ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 28 : ಆಧಾರದ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸುವುದೇ ಇತಿಹಾಸ. ಆಧಾರವಿಲ್ಲದ ಇತಿಹಾಸಕ್ಕೆ ಪ್ರಾಮುಖ್ಯತೆಯಿಲ್ಲ. ಅದಕ್ಕಾಗಿ ಆಧಾರ ಸಹಿತ ಇತಿಹಾಸ ಕಟ್ಟುವಲ್ಲಿ ಸಂಶೋಧಕರು, ಇತಿಹಾಸಕಾರರು ಮುಂದಾಗಬೇಕಿದೆ ಎಂದು ರಾಯಲ್ ಕಾಲೇಜ್ ಮತ್ತಿಕೆರೆ ಬೆಂಗಳೂರಿನ ಪ್ರಾಚಾರ್ಯರಾದ ಡಾ.ಲಕ್ಷ್ಮಿಶ್ ಹೆಗಡೆ ಸೋಂದಾ ಹೇಳಿದರು.
ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ ಸಂಸ್ಕೃತಿ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಸಹಯೋಗದೊಂದಿಗೆ ಐ.ಎಂ.ಎ.ಹಾಲ್ನಲ್ಲಿ ಭಾನುವಾರ ನಡೆದ 53 ನೇ ಉಪನ್ಯಾಸದಲ್ಲಿ ಕದಂಬ-ಚಿತ್ರದುರ್ಗ ಸಂಬಂಧ : ಕೆಲವು ಗ್ರಹಿಕೆಗಳು ವಿಷಯ ಕುರಿತು ಮಾತನಾಡಿದರು.
ಪ್ರಾಥಮಿಕ ಆಧಾರಗಳಲ್ಲೆ ಅಗ್ರ ಸ್ಥಾನದಲ್ಲಿ ನಿಲ್ಲುವುದೇ ಶಾಸನ. ಶಾಸನ ರಹಿತ ಸಂಗತಿಗೆ ಪ್ರಾಮುಖ್ಯತೆಯಿಲ್ಲ. ಚಂದ್ರವಳ್ಳಿ ಶಾಸನ ಕುರಿತು ಅಧ್ಯಯನ ಚರ್ಚೆಗಳಾಗಿದೆಯೆಂದರೆ ವಿಶೇಷವಿದೆ ಎಂದರ್ಥ. ಕರ್ನಾಟಕ ಕೆಲವು ಶಾಸನ ಪ್ರಧಾನ ಪಾತ್ರ ವಹಿಸುತ್ತದೆ. ಅನೇಕ ರಾಜ ಮನೆತನಗಳು ಕರ್ನಾಟಕದಲ್ಲಿ ಆಳ್ವಿಕೆ ಮಾಡಿವೆ. ಒಲವು-ನಿಲುವು ಒಂದು ಕಡೆಯಾದರೆ ಕದಂಬ ಸಂಬಂಧಿತ ಒಲವು-ನಿಲುವು ವಿಭಿನ್ನವಾಗಿದೆ. ಪ್ರಶ್ನೆ ಮಾಡಿದರೆ ಅನೇಕ ತರ್ಕಗಳು ಏಳುತ್ತವೆ ಎಂದು ತಿಳಿಸಿದರು.
ಕದಂಬರ ಬಗ್ಗೆ ಅಧ್ಯಯನ ಮಾಡಿದಾಗ 65 ಶಾಸನಗಳು ಸಿಗುತ್ತವೆ. ಬನವಾಸಿ ಆದಿಕದಂಬರ ಕುರಿತಾಗಿ ದೊರಕಿವೆ. 65 ಶಾಸನಗಳನ್ನು ಅವಲೋಕನ ಮಾಡಿದರೆ ಸಾಮ್ರಾಜ್ಯಶಾಹಿ ಧೋರಣೆಗಳು ಕಂಡು ಬರುವುದಿಲ್ಲ. ಸಂಸ್ಕೃತಿಯ ಮೇಲೆ ಒಲವು-ನಿಲುವು ಇಟ್ಟುಕೊಂಡವರು ಕದಂಬರು. ಕದಂಬರ ಕಾಲ ಭಾಷಾ ಸಂಕ್ರಮಣದ ಕಾಲವಾಗಿತ್ತು. ಮಳವಳ್ಳಿ ಶಾಸನ ಪ್ರಾಕೃತದಲ್ಲಿದೆ. ಪ್ರಾಯೋಗಿಕ ಚಿಂತನೆ ನಡೆಸಿದರೆ ಮಯೂರವರ್ಮ ಆಂಧ್ರದ ಪರ್ವತ ಪ್ರದೇಶ ನಲ್ಲಮಲೈಗೆ ಹೋಗುತ್ತಾನೆ. ಬೆಂಚು ಬುಡಕಟ್ಟು ಜನಾಂಗ ಆಗ ಮಯೂರನಿಗೆ ಸಹಾಯ ಮಾಡುತ್ತದೆ. ನಂತರ ಅಲ್ಲಿಂದ ಚಂದ್ರವಳ್ಳಿಗೆ ಬಂದು ಒಂದಷ್ಟು ಕಾಲ ಕಳೆಯುತ್ತಾನೆ. ಕದಂಬರ 65 ಶಾಸನಗಳಲ್ಲಿ 64 ಶಾಸನಗಳ ಸ್ವರೂಪ ಒಂದು ರೀತಿಯಾದರೆ ಚಂದ್ರವಳ್ಳಿಯ ಒಂದು ಶಾಸನ ಮಾತ್ರ ವಿಭಿನ್ನವಾಗಿದೆ. 64 ಶಾಸನಗಳಿಗೆ ಕದಂಬ ಶಾಸ್ತ್ರ ಸೂತ್ರವಿದೆ. ಒಂದಕ್ಕೆ ಇಲ್ಲ.
ಮಯೂರ ರಾಜನಾಗುವ ಪೂರ್ವದಲ್ಲಿ ಕೆತ್ತಿಸಿದ ಶಾಸನ. ಚಂದ್ರವಳ್ಳಿ ಶಾಸನ ಕೆತ್ತಿದ ಬಂಡೆಗಲ್ಲು ಗಮನಿಸಿದರೆ ಶಾಸನ ಕೆತ್ತಲು ಬಳಸುವ ಕಲ್ಲಲ್ಲ ಎನ್ನುವುದು ಗೊತ್ತಾಗುತ್ತದೆ. ಮೂಲ ಶಾಸನ ಸಂಬಂಧ 1929 ರಲ್ಲಿ ಎಂ.ಹೆಚ್.ಕೃಷ್ಣ ಕದಂಬರು ಮಯೂರು ವರ್ಮನ ಇತಿಹಾಸದ ಕುರಿತು ಅಧ್ಯಯನ ನಡೆಸಿದ್ದಾರೆ. 1984 ರಲ್ಲಿ ಸಂಶೋಧಕ ಡಾ.ಬಿ.ರಾಜಶೇಖರಪ್ಪನವರು ಪುನರ್ ಅಧ್ಯಯನ ನಡೆಸಿ ಒಂದೆ ಶಾಸನದ ಬಗ್ಗೆ ವಿಭಿನ್ನತೆಯನ್ನು ಪ್ರಕಟಿಸಿರುವುದರಿಂದ ಗೊಂದಲ ಸೃಷ್ಠಿಯಾಗಿದೆ ಎಂದರು.
ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಹದಿನೆಂಟು ವರ್ಷಗಳ ಕಾಲ ಕರ್ನಾಟಕ ರಾಜ್ಯದಲ್ಲಿ ಕದಂಬರು, ಮಯೂರ ವರ್ಮನ ಇತಿಹಾಸ ಕುರಿತು ಡಾ.ಲಕ್ಷ್ಮೀಶ್ ಹೆಗಡೆ ಸೋಂದಾರವರು ಅಧ್ಯಯನ ನಡೆಸಿದ್ದಾರೆ. ಅನೇಕ ಉಪನ್ಯಾಸಗಳನ್ನು ನೀಡಿರುವ ಇವರಿಗೆ ಪ್ರಶಸ್ತಿಗಳು ಹುಡುಕಿ ಬಂದಿವೆ. ಬನವಾಸಿ ಕದಂಬರ ಅನೇಕ ಸಂಶೋಧನಾ ಕೃತಿಗಳನ್ನು ರಚಿಸಿರುವ ಇವರದು ವಸ್ತುನಿಷ್ಠ ಅಧ್ಯಯನ ಎಂದು ಗುಣಗಾನ ಮಾಡಿದರು.
ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಡಾ.ಲಕ್ಷ್ಮಣ್ತೆಲಗಾವಿ, ರೇಣುಕಾ ಪ್ರಕಾಶನ ಗೌರವಾಧ್ಯಕ್ಷೆ ವೈ.ಗುಣವತಿ ಮಹಂತೇಶ್, ರಾಜಜಯಚಂದ್ರ ಮದಕರಿನಾಯಕ
ಡಾ.ದೊಡ್ಡಮಲ್ಲಯ್ಯ, ಸುರೇಶ್ ಬಂಡಾರಿ, ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಕೆ.ರಾಜೀವಲೋಚನ, ಮೃತ್ಯುಂಜಯಪ್ಪ
ಕುಮಾರ್ ಬಡಪ್ಪ, ಇತಿಹಾಸ ಪ್ರಾಧ್ಯಾಪಕ ಶಿವಪ್ರಸಾದ್ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.














