ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 16 : ಜೀವದಾತೆ ಫೌಂಡೇಶನ್ ಮೂಲಕ ಪುತ್ರನ ಹೆಸರಿನಲ್ಲಿ ತಾಲೂಕಿಗೆ ಉಚಿತವಾಗಿ ಎರಡು ವೈಷ್ಣವ್ ಅಂಬುಲೆನ್ಸ್ ನೀಡಿ ಸಮಾಜ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ಸೇವೆ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ತಾಲ್ಲೂಕಿನ ವೇಣುಕಲ್ ಗುಡ್ಡ ಗ್ರಾಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಕೆ. ಅಭಿನಂದನ್ ಹಾಗೂ ಧರ್ಮಪತ್ನಿ ನೇತ್ರಾವತಿ ಅವರು ತಮ್ಮ ತೋಟದಲ್ಲಿ ಏರ್ಪಡಿಸಿದ್ದ ಪುತ್ರ ದಿ. ಎ. ವೈಷ್ಣವ್ ಅವರ ಜನ್ಮದಿನ ಹಾಗೂ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪಘಾತಗಳು, ಅನಾರೋಗ್ಯ ಮತ್ತು ಇತರೆ ವೈದ್ಯಕೀಯ ಸಂದರ್ಭಗಳಲ್ಲಿ ಬಡ ಜನರಿಗೆ ಇದು ಅತ್ಯಂತ ಉಪಯುಕ್ತವಾಗಲಿದೆ. ಶಾಸಕರಾದರೂ ನಾವು ಮಾಡಲಾಗದ ಕೆಲಸವನ್ನು ಕೆ. ಅಭಿನಂದನ್ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ತುರ್ತು ಸಂದರ್ಭದಲ್ಲಿ ತಾಲೂಕಿನಾದ್ಯಂತ ಉಚಿತವಾಗಿ ಅಂಬುಲೆನ್ಸ್ ಸೇವೆ ಕೊಡುಗೆ ಅಪಾರವಾಗಿದೆ. ದೇವರು ನಿನಗೆ ಕೊಟ್ಟು, ಕಿತ್ತುಕೊಂಡಿದ್ದಾನೆ. ನಿನ್ನ ಮಗನಿಗೆ ಚಿರಶಾಂತಿ ಸಿಗಲಿ, ಮಗನ ಬಗ್ಗೆ ಹೆಚ್ಚು ಚಿಂತಿಸದೇ ಧೈರ್ಯವಾಗಿರು. ನಾಲ್ಕೈದು ವರ್ಷದ ಪುತ್ರ ನೆನಪಿಗಾಗಿ ಇಷ್ಟೊಂದು ದೊಡ್ಡ ಸೇವೆ ಮಾಡುವುದು ಸುಲಭವಲ್ಲ. ಮುಂದೆ ದೇವರು ಉತ್ತಮ ಭವಿಷ್ಯ ಕರುಣಿಸುತ್ತಾನೆ ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಕೆ. ಅಭಿನಂದನ್ ಮಾತನಾಡಿ ಪುತ್ರ ಚಿಕ್ಕ ವಯಸ್ಸಿನಲ್ಲಿ ಅಪಾರ ಜ್ಞಾನವುಳ್ಳನಾಗಿದ್ದ. ಗುರು ಹಿರಿಯರಿಗೆ ಕೊಡುತ್ತಿದ್ದ ಗೌರವ ಆತನ ಕಲಿತ ಸಂಸ್ಕೃತಿ ಮನೆಗೆ ಬಂದ ಅತಿಥಿಗಳು ನಿಬ್ಬೆರಗಾಗುತ್ತಿದ್ದರು. ಆತನ ಹೆಸರನ್ನು ಶಾಶ್ವತವಾಗಿ ಉಳಿಸುವ ಆಸೆ ನಮ್ಮದು. ಆ ದೃಷ್ಟಿಯಿಂದ ಪುತ್ರ ನಮ್ಮಲ್ಲಿ ಜೀವಂತಾಗಿ ಇರಬೇಕಾದರೆ, ಆತನ ಒಂದೊಳ್ಳೆ ಮನಸನ್ನು ಸ್ಮರಿಸುತ್ತಾ ಕೂರದೇ ಆತನ ಮೌಲ್ಯಗಳನ್ನು ನಾವು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಆ ದೃಷ್ಟಿಯಿಂದ ತಾಲ್ಲೂಕಿನಲ್ಲಿ ಉಚಿತವಾಗಿ ವೈಷ್ಣವ್ ಎಂಬ ಹೆಸರಿನಲ್ಲಿ ಆ್ಯಂಬುಲೆನ್ಸ್ ನೀಡಲು ಮುಂದಾಗಿದ್ದೇವೆ. ಈಗ ಎರಡು ಅಂಬುಲೆನ್ಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಹೆಚ್ಚು ವೈಷ್ಣವ್ ಅಂಬುಲೆನ್ಸ್ ಸೇವೆ ಕಾರ್ಯ ನಿರ್ವಹಿಸಲಿದೆ. ಈ ಸೇವೆ ತಾಲೂಕಿನಲ್ಲಿ ಮಾತ್ರ ಸೀಮಿತವಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎನ್.ಆರ್. ಲಕ್ಷ್ಮೀಕಾಂತ್, ಎ. ಮುರುಳಿ, ಸಂಪತ್ ಕುಮಾರ್, ವಿಶ್ವನಾಥ್, ಎಂ. ರವೀಂದ್ರಪ್ಪ, ಕೆ. ಮಂಜುನಾಥ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಟಿ. ಚಂದ್ರಶೇಖರ್ , ಜೆಬಿ ರಾಜು, ಹಾಲಪ್ಪ, ಬೀರೆನಹಳ್ಳಿ ಷಡಕ್ಷರಿ, ಶಾವರಂಜನಿ ಯಾದವ್, ನಿತೀನ್ ಗೌಡ, ಯೋಗೇಶ್, ರಂಗಸ್ವಾಮಿ, ಕೆಟಿ ಹನುಮಂತ, ಮಂಜು ಹೆಗ್ಗರೆ, ವಿಕೆ ಗುಡ್ಡ ರಾಕೇಶ್, ಅಭಿಲಾಷ್ ಸೀತಾರಾಮ, ವಾಸು ಸೇರಿದಂತೆ ಕೃಷ್ಣಪ್ಪ ಕುಟುಂಬಸ್ಥರು, ಸಾವಿರಾರು ಅಭಿಮಾನಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.











