ಸುದ್ದಿಒನ್, ಚಿತ್ರದುರ್ಗ. ಆ. 25 : ಪ್ರತಿವರ್ಷದಂತೆ ಈ ವರ್ಷವೂ ಕೃಷಿ, ತೋಟಗಾರಿಕೆ, ನೀರಾವರಿ, ಹೈನುಕೃಷಿಗೆ ಸಂಬಂಧಿಸಿದ ಯೋಜನೆಗಳನ್ನು ರೈತರು ಯಾವ ರೀತಿ ಅಳವಡಿಸಿಕೊಂಡು ಉಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಸೂಕ್ತ ಮಾಹಿತಿ ಒದಗಿಸುವ ಪ್ರದರ್ಶನ, ಮತ್ತು ಮಾರಾಟವನ್ನು ಅತ್ಯಂತ ಅಚ್ಚುಕಟ್ಟಾಗಿ ಎಲ್ಲೂ ಲೋಪವಾಗದಂತೆ ನಿರ್ವಹಿಸಿ ಯಶಸ್ವಿಗೊಳಿಸುವಂತೆ ಸಭೆಯಲ್ಲಿ ಸೇರಿದ್ದ ಎಲ್ಲಾ ಇಲಾಖಾವಾರು ಪ್ರತಿನಿಧಿಗಳಿಗೆ ಜಿ.ಪಂ. ಸಿ.ಇ.ಓ. ಡಾ. ಎಸ್. ಆಕಾಶ್ ಅವರು ಸೂಚನೆ ನೀಡಿದರು.
ಪ್ರತಿವರ್ಷದಂತೆ ಈ ವರ್ಷವೂ ಸಹ ಶರಣಸಂಸ್ಕøತಿ ಉತ್ಸವ-2025ರ ಸಂದರ್ಭದಲ್ಲಿ ಕೃಷಿ, ಕೈಗಾರಿಕಾ ಮೇಳ ಮತ್ತು ಪ್ರದರ್ಶನವನ್ನು ಏರ್ಪಡಿಸಲು ಶ್ರೀ ಜಗದ್ಗುರು ಮುರುಘರಾಜೇಂದ್ರ ಬಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್. ಆಕಾಶ್ ಅವರುಗಳ ಉಪಸ್ಥಿತಿಯಲ್ಲಿ ಶ್ರೀ ಬೃಹನ್ಮಠದ ಜಯದೇವ ಸಭಾಂಗಣದಲ್ಲಿಂದು ನಡೆದ ಪೂರ್ವಭಾವಿ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಈ ಹಿಂದೆ ನಡೆದ ಕೃಷಿಮೇಳಗಳು ಅರ್ಥಪೂರ್ಣವಾಗಿ ನಡೆದಿವೆ. ಈ ಮೇಳವೂ ಕೃಷಿಕರು, ತೋಟಗಾರಿಕೆ, ಸಾಕುಪ್ರಾಣಿಗಳ ನಿರ್ವಹಣೆ, ಗೃಹಕೈಗಾರಿಕೆ, ಸಣ್ಣ ಮತ್ತು ಬೃಹತ್ ಕೈಗಾರಿಕೆ ಸೇರಿದಂತೆ ರೈತರಿಗೆ ವರದಾನವಾಗುವಂತಹ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ದೊರೆಯುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಇದಕ್ಕೆ ಬೇಕಾದ ಸೌಕರ್ಯ, ಸಂಪನ್ಮೂಲ, ಒದಗಿಸುವುದಾಗಿ ಡಾ. ಬಸವಕುಮಾರ ಸ್ವಾಮೀಜಿ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ. ಎಸ್. ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಶ್ರೀಮತಿ ಗಾಯತ್ರಿ ಸೇರಿದಂತೆ ಕೃಷಿ, ರೇಷ್ಮೆ, ಅರಣ್ಯ, ಆಯುಷ್, ಸಾಮಾಜಿಕ ಅರಣ್ಯ, ಭದ್ರಾಮೇಲ್ದಂಡೆ, ವರ್ಷಾ ಏಜೆನ್ಸೀಸ್, ರುಡ್ಸೆಟ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬಬ್ಬೂರು ಕೃಷಿ ವಿಜ್ಞಾನ ಕೇಂದ್ರ, ಸೋಲಾರ್ ಎಕ್ಯುಪ್ಮೆಂಟ್, ಸೂರ್ಯ ಗರ್ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜೆಎಂಐಟಿ ಬಯೋಡಿಸೇಲ್, ಇನ್ನಿತರೆ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.
ಮೇಲಿನ ಎಲ್ಲಾ ಇಲಾಖೆಯವರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಯಶಸ್ವಿಗೊಳಿಸಬೇಕೆಂದು ಡಾ. ಎಸ್. ಆಕಾಶ್ ಅವರು ತಿಳಿಸಿದರು.
ಕೃಷಿಮೇಳದ ಸಂಘಟಕ ಪಿ. ವೀರೇಂದ್ರಕುಮಾರ್ ಕಾರ್ಯಕ್ರಮ ನಿರ್ವಹಿಸಿ ಶರಣು ಸಮರ್ಪಣೆ ಮಾಡಿದರು.
