ಸುದ್ದಿಒನ್, ಚಿತ್ರದುರ್ಗ, ಜೂನ್. 12 : ನಗರದಲ್ಲಿ ಪುನರ್ಬಳಕೆ ಮಾಡಲು ಸಾಧ್ಯವಿಲ್ಲದ ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಸಂತೇಮೈದಾನದಲ್ಲಿರುವ ತರಕಾರಿ ಮಾರ್ಕೆಟ್ನಲ್ಲಿ ನಡೆಯುತ್ತಿರುವ ಅವ್ಯವಸ್ಥೆಯ ಬಗ್ಗೆ ಇದೇ ತಿಂಗಳ ಜೂನ್ 19 ರೊಳಗೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಜೂನ್ 20 ರಂದು ಬೆಳಗ್ಗೆ ನಗರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುವುದು. ಮುಂದಿನ ಆಗು ಹೋಗುಗಳಿಗೆ ನೀವುಗಳೇ ಜವಾಬ್ದಾರಿ ಎಂದು ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ಅವರು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಸ್ತುತ ನಗರದಲ್ಲಿ ಪ್ಲಾಸ್ಟಿಕ್ ಕೈಚೀಲಗಳು, ಪ್ಲಾಸ್ಟಿಕ್ ಕಪ್ಗಳು, ಪ್ಲೇಟ್ಗಳು ಮತ್ತು ಇತರ ಪ್ಯಾಕಿಂಗ್ ಪದಾರ್ಥಗಳ ಅತಿರೇಕ ಬಳಕೆ ನಡೆಯುತ್ತಿದೆ. ಇದರಿಂದ ಚರಂಡಿಗಳು ತಡೆಹಿಡಿಯುತ್ತಿರುವುದು, ರಸ್ತೆಗಳ ಪಕ್ಕದಲ್ಲಿ ಪ್ಲಾಸ್ಟಿಕ್ ಕೆಸರು ತುಂಬುತ್ತಿರುವುದು, ಪ್ರಾಣಿ-ಪಕ್ಷಿಗಳು ಪ್ಲಾಸ್ಟಿಕ್ ತಿಂದು ಹಾನಿಯಾಗುತ್ತಿರುವುದು ಹಾಗೂ ಇದರಿಂದ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗವು ಸಹ ಹೆಚ್ಚು ಕಂಡು ಬರುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಸಹ ಹೆಚ್ಚುತ್ತಿದೆ ಮತ್ತು ಆರೋಗ್ಯ ಸಮಸ್ಯೆಗಳೂ ಹೆಚ್ಚಾಗಿ ಉಂಟಾಗುತ್ತಿವೆ.
ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದರೂ ಕೂಡ ಸಾಕ್ಷಾತ್ಕಾರವಾಗಿ ಅನುಷ್ಠಾನವಾಗಿಲ್ಲ. ಆದ್ದರಿಂದ ಈ ಸಮಸ್ಯೆಗೆ ತಕ್ಷಣದ ಪರಿಹಾರ ಬೇಕಾಗಿದೆ. ಹಾಗೂ ಅತಿ ಮುಖ್ಯವಾಗಿ ಜನನಿಬಿಡ್ಡ ಸ್ಥಳವಾದ ಸಂತೇಮೈದಾನದಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಶುಚಿತ್ವದ ಸಮಸ್ಯೆ ಕಾಡುತ್ತಿದ್ದು ಹಾಗೂ ಸ್ತ್ರೀಸಾಮಾನ್ಯರು, ಹಿರಿಯರು ಮಾರುಕಟ್ಟೆ ಒಳಗಡೆ ಹೋಗದ ಹಾಗೆ ವಾತಾವರಣವನ್ನು ಸೃಷ್ಟಿಯಾಗಿರುತ್ತದೆ. ಯಾವುದೇ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕಾಗಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

