ಮಕ್ಕಳ ಮನೋಭಾವ ಬದಲಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು : ಟಿಹೆಚ್‍ಒ ಡಾ.ಬಿ.ವಿ.ಗಿರೀಶ್

2 Min Read

ಚಿತ್ರದುರ್ಗ. ಜುಲೈ12:  ಮಕ್ಕಳ ಮನೋಭಾವ ಬದಲಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ನಗರದ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ (ಡಯಟ್) ಸಭಾ ಭವನದಲ್ಲಿ ಆರೋಗ್ಯ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಚಿತ್ರದುರ್ಗ ತಾಲ್ಲೂಕಿನ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ವಿಜ್ಞಾನ ಶಿಕ್ಷಕರಿಗೆ ಏರ್ಪಡಿಸಿದ ಅಡ್ವಕೆಸಿ (ಸಮರ್ಥನಾ) ಸಭಾ ಕಾರ್ಯಾಗಾರ ಉಧ್ಘಾಟಿಸಿ ಅವರು ಮಾತನಾಡಿದರು.

ಕೀಟಜನ್ಯ ರೋಗಗಳು ಪ್ರಪಂಚಾದ್ಯಂತ 110 ದೇಶಗಳಲ್ಲಿ ಪ್ರತಿವರ್ಷ 10 ಕೋಟಿಗೂ ಹೆಚ್ಚು ಪ್ರಕರಣಗಳು ಕಂಡುಬರುತ್ತದೆ. ಕೀಟಗಳು ಗಾತ್ರದಲ್ಲಿ ಚಿಕ್ಕದಾದರೂ ಇವುಗಳು ಹರಡುವ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ, ಮೆದುಳ ಜ್ವರ, ಆನೆಕಾಲು ರೋಗಗಳ ಪರಿಣಾಮ ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಮರ್ಥನಾ ಸಭೆಯನ್ನು  ಶಿಕ್ಷಕರಿಗೆ, ಚುನಾಯಿತ ಪ್ರತಿನಿಧಿಗಳಿಗೆ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ, ಸಮುದಾಯ ಜಾಗೃತೀಕರಣ, ಗುಂಪು ಸಭೆಗಳು ನಡೆಸಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾ ಕೀಟ ಶಾಸ್ತ್ರಜ್ಞೆ ನಂದಿನಿ ಕಡಿ ಮಾತನಾಡಿ, ಚಿತ್ರದುರ್ಗ ಡೆಂಗ್ಯೂ ಜ್ವರಕ್ಕೆ ಹೈರಿಸ್ಕ್ ಹಾಟ್‍ಸ್ಪಾಟ್ ಜಿಲ್ಲೆಯಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಕೃತಕ ಸೊಳ್ಳೆ ಬತ್ತಿಗಳನ್ನು ಮಕ್ಕಳು ಶಾಲಾ ಹಂತದಲ್ಲಿ ಹೇಗೆ ತಯಾರಿಸಬಹುದು ಎಂಬುದರ ಬಗ್ಗೆ ಮಾಹಿತಿನೀಡಿ. ನಿಮ್ಮ ನಿಮ್ಮ ಶಾಲೆಯ ಮಕ್ಕಳಿಗೆ ಪ್ರಾಜೆಕ್ಟ್ ವರ್ಕ್ ನೀಡಿರಿ ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಸಾಂಕ್ರಾಮಿಕ ರೋಗಗಳು ಕಲುಷಿತ ನೀರು ಆಹಾರ ಸೇವನೆಯಿಂದ, ವೈಯಕ್ತಿಕ ಸ್ವಚ್ಚತಾ ಕೊರತೆ, ಕೀಟಗಳಿಂದ ಹರಡತ್ತವೆ. ಸಾಮಾನ್ಯವಾಗಿ ಸೊಳ್ಳೆಗಳ ಕಡಿತ ಮಲೇರಿಯಾ ಡೆಂಗ್ಯೂ, ಚಿಕನ್ ಗುನಿಯ, ಮೆದುಳ ಜ್ವರ ಹರಡುತ್ತವೆ. ಈಗ ಡೆಂಗ್ಯೂ ಜ್ವರ ರಾಜ್ಯಾದ್ಯಂತ ಹೆಚ್ಚು ಪ್ರಕರಣಗಳು ಕಂಡು ಬಂದಿದೆ. ಚಿತ್ರದುರ್ಗ ನಗರದಲ್ಲಿ 2024ರ ಜುಲೈನಲ್ಲಿ  5 ಪ್ರಕರಣ ಮತ್ತು ಜನವರಿ 2024 ರಿಂದ ಜುಲೈ 10 ರವರೆಗೆ ಒಟ್ಟು 85 ಪ್ರಕರಣಗಳು ವರದಿಯಾಗಿವೆ. ಯಾವುದೇ ಸಾವು ನೋವು ಸಂಭವಿಸಿರುವುದಿಲ್ಲ ಎಂದು ಹೇಳಿದರು.

ಆರೋಗ್ಯ ಇಲಾಖೆ ಮಾರ್ಗದರ್ಶನದಂತೆ ಪ್ರತಿ ಶುಕ್ರವಾರ ಎಲ್ಲಾ ಮನೆಗಳಲ್ಲಿ ಒಣ ದಿನ ಆಚರಣೆ ಮಾಡುವುದು. ಅಂದರೆ ಶುಕ್ರವಾರದಂದು ಎಲ್ಲಾ ಮನೆಗಳಲ್ಲಿ ನೀರು ಸಂಗ್ರಹಿಸುವ ಪರಿಕರಗಳು ಡ್ರಮ್, ಬ್ಯಾರೆಲ್, ತೊಟ್ಟಿ ಇತರೆ ಇವುಗಳನ್ನು ಸ್ವಚ್ಛವಾಗಿ ತೊಳೆದು ಒಣಗಿಸಿ ನಂತರ ನೀರು ಸಂಗ್ರಹಿಸಿ ಮುಚ್ಚಳ ಮುಚ್ಚಿ ನೀರು ಸಂಗ್ರಹಿಸುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಕಡಿಮೆಯಾಗುತ್ತದೆ, ಡೆಂಗ್ಯೂ ಪ್ರಕರಣಗಳು ಕಡಿಮೆಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಡಯಟ್ ಉಪ ಪ್ರಾಂಶುಪಾಲ ಅಶ್ವತ್ಥ ನಾರಾಯಣ, ಉಪನ್ಯಾಸಕರಾದ ಪೂರ್ಣಿಮಾ, ನಿತ್ಯಾನಂದ ಬಿ.ಎನ್., ಪ್ರಶಾಂತ್ ಕೆ.ಜೆ., ರಾಘವೇಂದ್ರ ಎನ್., ಲಿಂಗರಾಜು ಆರ್., ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಸುರೇಶ್ ಬಾಬು,  ಚಿತ್ರದುರ್ಗ ತಾಲ್ಲೂಕಿನ ವಿವಿಧ ಶಾಲೆಗಳು 30ಕ್ಕೂ ಹೆಚ್ಚು ವಿಜ್ಞಾನ ಶಿಕ್ಷಕರು, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಳಲಿ ಶ್ರೀನಿವಾಸ, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks