ಬೆಳಗಾವಿ: ಒಂದು ಕಡೆ ಸಿಎಂ ಕುರ್ಚಿ ಕದನ ನಡೆಯುತ್ತಿದೆ. ಈ ವಿಚಾರ ಚಳಿಗಾಲದ ಅಧಿವೇಶನದಲ್ಲೂ ಸದ್ದು ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರನ್ನ ಇದೇ ವಿಚಾರಕ್ಕೂ ವಿಪಕ್ಷ ನಾಯಕರುಗಳು ರೇಗಿಸಿದ್ದಾರೆ. ಇದೇ ಕೊನೆ ಅಧಿವೇಶನನಾ ಎಂಬ ಪ್ರಶ್ನೆಯನ್ನು ವಿಪಕ್ಷಗಳು ಕೇಳಿದಾಗ ಸಿಎಂ ಸಿದ್ದರಾಮಯ್ಯ ಅವರು ನಗುತ್ತಲೇ ಉತ್ತರ ಕೊಟ್ಟಿದ್ದಾರೆ.
ಸಾಧ್ಯವೇ ಇಲ್ಲ. ರಾಜಕೀಯ ನಿಶ್ಯಕ್ತಿ ಅನ್ನೋದು ಬರುವುದಕ್ಕೆ ಸಾಧ್ಯವೇ ಇಲ್ಲ. ಅಂತದಕ್ಕೆ ಅವಕಾಶವೂ ಇಲ್ಲ, ಬರುವುದಕ್ಕೂ ಸಾಧ್ಯವಿಲ್ಲ. ರಾಜಕೀಯ ನಿಶ್ಯಕ್ತಿ ಸಾಧ್ಯವೂ ಇಲ್ಲ. ಶಾರೀರಿಕವಾದಂತ ನಿಶ್ಯಕ್ತಿಗಳು ಇರುತ್ತವೆ ಎಂದು ಸ್ಪಷ್ಟನೆ ಕೊಡುತ್ತಿದ್ದರು.
ಇದೇ ವೇಳೆ ಸುನೀಲ್ ಕುಮಾರ್, ನಿಮ್ಮ ಆರೋಗ್ಯದ ಬಗ್ಗೆ ಚರ್ಚೆಯಾಗ್ತಿಲ್ಲ. ರಾಜಕೀಯವಾಗಿ ನಿಶ್ಯಕ್ತಿ ಹೊಂದುತ್ತಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ ಎಂದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಸುನೀಲ್ ಕೂತ್ಕೊಳಪ್ಪ. ನಿಮ್ಮಲ್ಲಿ ಒಂದು ಮನವಿ ಏನಂದ್ರೆ ಅಶೋಕ್ ಅವರು ಮಾತನಾಡುವಾಗ ನಾನು ಒಂದು ಚಕಾರ ಎತ್ತಲಿಲ್ಲ, ಮಧ್ಯಪ್ರವೇಶ ಮಾಡಲಿಲ್ಲ. ಕೂತ್ಕೊಂಡು ಕೇಳಿದ್ದೀನಿ. ನೀವೂ ದಯವಿಟ್ಟು ನಾನು ಮಾತನಾಡುವಾಗ ಕುಳಿತು ಕೇಳಬೇಕೆಂದು ಮನವಿ.
ರಾಜಕೀಯ ನಿಶ್ಯಕ್ತಿ ಯಾವಾಗಲೂ ಇಲ್ಲ. ರಾಜಕೀಯವನ್ನ ಅಷ್ಟೊಂದು ತಲೆಕೆಡಿಸಿಕೊಂಡು ಮಾಡಬೇಕಾದ ಅವಶ್ಯಕತೆಯೂ ಇಲ್ಲ. ಅಧಿಕಾರವನ್ನು ಜನ ಕೊಡೋದು. ಜನರು ಆಶೀರ್ವಾದ ಮಾಡಿದರೆ ಮಾತ್ರ ಈ ಕಡೆ ಕುಳಿತುಕೊಳ್ಳುವುದಕ್ಕೆ ಸಾಧ್ಯ. ರಾಜಕೀಯವಾಗಿ ನಿಶ್ಯಕ್ತಿ ಎಂಬ ಪದ ನನ್ನ ಬಳಿ ಇಲ್ಲ. ನೀವೇನಾದರೂ ಆ ಥರ ತಿಳಿದುಕೊಂಡಿದ್ದರೆ ಅದು ತಪ್ಪು ಮಾಹಿತಿ ಎಂದು ವಿಪಕ್ಷಗಳು ಕಾಲೆಳೆದದ್ದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ರಾಜಕೀಯ ನಿಶ್ಯಕ್ತಿ ಬರುವುದಕ್ಕೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

