍ಪರಾಗ್ ಸೇವನೆಯಿಂದ ದೂರವಿರಿ ಎಂದು ಹೇಳಿದರು.

ಕ್ಯಾನ್ಸರ್ ತಜ್ಞೆ ಡಾ. ನಮ್ರತ ಉಡುಪ ಮಾತನಾಡುತ್ತ ಪ್ರತಿ ವರ್ಷ ತಂಬಾಕು ಸೇವನೆಯಿಂದ ಎಂಬತ್ತು ಲಕ್ಷ ಜನ ಸಾವನ್ನಪ್ಪುತ್ತಿದ್ದು, ಅದರಲ್ಲಿ ಸಿಗರೇಟ್ ಸೇವನೆಯಿಂದಲೆ ಎಪ್ಪತ್ತು ಲಕ್ಷ ಸಾವು ಸಂಭವಿಸುತ್ತಿದೆ. 2016-17 ರಲ್ಲಿ ನಡೆದ ಸರ್ವೆ ಪ್ರಕಾರ ರಾಜ್ಯದಲ್ಲಿ ಶೇ.22.2 ರಷ್ಟು ಯುವ ಜನಾಂಗ ತಂಬಾಕು ಸೇವನೆಗೆ ಬಲಿಯಾಗುತ್ತಿದ್ದು, 2019 ರ ಸರ್ವೆಯಂತೆ 13 ರಿಂದ 15 ವರ್ಷದೊಳಗಿನ ಮಕ್ಕಳು ತಂಬಾಕು ಸೇವನೆಗೆ ತುತ್ತಾಗುತ್ತಿದ್ದಾರೆಂದರು.

ಹೃದಯಾಘಾತ, ಸ್ಟ್ರೋಕ್, ಉಬ್ಬಸಕ್ಕೆ ಸಿಗರೇಟು ಸೇವನೆ ಕಾರಣವಾಗುತ್ತದೆ. ತಂಬಾಕು ಸೇವನೆಯಿಂದ ದೇಹದ ಎಲುಬಿನಲ್ಲಿರುವ ಕ್ಯಾಲ್ಷಿಯಂ ಕೂಡ ನಿಧಾನವಾಗಿ ಕರಗುತ್ತದೆಂದು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಪೌರ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿದರು.

ಶ್ವಾಸಕೋಶ ತಜ್ಞೆ ಡಾ. ಮಂಜುಶಾ ಮಾತನಾಡಿ ತಂಬಾಕು ಸೇವನೆಯಿಂದ ಅಸ್ತಮ, ದಮ್ಮಿನ ತರ ತೊಂದರೆ ಕಾಣಿಸಿಕೊಳ್ಳಬಹುದು. ಸಿಗರೇಟು ಸೇವನೆಯಿಂದ ಲಂಗ್ಸ್ ಕಪ್ಪು ಬಣ್ಣಕ್ಕೆ ತಿರುಗಿ ಸ್ವಲ್ಪ ಮುದುರಿದಂತಾಗುತ್ತದೆಯಲ್ಲದೆ ಲಂಗ್ ಕ್ಯಾನ್ಸ್‍ರ್ ಕೂಡ ಆಗಬಹುದೆಂದು ಹೇಳಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸ್ರುಲ್ಲಾ ಮಾತನಾಡಿ ಧೂಮಪಾನದಿಂದ ದೂರವಿದ್ದು ಸದೃಢ ಆರೋಗ್ಯ ಕಾಪಾಡಿಕೊಳ್ಳುವ ಹೊಣೆಗಾರಿಕೆ ನಿಮ್ಮ ಮೇಲಿದೆ. ನಾನಾ ರೀತಿಯ ಒತ್ತಡಗಳಿಂದಲೂ ಮನುಷ್ಯ ಒಂದಲ್ಲ ಒಂದು ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆಂದರು.
ನಗರಸಭೆ ಸದಸ್ಯ ಹರೀಶ್, ಪೌರಾಯುಕ್ತರಾದ ರೇಣುಕ ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *