ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 20 : ಪ್ರಶಿಕ್ಷಣಾರ್ಥಿಗಳು ಪಠ್ಯ ಬೋಧನೆಯಲ್ಲಿ ರಂಗಭೂಮಿಯ ಕೌಶಲಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು. ಪರಿಣಾಮ ಬೋಧನೆಗೆ ರಂಗಭೂಮಿ ಉತ್ತಮ ಮಾರ್ಗದರ್ಶನವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಶಕ್ತಿ ರಂಗಭೂಮಿಗಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಕೆ.ಎಂ.ವೀರೇಶ್ ಅಭಿಪ್ರಾಯಪಟ್ಟರು.

ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ದಿ:20-05-2025ರಂದು ಬೆಳಿಗ್ಗೆ 10-30 ಗಂಟೆಗೆ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಗರದ ರಾ.ಹೆ.50ರಲ್ಲಿರುವ ಮಲ್ಲಾಪುರ ಗ್ರಾಮದ ಬಾಪೂಜಿ ಸಮೂಹ ಸಂಸ್ಥೆ ಕಾಲೇಜು ಆವರಣದಲ್ಲಿ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾಥಿಗಳಿಗೆ ಶಿಕ್ಷಣದಲ್ಲಿ ರಂಗಕಲೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಳಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆ ಇಂದಿನ ಶಿಕ್ಷಕರ ಗುರಿಯಾಗಬೇಕು. ದೇಶದ ಭವಿಷ್ಯವನ್ನು ಸದೃಢಗೊಳಿಸುವ ದೇಶಪ್ರೇಮದ ಮಕ್ಕಳನ್ನು ಪ್ರೋತ್ಸಾಹಿಸಬೇಕು. ದುಶ್ಚಟಗಳಿಂದ ದೂರವಿದ್ದು ಸಾಧನೆಯ ಪಥದತ್ತ ಸಾಗುವ ಮಕ್ಕಳ ಉನ್ನತಿಗೆ ಶ್ರಮಿಸಬೇಕು. ಜಾತಿಮತ ಪಂಥಗಳನ್ನು ತೊರೆದು, ಮೇಲುಕೀಳು ಎಂಬ ಭೇದಬಾವವಿಲ್ಲದೆ ಪ್ರವಚನದಲ್ಲಿ ತೊಡಗಬೇಕು. ಇದಕ್ಕಾಗಿ ರಂಗಭೂಮಿಯ ಬಗೆಗಿನ ಆಳವಾದ ಅಧ್ಯಯನ ಮಾಡಬೇಕು ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಭಾರತೀಯ ರಂಗ ಪರಂಪರೆಯು ನಮ್ಮ ನಾಡಿನ ಸಂಸ್ಕøತಿಯನ್ನು ಉಳಿಸಿ ಬೆಳೆಸುತ್ತಿದೆ. ಸಾಂಸ್ಕøತಿಕವಾಗಿ ಶಿಕ್ಷಣ ಮನರಂಜನೆ ನೀಡುವ ಜೊತೆಗೆ ಶಿಸ್ತು, ಏಕಾಗ್ರತೆಯನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ರಂಗಭೂಮಿಯ ಹಲವು ಆಯಾಮಗಳನ್ನು ಬೋಧನೆಗೆ ತೊಡಗಿಸಿದರೆ ಸಾರ್ಥಕವಾಗುತ್ತದೆ ಎಂದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯೆ ಪ್ರೊ.ಎಂ.ಆರ್.ಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಆಹಾರ ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ, ರಂಗಸೌರಭ ಕಲಾ ಸಂಘದ ಅಧ್ಯಕ್ಷ ಡಾ.ಕೆ. ಮೋಹನ್ಕುಮಾರ್, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಉಪಪ್ರಾಚಾರ್ಯ ಎಚ್.ಎನ್.ಶಿವಕುಮಾರ್, ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ಉಪನ್ಯಾಸಕರಾದ ಟಿ.ವೈ ಗೀತಾ, ಓ.ಎಂ. ಮಂಜುನಾಥ, ಶಿಕ್ಷಣದಲ್ಲಿ ರಂಗಕಲೆ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ರಂಗ ತರಬೇತಿ ನೀಡಿದರು. ವಿಶಾಲಾಕ್ಷಿ ಪ್ರಾರ್ಥಿಸಿದರು. ಪವಿತ್ರ ಸ್ವಾಗತಿಸಿದರು, ಎಸ್.ಪಿ.ಪರಿಮಳ ವಂದಿಸಿದರು. ಎಸ್.ಎಚ್. ಚೈತ್ರ ನಿರೂಪಿಸಿದರು.

