ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ಭೂಮಿ ರಕ್ಷಣೆಗೆ ಪಣತೊಡಿ : ಜಿಲ್ಲಾ ಪ್ರಧಾನ ನ್ಯಾಯಾಧೀಶೆ ಕೆ.ಬಿ.ಗೀತಾ ಕರೆ

3 Min Read

ಚಿತ್ರದುರ್ಗ. ಏ.22: ನಿತ್ಯದ ಜೀವನದಲ್ಲಿ ಅನಗತ್ಯವಾಗಿ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದೆ. ಇದರಿಂದ ಅಪಾರವಾದ ಪರಿಸರ ನಾಶದ ಜೊತೆಗೆ ಮನುಷ್ಯರ ಆರೋಗ್ಯದ ಮೇಲೂ ಮಾರಕ ಪರಿಣಾಮಗಳು ಉಂಟಾಗುತ್ತಿವೆ. ಸಮುದ್ರ ಸಾಗರಗಳಲ್ಲಿ ಅಪರೂಪದ ಜೀವರಾಶಿಗಳು ಅಳವಿನ ಅಂಚಿಗೆ ತಲುಪಿವೆ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ಭೂಮಿ ರಕ್ಷಣೆಗೆ ಪಣತೊಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ.ಗೀತಾ ಕರೆ ನೀಡಿದರು.

 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ, ಸರ್ಕಾರಿ ಕಲಾ ಕಾಲೇಜು ಸಂಯುಕ್ತಾಶ್ರಯದಲ್ಲಿ ನಗರದ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಆಯೋಜಿಸಲಾದ ಭೂಮಿ ದಿನಾಚರಣೆ ಅಂಗವಾಗಿ ಕಿರು ಮೃಗಾಲಯದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

 

ಈ ಬಾರಿಯ ಭೂಮಿ ದಿನಾಚರಣೆಯ ಧ್ಯೇಯವಾಕ್ಯ ಪ್ಲಾನೆಟ್ ರ್ವಸಸ್ ಪ್ಲಾಸ್ಟಿಕ್ ಎಂಬುದಾಗಿದೆ. 2040ರ ವೇಳೆಗೆ ಜಾಗತಿಕವಾಗಿ ಶೇ.60 ರಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ಕ್ರಮೇಣವಾಗಿ ಸಂಪೂರ್ಣ ಪ್ಲಾಸ್ಟಿಕ್ ಪ್ರಪಂಚದಿಂದಲೇ ನಿರ್ಮೂಲನೆ ಮಾಡಬೇಕಿದೆ. ಪ್ರತಿನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಹಾಸುಹೊಕ್ಕಾಗಿದೆ. ನಜಜಾತ ಶಿಶುಗಳ ಯಕೃತ್ತಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಅಂಶಗಳು ಕಂಡುಬಂದು, ಚಿಕ್ಕಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಪ್ರಧಾನ ನ್ಯಾಯಾಧೀಶೆ ಕೆ.ಬಿ.ಗೀತಾ ಕಳವಳ ವ್ಯಕ್ತ ಪಡಿಸಿದರು.

 

ಮೋಜು ಮಸ್ತಿಮಾಡಿ ಬಿಸಾಡುವ ಪ್ಲಾಸ್ಟಿಕ್‌ಗಳು ಜಲಮೂಲಗಳಿಗೆ ಸೇರಿ ಜಲಜರಗಳಿಗೆ ಕಂಟಕವಾಗಿ ಪರಿಣಮಿಸುತ್ತಿವೆ. ಸಮುದ್ರಗಳಲ್ಲಿ ಶೇ.20ಕ್ಕಿಂತಲೂ ಅಧಿಕ ಜೀವರಾಶಿಗಳು ಅಳವಿನಂಚಿಗೆ ಬಂದಿವೆ. ಮಾನವರಾದ ನಾವು ಅತಿಯಾದ ಪ್ಲಾಸ್ಟಿಕ್ ಬಳಕೆ ಮಾಡಿ ಭೂಮಂಡಲವನ್ನು ನಾಶದ ತುದಿ ತಂದು ನಿಲ್ಲಿಸಿದ್ದೇವೆ. ಈ ವಿನಾಶವನ್ನು ತಪ್ಪಿಸಬೇಕಾದರೆ ಇಂದಿನಿಂದಲೇ ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆಗೆ ಮಿತಿ ಹಾಕಿಕೊಳ್ಳಬೇಕು ಎಂದರು.

