ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 30 :
ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ರಾಮಾತೀರ್ಥ ಆಶ್ರಮದ ಕುರಿತು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಅವರು ರಚಿಸಿರುವ ರಾಮತೀರ್ಥಾಮೃತ
ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ.
ರಾಮತೀರ್ಥಾಮೃತ ಹೆಸರಿನಲ್ಲಿ ಗುರುಗಳ ಕುರಿತು ಪುಸ್ತಕ ರಚಿಸಿದ್ದು, ಇದರ ಬಿಡುಗಡೆ ಸಮಾರಂಭ 2026ರ ಜನವರಿ 1 ಗುರುವಾರ ಬೆಳಗ್ಗೆ 12 ಗಂಟೆಗೆ ರಾಮತೀರ್ಥಾಶ್ರಮದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪ್ರಹ್ಲಾದ ಗುರುಗಳು ಉದ್ಘಾಟಿಸಲಿದ್ದು, ಕೃತಿಯನ್ನು ರಾಮಕೃಷ್ಣಾಶ್ರಮದ ಶ್ರೀ ಬ್ರಹ್ಮನಿಷ್ಠಾನಂದ ಸ್ವಾಮೀಜಿ ಲೋಕಾರ್ಪಣೆ ಮಾಡಲಿದ್ದಾರೆ.
ಜಲತಜ್ಞ ಡಾ.ಎನ್.ದೇವರಾಜ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡುವರು. ಕಾರ್ಯಕ್ರಮದಲ್ಲಿ ಆಶ್ರಮದ ಕಾರ್ಯದರ್ಶಿಗಳಾದ ಸತ್ಯನಾರಾಯಣರಾವ್, ಬೆಂಗಳೂರು ಕಾಮಧೇನು ಪುಸ್ತಕ ಭವನದ ಎಸ್.ಎಂ.ದೀಪಕ್, ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್, ಎಸ್.ನಾರಾಯಣಪ್ಪ, ಸಿ.ಯು.ಗಿರೀಶ್ ಮತ್ತಿತರರು ಉಪಸ್ಥಿತರಿರುವರು.
ರಾಮತೀರ್ಥಾಶ್ರಮ ಇದು ಜಾತಿ ಪೀಠವಲ್ಲ, ಯೋಗ ಪೀಠ, ಜಾತ್ಯಾತೀತ ಮನೋಭಾವದೊಂದಿಗೆ ಆಶ್ರಮ ನಡೆಯುತ್ತಿದೆ. ಸರ್ಕಾರದ ಕೃಪಾಶೀರ್ವಾದಕ್ಕೆ ಕಾಯುವಂತಿಲ್ಲ. ಆಶ್ರಮದ ಅಡಿಯಲ್ಲಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಇತ್ಯಾದಿ ನಡೆಸುವಂತಿಲ್ಲ. ಸದ್ಭಕ್ತರಿಗೆ ಭಗವಂತನೆಡೆಗೆ ಕರೆದೊಯ್ಯುವ ತ್ರಿಮೂರ್ತಿಗಳಾದ ಶಾಂತಾ ರಾಮತೀರ್ಥ ಚೂಡಾ ಮಾತೆಯರ ಪುಣ್ಯಭೂಮಿ ಇದು.
ಇಲ್ಲಿ ನಡೆಯುವುದು ಗುಪ್ತಭಕ್ತಿ. ಶಾಂತವೀರರು ತಾವು ಗಳಿಸಿದ ಎಲ್ಲ ಸಿದ್ಧಿಗಳನ್ನು ರಾಮತೀರ್ಥರಿಗೆ ಧಾರೆ ಎರೆಯುವೆ ಎಂದಾಗ ನಿನ್ನ ಪಾದವೊಂದೇ ಸಾಕು ಎಂದು ನಯವಾಗಿ ನಿರಾಕರಿಸಿ ಗುರುವಿನ ಮಹಿಮೆ ಜಗತ್ತಿಗೆ ಸಾರಿದ ರಾಜಯೋಗಿ ರಾಮತೀರ್ಥರು.
ಆ ಹೊತ್ತಿನ ಮಳೆ ಆ ಹೊತ್ತಿನ ಬೆಳೆ ಎಂಬ ನಿಲುವಿಗೆ ಬದ್ಧವಾಗಿ ಆಶ್ರಮವಿದೆ. ಆಶ್ರಮದ ಬಗ್ಗೆ ಎಂದೂ ಪ್ರಚಾರ ಮಾಡದ, ಜಾತಿಯತೆಯ ಕಟ್ಟುಪಾಡುಗಳಿಲ್ಲದ ಆಶ್ರಮ. ಕಾವಿ ಧರಿಸಬೇಡಿ, ಕಾವಿಯ ಗುಣ ಸಂಪಾದನೆ ಮಾಡಿ ಎಂಬ ಮಾತಾಜಿಯವರ ಮಾತು ವೇದವಾಖ್ಯವಿದ್ದಂತೆ. ಇಲ್ಲಿ ನಡೆಯುವ ಹುಣ್ಣಿಮೆ ರಥೋತ್ಸವ, ಗುರುಪೂರ್ಣಿಮೆ ಕಾರ್ಯಕ್ರಮಗಳು, ಪ್ರಸಾದ ಕೂಡಾ ಭಿಕ್ಷೆಯಿಂದಲೇ ನಡೆಯಬೇಕು ಎಂದು ಕಟ್ಟಪ್ಪಣೆ ಮಾಡಿದ್ದು, ಈಗಲೂ ಯಥಾ ಪ್ರಕಾರ ನಡೆಯುತ್ತಿದೆ.













