ಸುದ್ದಿಒನ್, ಚಿತ್ರದುರ್ಗ, ಮೇ. 27 : ಯಾವುದೇ ಕಲಾವಿದ ಒಳ್ಳೆಯ ಮತ್ತು ಕೆಟ್ಟ ಪಾತ್ರಗಳನ್ನು ಮಾಡುವಾಗ ಆತನಿಗೆ ನಟನೆ ಮುಖ್ಯವಾಗಬೇಕು. ಆ ಪಾತ್ರಕ್ಕೆ ನ್ಯಾಯ ಒದಗಿಸುವಂತಾಗಬೇಕು ಎಂದು ಚಲನಚಿತ್ರ ನಟ ಶರತ್ ಲೋಹಿತಾಶ್ವ ಅಭಿಪ್ರಾಯ ಪಟ್ಟರು.
ನಗರದ ಪತ್ರಿಕಾ ಭವನದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಗೆಳೆಯರ ಬಳಗ, ದುರ್ಗದ ಸಿರಿ ಕಲಾ ಸಂಘ ಹಾಗೂ ರೈತಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ನಮ್ಮೂರ ನೆಂಟರು ಎಂಬ ವಿಶೇಷ ಮಾಲಿಕೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮನೆಯಲ್ಲಿನ ಕಲಾಭಿವ್ಯಕ್ತಿಯನ್ನು ನೋಡಿ ಕಲಿತವನು ನಾನು. ತಂದೆ ಲೋಹಿತಾಶ್ವರು ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ ಅವರು. ಚಿಕ್ಕವರಿದ್ದಾಗ ಅವರ ರಂಗಭೂಮಿ ನಾಟಕಗಳನ್ನು ನೋಡಿ ಬೆಳೆದಿದ್ದೇನೆ. ಆರಂಭದಲ್ಲಿ ಚಿತ್ರರಂಗದಲ್ಲಿ ಬೇರೂರಲು ಕಷ್ಟ ಪಟ್ಟಿದ್ದೇನೆ. ಎಷ್ಟೇ ದೊಡ್ಡ ಪಾತ್ರ ಮಾಡಿದರೂ ನಮ್ಮನ್ನು ಬೆಳೆಸುವವರು ಬೇರೆ ಬೇರೆ ಕಾರಣಗಳಿಗೆ ತುಳಿಯಲು ಶುರು ಮಾಡಿದ್ದರು. ಅಂತಹ ಸಮಯಗಳಲ್ಲಿ ನಮ್ಮ ತಂದೆಯವರು ತುಂಬುತ್ತಿದ್ದ ಆತ್ಮಸ್ಥೈರ್ಯ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ ಎಂದರು.
ನಾಡಿನ ನೆಲ, ಜಲ, ಭಾಷೆ ವಿಷಯಗಳ ಕುರಿತಾಗಿ ಸದಾ ಎಚ್ಚರದಲ್ಲಿರಬೇಕು. ಅದೇ ರೀತಿ ನಾವು ಹುಟ್ಟಿ ಬೆಳೆದ ಪರಿಸರದ ಬಗ್ಗೆಯೂ ಕಾಳಜಿ ಇರಬೇಕು. ಹಿರಿಯೂರು ಸಮೀಪದ ಹಳ್ಳಿಯಲ್ಲಿ ವಿವಾಹವಾಗಿದ್ದೇನೆ. ಆದರೆ ಇಲ್ಲಿಗೆ ಬಂದು ಇಂತಹ ವಿನೂತನ ಕಾರ್ಯಕ್ರಮದಲ್ವಿ ಭಾಗವಹಿಸಿರುವುದು ನನ್ನ ಪುಣ್ಯ. ನಮ್ಮ ತಂದೆಯವರ ಒಡನಾಡಿಗಳು ನನ್ನನ್ನೂ ಕರೆಸಿ ಇಂತಹ ಹೊಸತನದ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಉಪನ್ಯಾಸ ಡಾ. ಹೇಮಂತ ರಾಜು ಮಾತನಾಡಿ, ಬಹುಭಾಷಾ ನಟನಾಗಿ ಹಲವು ಭಾಷೆಗಳಲ್ಲಿ ನಟನೆ ಮಾಡಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಶ್ರೀಯುತರು ಪ್ರತಿಭಾನ್ವಿತರು ಎಂದು ಬಣ್ಣಿಸಿದರು. ಮನುಷ್ಯನ ಸಾಂಸ್ಕೃತಿಕ ಅಭಿವ್ಯಕ್ತಿ ಸಮಾಜವನ್ನು ಶಾಂತವಾಗಿಡಲು ಸಹಕಾರಿಯಾಗಲಿದೆ. ಸಾಹಿತ್ಯ ಸಾಂಸ್ಕೃತಿಕವಾಗಿ ನಮ್ಮ ಸೇವೆಗಳು ಸದಾ ಕಾಲ ಉಳಿಯಲಿವೆ ಎಂದರು.
ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಮಾತನಾಡಿ, ಬಹುಭಾಷೆಗಳಲ್ಲಿ ಪ್ರಕಾಶ್ ರಾಜ್ ನಂತರ ಶರತ್ ಅವರ ಅಭಿನಯ ನೋಡುಗರನ್ನು ಮನಸೂರೆಗೊಳ್ಳಃವಂತೆ ಮಾಡಿದೆ. ಕಂಚಿನ ಕಂಠದ ದ್ವನಿ ಹೊಂದಿರುವ ಕನ್ನಡದ ಏಕೈಕ ನಟ ಇವರು. ಖಳನಟರ ಪಾತ್ರಗಳನ್ನು ಮಾಡುವವರನ್ನು ಸಮಾದ ಖಳರನ್ನಾಗಿ ನೋಡಬಾರದು. ಪರದೆಯ ಮೇಲೆ ಖಳರಾಗಿ ನಟಿಸಿದವರು ನಿಜ ಜೀವನದಲ್ಲಿ ಇರುವುದೇ ಬೇರೆ ಎಂದರು. ದಶಕಗಳ ಹಿಂದೆ ಚಂದ್ರಪ್ಪ ದುರ್ಗದ ನಗರಸಭಾಧ್ಯಕ್ಷರಾದಾಗ ಎರಡು ಲಕ್ಷ ಮರ ಬೆಳೆಸಿದರು.ಇದೀಗ ನಾವು ಮಾತೆತ್ತಿದರೆ ಬರದ ನಾಡು ಎನ್ನುತ್ತೇವೆ. ಆದರೆ, ನೆಂಟಸ್ತಿಕ ಮಾಡಿಕೊಂಡಿರುವ ಇಂತಹ ಮಹನೀಯರ ಕರೆಸಿ ಈ ತರಹದ ವಿನೂತನ ಕಾರ್ಯಕ್ರಮ ಮುಂದುವರೆಯಬೇಕು ಎಂದರು. ಜಿಲ್ಲಾ ಪತ್ರಕರ್ತರ ಜಿಲ್ಲಾಧ್ಯಕ್ಷ ವಿನಾಯಕ ತೋಡರನಾಳ್ ಮಾತನಾಡಿ, ಚಿತ್ರದುರ್ಗ ಅನೇಕ ಕಲಾವಿದರನ್ನು ಕರೆಸಿಕೊಂಡಿದೆ. ಸಾಕಷ್ಟು ಸಿನೆಮಾಗಳೂ ಆಗಿವೆ ಎಂದು ಹೇಳಿದರು.
ಆಶಯ ನುಡಿಗಳನ್ನಾಡಿದ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಸಾಹಿತ್ಯ, ರಂಗಭೂಮಿ, ಇನ್ನಿತರೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹೆಸರು ಗಳಿಸಿರುವ ಮಹನೀಯರು ಇದೇ ಜಿಲ್ಲೆಯವರಾಗಿರುವ ಸಾಧಕರನ್ನು ಕರೆಸಿ ಇಂತಹ ಕಾರ್ಯಕ್ರಮ ಮಾಡುತ್ತಿರುವುದನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕೆ.ಎಂ. ವೀರೇಶ್ ಮಾತನಾಡಿ, ಮದಕರಿನಾಯಕನಂತಹ ಐತಿಹಾಸಿಕ ಪಾತ್ರವನ್ನು ಶರತ್ ಅವರೇ ಮಾಡಬೇಕು. ಇಂತಹ ಸಂದರ್ಭಕ್ಕೆ ನಾನು ಸಾಕ್ಷಿಯಾಗುತ್ತೇನೆ ಎಂದರು. ರೈತಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ ಇದ್ದರು.
ರಾಜಶೇಖರ್ ಸಾಗತ್ವಿಸಿದರು. ಕೆ.ಪಿ.ಎಂ. ಗಣೇಶಯ್ಯ ಪ್ರಾರ್ಥಿಸಿದರು. ಜಡೇಕುಂಟೆ ಮಂಜುನಾಥ್ ನಿರಕಪಿಸಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