 

ಭೂಮಿಯನ್ನು ತಾಯಿ ಎಂದು ಭಾವಿಸುವ ಸಂಸ್ಕೃತಿ ನಮ್ಮಲ್ಲಿದೆ. ಭೂಮಿ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಭೂಮಿ ನಮಗೆ ಆಶ್ರಯ, ಆಹಾರ, ಫಲಪುಷ್ಪ, ಆರೋಗ್ಯಕ್ಕಾಗಿ ಸಂಜೀವಿನಿಗಳನ್ನು ನೀಡಿದೆ. ನಮ್ಮ ದುರಾಸೆಯ ಪರಿಣಾಮವಾಗಿ ಇಂದು ಭೂಮಿಯನ್ನು ಹಾಳು ಮಾಡುತ್ತಿದ್ದೇವೆ. 1970 ರಲ್ಲಿ ಮೊದಲ ಬಾರಿಗೆ ಅಂದಿನ ಅಮೇರಿಕಾದ ಸೆನಟರ್ ಗೆಲಾರ್ಡ್ ನೆಲ್ಸನ್ ಹಾಗೂ ಹಾರ್ವಡ್ ವಿ.ವಿ. ವಿದ್ಯಾರ್ಥಿ ಡೆನಿಸ್ ಹೆಯಿಸ್ ಕೈಗಾರಿಕರಣದಿಂದ ಉಂಟಾಗುತ್ತಿರುವ ಪರಿಸರ ನಾಶದ ಬಗ್ಗೆ ಅರಿವು ಮೂಡಿಸಲು ಏಪ್ರಿಲ್ 22 ರಂದು ಭೂಮಿ ದಿನಾಚರಣೆಯನ್ನು ಪ್ರಾರಂಭಿಸಿದರು.

 

ಅಂದಿನಿಂದ ಈವರೆಗೂ ಪ್ರತಿ ವರ್ಷ ಏಪ್ರಿಲ್ 22 ರಂದು ವಿಭಿನ್ನ ಧ್ಯೇಯ ವಾಕ್ಯಗಳೊಂದಿಗೆ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಪ್ರಧಾನ ನ್ಯಾಯಧೀಶೆ ಕೆ.ಬಿ.ಗೀತಾ ತಿಳಿಸಿದರು.

 

ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡಿ, ಪ್ಲಾಸ್ಟಿಕ್ ಮಾಲಿನ್ಯ ಪರಿಸರಕ್ಕೆ ಮಾತ್ರವಲ್ಲ. ನಮ್ಮ ಮತ್ತು ಭವಿಷ್ಯದ ಪೀಳಿಗೆಯ ಆರೋಗ್ಯಕ್ಕೂ ಅಪಾಯವನ್ನುಂಟುಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರು ಸಹ ಪರಿಸರ ಸಂರಕ್ಷಣೆಯ ಅರಿವು ಹಾಗೂ ಪ್ರಜ್ಞೆ ಹೊಂದಿರುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಚಿತ್ರದುರ್ಗ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ ಮಾತನಾಡಿ, ಪ್ಲಾಸ್ಟಿಕ್ ಜೀವನದ ಅವಿಭಾಜ್ಯ ಅಂಗವಾಗಿದೆ. ಅತೀ ಹೆಚ್ಚಿನ ಪ್ಲಾಸ್ಟಿಕ್ ಬಳಕೆಯಿಂದ ದೇಹದ ರಕ್ತದಲ್ಲಿಯೂ ಮೈಕ್ರೋ ಪ್ಲಾಸ್ಟಿಕ್ ಸೇರಿಕೊಂಡಿದೆ. ಹಾಗಾಗಿ ನಮ್ಮ ಮನೆಯಿಂದಲೇ ಪರಿಸರ ಸಂರಕ್ಷಣೆಯ ಕಾಳಜಿ ಪ್ರಾರಂಭಬೇಕಿದೆ ಎಂದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಪರಾಜು,  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್,  ಜೆಎಂಎಫ್‌ಸಿ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಚೈತ್ರಾ, ಉಜ್ವಲ ವೀರಣ್ಣ ಸಿದ್ದಣ್ಣವರ್, ನೇಮಚಂದ್ರ, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅನಿತಾ ಕುಮಾರಿ, 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸಹನ.ಆರ್ ಹಾಗೂ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಗೀತಾ ಕುಂಬಾರ್, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಅರಣ್ಯ ಉಪಸಂರಕ್ಷಣಾಧಿಕಾರಿ ಚಂದ್ರಣ್ಣ,ವಲಯ ಅರಣ್ಯಾಧಿಕಾರಿ ಹೆಚ್,ಉಷಾರಾಣಿ, ಆಡುಮಲ್ಲೇಶ್ವರ ಕಿರು ಮೃಗಾಲಯ ವಲಯ ಅರಣ್ಯಾಧಿಕಾರಿ ಎನ್.ವಾಸುದೇವ, ಸಹಾಯಕ ಪ್ರಾಧ್ಯಾಪಕ ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ.ವಿ.ಪ್ರಸಾದ್ ಸೇರಿದಂತೆ ಮತ್ತಿರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *