ಬೆಂಗಳೂರು; ಶಾಸಕ ಬಸನಗೌಡ ಪಾಟೀಲ್ ಅವರು ಫೈಯರ್ ಬ್ರಾಂಡ್ ಅಂತಾನೇ ಹೆಸರು ಪಡೆದಿರುವವರು. ಬಿಜೆಪಿಯಲ್ಲಿಯೇ ಇದ್ದುಕೊಂಡು ಬಿಜೆಪಿ ನಾಯಕರ ವಿರುದ್ಧವೇ ಧ್ವನಿ ಏರಿಸುತ್ತಿದ್ದವರು. ಅದರಲ್ಲೂ ಮಾಜಿ ಸಿಎಂ, ಬಿಜೆಪಿಯ ರಾಜ್ಯಾಧ್ಯಕ್ಷರ ಮೇಲೆ ಕೆಂಡಕಾರುತ್ತಿದ್ದರು. ಹೀಗಾಗಿ ಬಿಜೆಪಿಯ ಶಿಸ್ತು ಸಮಿತಿ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದೆ. ಇದೀಗ ಸಿಡಿ ಕೇಸ್ ವಿಚಾರದಲ್ಲಿ ವಿಜಯೇಂದ್ರ ಹಾಗೂ ಡಿಕೆ ಶಿವಕುಮಾರ್ ಹೆಸರೇಳುವ ಮೂಲಕ ಯತ್ನಾಳ್ ಸ್ಪೋಟಕ ವಿಚಾರವನ್ನ ಬಾಯ್ಬಿಟ್ಟಿದ್ದಾರೆ.

ಈ ಬಗ್ಗೆ ಮಾಧ್ಯಮದವರ ಜೊತೆಗೆ ಮಾತನಾಡಿದ ಯತ್ನಾಳ್, ದೆಹಲಿಯಲ್ಲಿರುವ ಸಂಸದರೇ ವಿಜಯೇಂದ್ರ ವಿರುದ್ಧ ಇದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನ ತೆಗೆಯಬೇಕು ಅಂತಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಸಿಡಿಯನ್ನು ಮಾಡಿಸಿದ್ದೇ ವಿಜಯೇಂದ್ರ ಹಾಗೂ ಡಿಕೆ ಶಿವಕುಮಾರ್ ಅವರೇ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಶಿವಕುಮಾರ್ ಅವರ ಜೊತೆಗೆ ಸೇರಿಕೊಂಡು ವಿಜಯೇಂದ್ರ ಅವರೇ ರಮೇಶ್ ಜಾರಕಿಹೊಳಿ ಸಿಡಿ ಮಾಡಿಸಿದ್ದರು. ಈಗ ಇದೇ ಟೀಂ ಬಯಲಿಗೆ ಬಂದಿರುವ ಹನಿಟ್ರ್ಯಾಪ್ ಹಿಂದೆಯೂ ಇದೆ. ಬಿಜೆಪಿಯಿಂದ ಉಚ್ಛಾಟನೆಯಾದ ಬಳಿಕ ಮನೆಯಲ್ಲಿ ಸುಮ್ಮನೆ ಕೂರುವುದಿಲ್ಲ. ನಾನು ಯಾವತ್ತಿಗೂ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ. ಬಿಜೆಪಿಯವರು ಗೌರವದಿಂದ ವಾಪಾಸ್ ಕರೆದರೆ ಮತ್ತೆ ಹೋಗುತ್ತೇನೆ. ಬೀದರ್ ನಿಂದ ಚಾಮರಾಜನಗರ, ಕೋಲಾರದಿಂದ ಕೊಡಗಿನವರೆಗೂ ರಾಜ್ಯ ಪ್ರವಾಸ ಮಾಡುತ್ತೇನೆ. ಇವರ ವಿರುದ್ಧ ಎಂದಿಗೂ ಹೋರಾಟ ನಿಲ್ಲಿಸುವುದಿಲ್ಲ. ಹಿಂದೂಗಳ ರಕ್ಷಣೆಗಾಗಿ ರಾಜ್ಯ ಪ್ರವಾಸ ಮಾಡುತ್ತೇನೆ. ಅಪ್ಪ – ಮಕ್ಕಳ ಕುಟುಂಬವನ್ನು ರಾಜಕೀಯದಿಂದ ದೂರ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ.

