ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 27 : ಎರಡು ಮೇಲು ಸೇತುವೆಗಳ ಭೂಮಿ ಪೂಜೆ ನೆರವೇರಿಸಲು ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ನವರು ಇದೇ ಆಗಸ್ಟ್ 30 ರ ಭಾನುವಾರದಂದು ನಗರಕ್ಕೆ ಆಗಮಿಸಿ ಮೇಲು ಸೇತುವೆಗಳ ಭೂಮಿ ಪೂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಮುಖವಾಗಿ ಮೂರು ಜಾಗದಲ್ಲಿ ರೈಲ್ವೆ ಮೇಲುಸೇತುವೆ ನಿರ್ಮಾಣವಾಗಬೇಕೆಂಬುದು ಬಹು ವರ್ಷಗಳ ಬೇಡಿಕೆಯಾಗಿತ್ತು,
1. ಚಿತ್ರದುರ್ಗ ನಗರದಿಂದ ದಾವಣಗೆರೆಗೆ ಹೋಗುವ ಮಾರ್ಗದಲ್ಲಿ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ 22 ಕ್ಕೆ ಮೇಲು ಸೇತುವೆ ಹಾಗೂ
2. ಹೊಳಲ್ಕೆರೆ ತಾಲ್ಲೂಯಕಿನ ಚಿಕ್ಕಜಾಜೂರು ಬಳಿ ರೈಲ್ವೆ ಗೇಟ್ 01 ಕ್ಕೆ ಮೇಲು ಸೇತುವೆ ನಿರ್ಮಾಣ ಹಾಗೂ
3. ಹಳಿಯೂರು ಬಳಿ ರೈಲ್ವೆ ಲೆವೆಲ್ ಕಾಸ್ರಿಂಗ್ 15 ಕ್ಕೆ ಮೇಲು ಸೇತುವೆ ನಿರ್ಮಾಣವಾಗಬೇಕೆಂಬುದು ಬಹುವರ್ಷಗಳ ಬೇಡಿಕೆಯಾಗಿತ್ತು.
ರೈಲ್ವೆ ಸಚಿವಾಲಯವು ಚಿತ್ರದುರ್ಗ ನಗರದ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ರೂ. 32.51 ಕೋಟಿ ಹಾಗೂ ಚಿಕ್ಕಜಾಜೂರು ರೈಲ್ವೆ ಮೇಲುಸೇತುವೆ ನಿರ್ಮಾಣಕ್ಕೆ ರೂ. 25.15 ಕೋಟಿ ಅನುದಾನವನ್ನು ನೀಡಿ ಟೆಂಡರ್ ಪ್ರಕ್ರಿಯೆಯನ್ನೂ ಸಹ ಪೂರ್ಣಗೊಳಿಸಿದೆ. ಉಳಿದಂತೆ ಹಳಿಯೂರು ಬಳಿ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ಭೂ-ಸ್ವಾಧೀನದ ಅವಶ್ಯಕತೆಯಿದ್ದು ಪ್ರಕ್ರಿಯೆ ಪ್ರಗತಿಯಲ್ಲಿದೆ.
ಅಂದು ನಗರಕ್ಕೆ ಬೆಳಗ್ಗೆ 11.15ಕ್ಕೆ ಆಗಮಿಸುವ ಸಚಿವರು ಚಿತ್ರದುರ್ಗ ನಗರದಲ್ಲಿ ರೈಲ್ವೆ ಸ್ಟೇಷನ್ ಬಳಿಯಿರುವ ಮೇಲು ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ, ಅದೇ ರೀತಿ ಮಧ್ಯಾಹ್ನ 2.00 ಗಂಟೆಗೆ ಚಿಕ್ಕಜಾಜೂರು ನಗರಕ್ಕೆ ಹೊಂದಿಕೊಂಡಿರುವ ರೈಲ್ವೆ ಮೇಲು ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











