ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ: ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿ ಡಿಸೆಂಬರ್ 18 ರಂದು ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷ ನೆಹರು ಚ. ಓಲೇಕಾರ್ ತಿಳಿಸಿದರು.

ಜಯಂತಿ ನಡೆಯುವ ಪೆಂಡಾಲ್ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಂದು ಮಧ್ಯಾಹ್ನ 2 ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ಬೊಮ್ಮಾಯಿ ಒನಕೆ ಓಬವ್ವ ಜಯಂತಿ ಉದ್ಗಾಟಿಸುವರು.
ಬಸವನಾಗಿದೇವಸ್ವಾಮೀಜಿ, ಜ್ಞಾನಪ್ರಕಾಶ್ ಸ್ವಾಮೀಜಿ, ಬಸವಲಿಂಗ ಮಹಾಸ್ವಾಮೀಜಿ, ಬಸವಲಿಂಗಮೂರ್ತಿ ಶರಣರು ಸಾನಿಧ್ಯ ವಹಿಸಲಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ಜೋಷಿ, ಸಂಸದ ಎ.ನಾರಾಯಣಸ್ವಾಮಿ, ಸಚಿವರುಗಳಾದ ಬಿ.ಶ್ರೀರಾಮುಲು, ಬಿ.ಸಿ.ಪಾಟೀಲ್, ಡಾ.ಅಶ್ವಥ್ನಾರಾಯಣ ಸಿ.ಎಸ್. ವಿ.ಸುನಿಲ್ಕುಮಾರ್, ಶಾಸಕರುಗಳಾದ ಟಿ.ರಘುಮೂರ್ತಿ, ಎಂ.ಚಂದ್ರಪ್ಪ, ಪೂರ್ಣಿಮ ಶ್ರೀನಿವಾಸ್, ಗೂಳಿಹಟ್ಟಿ ಡಿ.ಶೇಖರ್, ಮಾಡಾಳು ವಿರುಪಾಕ್ಷಪ್ಪ, ಎಸ್.ವಿ.ರಾಮಚಂದ್ರ ಇನ್ನು ಅನೇಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಇವರುಗಳನ್ನು ಆಹ್ವಾನಿಸಿರುವುದಾಗಿ ಹೇಳಿದರು.
ಅಂದು ಬೆಳಿಗ್ಗೆ 9 ಗಂಟೆಗೆ ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತದಿಂದ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಹೊರಟು ಮಧ್ಯಾಹ್ನ ಒಂದು ಗಂಟೆಗೆ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ತಲುಪಲಿದೆ. ಉರುಮೆ, ಕಹಳೆ, ತಮಟೆ, ಡೊಳ್ಳು ವಿವಿಧ ಜಾನಪದ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿರುತ್ತವೆ. ಒಟ್ಟಾರ ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಿದ್ದು, ನಾಡಿನ ಮೂಲೆ ಮೂಲೆಗಳಿಂದ ಒಂದು ಲಕ್ಷ ಜನ ಬರುವ ನಿರೀಕ್ಷೆಯಿದೆ. ಅದಕ್ಕಾಗಿ ಆರುನೂರು ಬಸ್ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ನೂರು ಟ್ರಾಕ್ಸ್ ಗಳಿಂದ ಜನರನ್ನು ಕರೆತರುವ ಅವಕಾಶ ಒದಗಿಸಲಾಗಿದೆ. ಜಯಂತಿಗಾಗಿ ರಾಜ್ಯ ಸರ್ಕಾರ ಎರಡು ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದರು.
ಛಲವಾದಿ ಜನಾಂಗದ ಐವರು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು. ಪ್ರತಿಭಾವಂತ ಮಕ್ಕಳನ್ನು ಜಯಂತಿಯಲ್ಲಿ ಗೌರವಿಸುವುದಾಗಿ ತಿಳಿಸಿದರು.
ಛಲವಾದಿ ಜನಾಂಗದ ರಾಜ್ಯಾಧ್ಯಕ್ಷ ಕುಮಾರ್, ಮುಖಂಡರುಗಳಾದ ಹೆಚ್.ಸಿ.ನಿರಂಜನಮೂರ್ತಿ, ಧನಂಜಯ, ನಾಗರಾಜ್, ಭಾರ್ಗವಿ ದ್ರಾವಿಡ್, ಜಯಂತಿಯ ಉಸ್ತುವಾರಿ ವಹಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಛಲವಾದಿ, ತಿಪ್ಪೇಸ್ವಾಮಿ, ಗೌರಣ್ಣ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

