ಸುದ್ದಿಒನ್, ಹಿರಿಯೂರು, ಡಿಸೆಂಬರ್. 11 : ತಾಲ್ಲೂಕಿನ ಪಟ್ರೆಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ಷೀರ ಸಂಜೀವಿನಿ ಯೋಜನೆ ಅಡಿಯಲ್ಲಿ ರಾಸು ಖರೀದಿಸಿದ ಸುಮಾರು 14 ಮಂದಿ ಮಹಿಳಾ ಫಲಾನುಭವಿಗಳಿಗೆ ಬಡ್ಡಿ ರಹಿತ ಸಾಲ ಚೆಕ್ ವಿತರಣೆಯನ್ನು ಶಿಮುಲ್ ನಿರ್ದೇಶಕ ಬಿಸಿ ಸಂಜೀವಮೂರ್ತಿ ವಿತರಿಸಿದರು.
ನಂತರ ಮಾತನಾಡಿದ ಅವರು ಬ್ಯಾಂಕ್ ಗಳಲ್ಲಿ ಸಾಲ ಪಡೆಯಲು ಕಷ್ಟ ಇದೆ. ಚೆಕ್ ಪಡೆದ 14 ಮಂದಿ ಫಲಾನುಭವಿಗಳನ್ನು ಬಿಟ್ಟು ಉಳಿದ ಫಲಾನುಭವಿಗಳಿಗೆ ಎರಡನೇ ಹಂತದಲ್ಲಿ ಚೆಕ್ ಕೊಡಲಾಗುತ್ತದೆ. ಪ್ರತಿ ತಿಂಗಳು ಕಂತ್ ಕಟ್ಟಬೇಕು. ಜೊತೆ ಜೊತೆಗೆ ಚೆಕ್ ಪಡೆದ ಫಲಾನುಭವಿಗಳು ಹೆಚ್ಚು ಹಾಲು ಉತ್ಪಾದಿಸುವತ್ತ ಗಮನ ಹರಿಸಿ, ಒಬ್ಬೊಬ್ಬ ಫಲಾನುಭವಿಗಳು ದಿನನಿತ್ಯ ಬೆಳಿಗ್ಗೆ, ಸಂಜೆ ಐದೈದು ಲೀಟರ್ ಹೆಚ್ಚು ಹಾಲು ಉತ್ಪಾದನೆ ಮಾಡಬೇಕು. ಆಗ ಮುಂದಿನ ಒಂದು ತಿಂಗಳೊಳಗೆ 1 ಸಾವಿರ ಲೀಟರ್ ಹಾಲು ಶೇಖರಣೆಯಾಗಬೇಕು. ಹೆಚ್ಚು ಹಾಲು ಉತ್ಪಾದನೆಯಾದಾಗ ಸಂಘಕ್ಕೆ ಉತ್ತಮ ಹೆಸರು ಬರುತ್ತದೆ. ಜೊತೆಗೆ ಫಲಾನುಭವಿಗಳ ಆದಾಯ ಕೂಡ ಹೆಚ್ಚುತ್ತದೆ. ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪಟ್ರೆಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಭಾಗ್ಯ ಮಾತನಾಡಿ ನಮ್ಮ ಸಂಘವು ಪ್ರತಿದಿನ 500 ಲೀಟರ್ ಹಾಲು ಶೇಖರಣೆ ಮಾಡಲಾಗುತ್ತಿತ್ತು. ರಾಸು ಖರೀದಿಸಲು ಬಡ್ಡಿ ರಹಿತ ಸಾಲ ನೀಡಿದ್ದರಿಂದ ಗ್ರಾಮದಲ್ಲಿ ಹಸುಗಳ ಸಾಕಾಣಿಕೆ ಹೆಚ್ಚಾಗಿದ್ದು ಇದೀಗ ಕಳೆದ ಎರಡು ತಿಂಗಳಿಂದ 500 ಲೀಟರ್ ಇದ್ದ ಹಾಲು ಸುಮಾರು 800 ಲೀಟರ್ ಗೆ ಏರಿಕೆಯಾಗಿದೆ. ಇನ್ನು ಹೆಚ್ಚು ಹಾಲು ಉತ್ಪಾದಿಸುವ ಮೂಲಕ ಸಂಘವು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪ್ರಶಸ್ತಿ ಪಡೆಯುವ ಗುರಿ ಹೊಂದಿದ್ದು, ಇದಕ್ಕೆ ಹಾಲು ಉತ್ಪಾದಕರು ಸಹಕರಿಸಬೇಕು. ಮುಂದಿನ ವರ್ಷದಲ್ಲಿ ಬಿಎಂಸಿ ಕೇಂದ್ರ ತೆರೆಯುವ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಿಮುಲ್ ವಿಸ್ತರಣಾಧಿಕಾರಿ ಕೃಷ್ಣಕುಮಾರ್, ಚಳ್ಳಕೆರೆ ಉಪವಿಭಾಗಾಧಿಕಾರಿ ಪುಟ್ಟರಾಜು, ಸಂಘದ ಉಪಾಧ್ಯಕ್ಷೆ ಶೃತಿ, ಸುಂದರಮ್ಮ , ಕುಮುದಾ, ತಂಗಮಣಿ, ಮಂಜುಳಾ , ಆರ್. ಗಾಯಿತ್ರಿ, ವಸಂತಿ, ಸೇಲ್ವಿ, ಕಲಾ, ಮಂಜುಳಾ ಪಳನಿ ಸ್ವಾಮಿ, ಅಮುಲಾ, ತೇನ್ ಮಣಿ, ಮಂಜುಳಾ ಗುಣಶೇಖರ್, ವೇಳ್ಳಿಯಮ್ಮ , ಕಾರ್ಯದರ್ಶಿ ಕಾವ್ಯ, ಸುರೇಶ್ ಬಾಬು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

