ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 04 : ಐದು ದಿನಗಳ ಹಿಂದೆ ಕಾಣೆಯಾಗಿದ್ದ ಬಿ.ಶಿವಲಿಂಗಪ್ಪ ಗುರುವಾರ ಶವವಾಗಿ ಪತ್ತೆಯಾಗಿರುವುದನ್ನು ಗಮನಿಸಿದರೆ ಇದೊಂದು ಪೂರ್ವಯೋಜಿತ ಹತ್ಯೆ ಎನ್ನುವ ಅನುಮಾನವಿದ್ದು, ಸಮಗ್ರ ತನಿಖೆ ನಡೆಸಿ ಹತ್ಯೆಕೋರರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸುವಂತೆ ಜಿಲ್ಲಾ ಮಡಿವಾಳರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಸಹಾಯಕರ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಬಿ.ರಾಮಪ್ಪ ಮಾತನಾಡಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಉಪಾಧ್ಯಕ್ಷರಾಗಿದ್ದ ಬಿ.ಶಿವಲಿಂಗಪ್ಪನವರು ಕೇವಲ ಮಡಿವಾಳ ಜನಾಂಗದವರಿಗಷ್ಟೆ ಸೀಮಿತವಾಗಿರಲಿಲ್ಲ. ಎಲ್ಲಾ ಜಾತಿ ಧರ್ಮದವರೊಡನೆ ಅನ್ಯೋನ್ಯವಾಗಿದ್ದರು. ರೇಣುಕಾ ಆಗ್ರೋ ಫರ್ಟಿಲೈಸರ್ಸ್ ಅಂಗಡಿಯಿಟ್ಟುಕೊಂಡಿದ್ದ ಇವರು ಬಿತ್ತನೆ ಸಮಯದಲ್ಲಿ ರೈತರಿಗೆ ಗೊಬ್ಬರ ನೀಡುವ ಮೂಲಕ ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಇವರ ಏಳಿಗೆಯನ್ನು ಸಹಿಸದ ಯಾರೋ ದುಷ್ಕರ್ಮಿಗಳು ಮಾನವೀಯತೆ ಮೀರಿ ಕೊಲೈಗೈದಿರುವುದು ಮಡಿವಾಳ ಸಮಾಜಕ್ಕೆ ಹಾಗೂ ಅವರ ಕುಟುಂಬಕ್ಕೆ ಅತೀವ ನೋವುಂಟು ಮಾಡಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಹಂತಕರನ್ನು ಬಂಧಿಸಿ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಜಿಲ್ಲಾ ಮಡಿವಾಳರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುನಾಥ್, ಬಸವರಾಜ್, ಗೋವಿಂದರಾಜ್, ನವೀನ್, ರಮೇಶ್, ಲಕ್ಷ್ಮಣ, ದೇವರಾಜ್, ಓಬಳೇಶ್, ಮಧು, ರಾಜಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.

















