ಪುನೀತ್ ರಾಜ್‍ಕುಮಾರ್ ಧಾನ, ಧರ್ಮ, ಪರೋಪಕಾರ ಮಾಡಿ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಉಳಿದುಕೊಂಡಿದ್ದಾರೆ : ಡಾ.ಶಿವಮೂರ್ತಿ ಮುರುಘಾ ಶರಣರು

2 Min Read

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ : ಚಿಕ್ಕ ವಯಸ್ಸಿನಲ್ಲಿಯೇ ಹಾಡು, ಅಭಿನಯದಲ್ಲಿ ನಿಷ್ಣಾತರಾಗಿದ್ದ ಪವರ್‌ ಸ್ಟಾರ್ ಪುನಿತ್‍ರಾಜ್‍ಕುಮಾರ್ ಕೀರ್ತಿ, ಯಶಸ್ಸು, ಹಣ ಗಳಿಸಿ ಧಾನ, ಧರ್ಮ, ಪರೋಪಕಾರ ಮಾಡಿ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಉಳಿದುಕೊಂಡಿದ್ದಾರೆಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಹೇಳಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ತ.ರಾ.ಸು.ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ಪುನಿತ್‍ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಜನನ-ಮರಣದ ನಡುವಿನ ಜೀವನ ಅತ್ಯಮೂಲ್ಯವಾದುದು. ಜೀವನ ವ್ಯತ್ಯಾಸವಾಗಬಹುದು. ಆದರೆ ಮರಣದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಮಾನವ ಬದುಕು ಹೇಗೆ ಕಟ್ಟಿಕೊಳ್ಳುತ್ತಾನೋ ಆ ರೀತಿ ಯಶಸ್ಸು ಸಂಪಾದಿಸಬಹುದು. ಸಾಹಸ ಮಾಡುವ ದಿಸೆಯಲ್ಲಿ ಪ್ರತಿಯೊಬ್ಬರು ಚಿಂತನೆ ಮಾಡಿದಾಗ ಸಾಮಾನ್ಯ ವ್ಯಕ್ತಿಯೂ ಕೂಡ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಸಾಧನೆ ಸಾಹಸ ಮಾಡಬಹುದು.

ಸಾಧನೆ ಒಬ್ಬರ ಸ್ವತ್ತಲ್ಲ. ಯಾರು ಶ್ರಮ ಪಡುತ್ತಾರೋ ಅವರ ಪಾಲಾಗುತ್ತದೆ. ಪುನಿತ್‍ರಾಜ್‍ಕುಮಾರ್ ಚಿಕ್ಕವಯಸ್ಸಿನಲ್ಲಿಯೇ ಪವರ್‍ಸ್ಟಾರ್ ಎಂದು ಅಭಿಮಾನಿಗಳಿಂದ ಕರೆಸಿಕೊಂಡರು. ಹಾಗಾಗಿ ಕೊಟ್ಯಾಂತರ ಅಭಿಮಾನಿಗಳ ಹೃದಯದ ಕದತಟ್ಟಿದ್ದಾರೆ ಎಂದು ಗುಣಗಾನ ಮಾಡಿದರು.

ಕನ್ನಡಕ್ಕೆ ಜಾಗತಿಕ ಸ್ಥಾನಮಾನ ತಂದುಕೊಟ್ಟ ಮೇರುನಟ ಬಡವರು, ದೀನದಲಿತರು, ವೃದ್ದರು, ಅನಾಥರಿಗೆ ಕೈಲಾದ ಸಹಾಯ ಮಾಡಿ. ಚಿಕ್ಕವಯಸ್ಸಿನಲ್ಲಿಯೇ ಎಲ್ಲರನ್ನು ಅಗಲಿ ಕೀರ್ತಿಯನ್ನು ಬಿಟ್ಟು ಹೋಗಿದ್ದಾರೆ. ಅದ್ವಿತೀಯ ನಟನನ್ನು ಕಳೆದುಕೊಂಡಿದ್ದೇವೆ. ಅದಕ್ಕಾಗಿ ಪುನಿತ್‍ರಾಜ್‍ಕುಮಾರ್‍ಗೆ ಮುರುಘಾಮಠದಿಂದ ಮರಣೋತ್ತರವಾಗಿ ಬಸವಶ್ರಿ ಪ್ರಶಸ್ತಿಯನ್ನು ಘೋಷಿಸಿ ಅವರ ನಿವಾಸಕ್ಕೆ ಹೋಗಿ ಆಹ್ವಾನ ನೀಡಿ ಬಂದಿದ್ದೇವೆ. ಕಟ್ಟಡ ಕಾರ್ಮಿಕರು ಶ್ರಮಜೀವಿಗಳು ದಿನವೂ ಬೆವರು ಸುರಿಸಿ ದುಡಿಯುವುದರಿಂದ ಆರೋಗ್ಯವಾಗಿದ್ದಾರೆಂದು ಹೇಳಿದರು.

ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡಿ ತಂದೆ ರಾಜ್‍ಕುಮಾರ್‍ರವರಂತೆಯೇ ಪುನಿತ್‍ರಾಜ್‍ಕುಮಾರ್ ಕೂಡ ವಿನೀತ, ವಿನಯವಂತ ನಟನಾಗಿದ್ದ. ಬಾಲ್ಯದಲ್ಲಿಯೇ ನಟನೆಗಿಳಿದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯುವುದು ಸುಲಭ ಸಾಧನೆಯಲ್ಲ. 29 ಸಿನಿಮಾನಗಳಲ್ಲಿ ನಟಿಸಿ ದೇಶಾದ್ಯಂತ ಹೆಸರು ಮಾಡಿದ್ದಾರೆ. ಹಿಮಾಲಯದೆತ್ತರ ಸಾಧನೆ ಮಾಡಿರುವ ಪುನಿತ್ ಅಂತಿಮ ನಮನದಲ್ಲಿ ಲಕ್ಷಾಂತರ ಅಭಿಮಾನಿಗಳು ನರೆದಿದ್ದನ್ನು ನೋಡಿದಾಗಲೆ ಗೊತ್ತಾಗಿದ್ದು, ಪುನಿತ್ ನಟನೆ ಎಷ್ಟು ಅಮೋಘವಾದುದು ಎಂಬುದು ಎಂದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಮಾತನಾಡಿ ಪುನಿತ್‍ರಾಜ್‍ಕುಮಾರ್‍ನನ್ನು ಕಳೆದುಕೊಂಡು ಕರುನಾಡು ದುಃಖದಲ್ಲಿ ಮುಳುಗಿದೆ. ಅವರ ನಡೆ, ನುಡಿ, ಆದರ್ಶ, ಮಾನವೀಯ ಗುಣಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸಾಗೋಣ. ಮುಂದಿನ ದಿನಗಳಲ್ಲಿ ನೇತ್ರದಾನ, ರಕ್ತದಾನ ಶಿಬಿರಗಳನ್ನು ಆಯೋಜಿಸಿ ನೊಂದವರಿಗೆ ನೆರವು ನೀಡುವುದಾಗಿ ಭರವಸೆಯಿತ್ತರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ಉಪಾಧ್ಯಕ್ಷರುಗಳಾದ ಕೆ.ಗೌಸ್‍ಪೀರ್, ನಾದಿಆಲಿ,  ಮಾರಿಕಾಂಭ ಸಂಘದ ಅಧ್ಯಕ್ಷ ಅಣ್ಣಪ್ಪ, ಈಶ್ವರಪ್ಪ, ತಿಪ್ಪೇಸ್ವಾಮಿ, ರಾಜಣ್ಣ, ಭರತ್, ರಮೇಶ್, ವೈ.ನಾಗರಾಜ್ ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *