ನವದೆಹಲಿ : ಅಕ್ಟೋಬರ್ ನಲ್ಲಿ ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ನಿರೀಕ್ಷೆಯಲ್ಲಿರುವ ಸಂಸದ ಶಶಿ ತರೂರ್ ಅವರು ಸೋಮವಾರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು. ಪಕ್ಷದಲ್ಲಿ ಸುಧಾರಣೆ ತರಲು ಕೆಲವು ಯುವ ಕಾರ್ಯಕರ್ತರು ಸಿದ್ಧಪಡಿಸಿದ ಆನ್ಲೈನ್ ಮನವಿಗೆ ಅವರು ಒಪ್ಪಿಗೆ ನೀಡಿದ ನಂತರ ಈ ಸಭೆ ನಡೆದಿರುವುದು ಗಮನಾರ್ಹ.
ಕೆಲವು ತಿಂಗಳ ಹಿಂದೆ ಉದಯಪುರದಲ್ಲಿ ಕಾಂಗ್ರೆಸ್ ಅಂಗೀಕರಿಸಿದ ನಿರ್ಣಯಗಳಿಗೆ ಅನುಗುಣವಾಗಿ ಸುಧಾರಣೆಗಳನ್ನು ತರಲು ಪಕ್ಷದ ಕೆಲವು ಯುವ ನಾಯಕರು ಟ್ವಿಟರ್ನಲ್ಲಿ ಮನವಿಯನ್ನು ಮಾಡಿದ್ದರು. ಇದನ್ನು ಬೆಂಬಲಿಸಿ ಪಕ್ಷದ 650 ಮುಖಂಡರು ಸಹಿ ಹಾಕಿದ್ದರು. ಇದನ್ನು ಶಶಿ ತರೂರ್ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡು, ಇದನ್ನು ಪ್ರಚಾರ ಮಾಡಲು ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದ್ದರು.
ಉದಯಪುರದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲು ಪಾರದರ್ಶಕ ಚುನಾವಣೆ ನಡೆಸಲು ಮತ್ತು ಕುಟುಂಬದ ಒಬ್ಬ ಸದಸ್ಯರಿಗೆ ಒಂದು ಸ್ಥಾನವನ್ನು ನೀಡಲು ಕಾಂಗ್ರೆಸ್ ನಿರ್ಣಯಗಳನ್ನು ಅಂಗೀಕರಿಸಿತ್ತು.
ಇದರ ಭಾಗವಾಗಿ ಅಕ್ಟೋಬರ್ 17 ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಕಾಂಗ್ರೆಸ್ ಈಗಾಗಲೇ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಚುನಾವಣೆಗಳು ಮೂಲತಃ ಸೆಪ್ಟೆಂಬರ್ನಲ್ಲಿ ನಡೆಯಬೇಕಾಗಿದ್ದರೂ, ಕಾರಣಾಂತರಗಳಿಂದ ಅಕ್ಟೋಬರ್ಗೆ ಮುಂದೂಡಲ್ಪಟ್ಟಿದೆ. ಆದರೆ ಚುನಾವಣೆ ನಡೆಯಲಿದೆ ಎಂದು ಎಲ್ಲರೂ ಭಾವಿಸುತ್ತಿರುವಾಗಲೇ ಕೆಲ ರಾಜ್ಯಗಳ ಅಧ್ಯಕ್ಷರು ರಾಹುಲ್ ಗಾಂಧಿ ಪರವಾಗಿ ನಿರ್ಣಯಗಳನ್ನು ಅಂಗೀಕರಿಸುತ್ತಿದ್ದಾರೆ. ಅಧ್ಯಕ್ಷರ ಆಯ್ಕೆಯನ್ನು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಬಿಡುವ ನಿರ್ಣಯವನ್ನು ಮೂರು ರಾಜ್ಯಗಳ ಪಿಸಿಸಿಗಳು ಈಗಾಗಲೇ ಅನುಮೋದಿಸಿವೆ.
ಈ ಮೂಲಕ ಚುನಾವಣೆಯಿಲ್ಲದೆ ಮತ್ತೆ ಗಾಂಧಿ ಕುಟುಂಬಕ್ಕೆ ಪಕ್ಷದ ಅಧಿಕಾರ ಹಸ್ತಾಂತರಿಸಲು ಯತ್ನಿಸುತ್ತಿದ್ದಾರೆ ಎಂಬ ಪ್ರಚಾರ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಶಶಿ ತರೂರ್ ಅವರು ಕಾಂಗ್ರೆಸ್ನಲ್ಲಿ ರಚನಾತ್ಮಕ ಸುಧಾರಣೆಗಳನ್ನು ತರಬೇಕೆಂಬ ಮನವಿಯನ್ನು ಬಹಿರಂಗವಾಗಿ ಬೆಂಬಲಿಸಿದರು. ಪಕ್ಷದಲ್ಲಿ ಸುಧಾರಣೆಗೆ ಆಗ್ರಹಿಸಿದ ಜಿ-23 ನಾಯಕರಲ್ಲಿ ಇವರೂ ಒಬ್ಬರು. ಈ ಕುರಿತು 2020ರಲ್ಲಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಕುರಿತು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವುದಾಗಿ ತರೂರ್ ಕೆಲ ದಿನಗಳ ಹಿಂದೆ ಹೇಳಿದ್ದರು. ಗಾಂಧಿ ಕುಟುಂಬವನ್ನು ಹೊರತು ಪಡಿಸಿ ಮತ್ತೊಬ್ಬ ನಾಯಕ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ರಾಹುಲ್ ಗಾಂಧಿ ಸಿದ್ಧರಿಲ್ಲದಿದ್ದರೆ, ಸೋನಿಯಾ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಕಣಕ್ಕಿಳಿಸಲು ಬಯಸಿದ್ದಾರೆ. ಅದೇ ನಿಜವಾದರೆ ಶಶಿ ತರೂರ್ ಅವರೂ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತ ಎನ್ನುತ್ತಿವೆ ಅವರ ಆಪ್ತ ಮೂಲಗಳು.