ಸುದ್ದಿಒನ್, ಚಿತ್ರದುರ್ಗ, ಜು.26: ನಿಜವಾದ ನಿಸ್ವಾರ್ಥಿಯೇ ಸೈನಿಕನಾಗಲೂ ಸಾಧ್ಯ. ಸೈನಿಕ ನಿಜವಾದ ಸರ್ವಸಂಗಪರಿತ್ಯಾಗಿ. ಪ್ರಾಣಪಕ್ಷಿ ಹಾರಿಹೋಗುತ್ತದೆ ಎಂಬ ಅರಿವಿನಿಂದಲೇ ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿಯೇ ಯೋಧ. ದೇಶಪ್ರೇಮದ ಪರಮೋಚ್ಚ ಸ್ಥಾನವೇ ಸೈನಿಕ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಎಸ್ ಜೆ ಎಸ್ ಸಮೂಹ ವಿದ್ಯಾಸಂಸ್ಥೆಗಳು ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು ಕಾರ್ಗಿಲ್ ವಿಜಯ್ ದಿನವು ಭಾರತ ಮಾತೆಯ ವೀರ ಪುತ್ರರ ಧೈರ್ಯವನ್ನು ನೆನಪಿಸಿಕೊಳ್ಳಬೇಕು. ಅವರು ದೇಶದ ಗೌರವ ಕಾಪಾಡಲು ತಮ್ಮ ಪ್ರಾಣವನ್ನೇ ಅರ್ಪಿಸಿದರು. ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಿದ್ದ ಆ ವೀರರ ತ್ಯಾಗವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಅವರ ದೇಶಭಕ್ತಿ ಎಲ್ಲರಿಗೂ ಮಾದರಿಯಾಗಿದೆ ಎಂದರು.
ವ್ಯಕ್ತಿ, ವಸ್ತು ಹಾಗೂ ಮನೆಗಿಂತಲೂ ಮಿಗಿಲು ದೇಶ ಎನ್ನುವ ಅಚಲ ವಿಶ್ವಾಸತೆಯ ಬದ್ದತೆ ತೋರಿಸುವವರೆ ಯೋಧರು. ದೇಶ ರಕ್ಷಣೆ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಸ್ಪಷ್ಟ ನಿಲುವು ಹೊಂದಿಯೇ ಸೈನ್ಯಕ್ಕೆ ಸೇರ್ಪಡೆಗೊಳ್ಳುವ ಯೋಧರೇ ನಮ್ಮ ಪಾಲಿನ ದೇವರು.
ಸೈನಿಕನ ಜೀವನವು ಸಾಹಸ ಮತ್ತು ಅಪಾಯಗಳಿಂದ ತುಂಬಿರುತ್ತದೆ. ಸೈನಿಕರು ಯಾವುದೇ ಪರಿಸ್ಥಿತಿಯಲ್ಲಿಯೂ ತಮ್ಮ ತಾಯ್ನಾಡನ್ನು ರಕ್ಷಿಸಲು ಪ್ರತಿಜ್ಞೆ ಮಾಡುತ್ತಾರೆ. ಅವರು ಎಂದಿಗೂ ಕರ್ತವ್ಯದಿಂದ ಹೊರಗುಳಿಯುವುದಿಲ್ಲ, ದೇಶಕ್ಕಾಗಿ ಅವರು ಎರಡನೇ ಆಲೋಚನೆಯಿಲ್ಲದೆ ತಮ್ಮ ಪ್ರಾಣವನ್ನೇ ಅರ್ಪಿಸಬಹುದು. ಇದು ಅವರ ಧೈರ್ಯ ಮತ್ತು ಇಚ್ಛಾಶಕ್ತಿಯ ಬಗ್ಗೆ ಬಹಳಷ್ಟು ಹೇಳುತ್ತದೆ. ನಾವು ನಮ್ಮ ಕುಟುಂಬಗಳೊಂದಿಗೆ ಪ್ರತಿ ಸಂದರ್ಭವನ್ನು ಶಾಂತಿಯುತವಾಗಿ ಆಚರಿಸಲು ಅವರು ವರ್ಷಪೂರ್ತಿ ತಮ್ಮ ಕುಟುಂಬಗಳಿಂದ ದೂರವಿರುತ್ತಾರೆ. ಯಾವುದೇ ತುರ್ತು ಪರಿಸ್ಥಿತಿ ಅಥವಾ ವಿಪತ್ತಿನಿಂದ ಬದುಕುಳಿಯುವ ತ್ರಾಣ ಮತ್ತು ದೃಢಸಂಕಲ್ಪವನ್ನು ಅವರು ಹೊಂದಿದ್ದಾರೆ.
ಇಂದು ದೇಶದ ಪ್ರತಿಯೊಬ್ಬ ಪ್ರಜೆ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾನೆ ಎಂದರೆ ಅದಕ್ಕೆ ದೇಶವನ್ನು ಹಗಲಿರುಳು ಕಾಯುತ್ತಿರುವ ಸೈನಿಕರೇ ಕಾರಣ. ಸೈನಿಕರನ್ನು ಯಾರೂ ಕಡೆಗಣಿಸದೆ ಗೌರವದಿಂದ ಕಾಣಬೇಕೆಂದರು. ಶಾಲಾ ವಿದ್ಯಾರ್ಥಿಗಳು ಸೈನಿಕರ ಸಮವಸ್ತ್ರ ಧರಿಸಿ ಆಶುಭಾಷಣ, ಕಿರು ನಾಟಕ, ದೇಶ ಭಕ್ತಿ ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರು ಪೋಷಕರು ಉಪಸ್ಥಿತಿಯಿದ್ದರು.

