ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪ್ರತಿಭಟನೆ

2 Min Read

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ. 30  : ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯವನ್ನು ತುರ್ತಾಗಿ ಬಿಡುಗಡೆಗೊಳಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

2022-23 ನೇ ಸಾಲಿನ ಶೈಕ್ಷಣಿಕ ಧನ ಸಹಾಯವನ್ನು ಇದುವರೆವಿಗೂ ಮಂಜೂರು ಮಾಡಿರುವುದಿಲ್ಲ. ಶೀಘ್ರವೇ ಪರಿಶೀಲಿಸಿ ಬಿಡುಗಡೆಗೊಳಿಸಬೇಕು.

ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಮದುವೆ ಸಹಾಯ ಧನವನ್ನು ಒಂದು ಲಕ್ಷಕ್ಕೆ ಹೆಚ್ಚಿಸಬೇಕು.
ಕಾರ್ಮಿಕ ಮಹಿಳೆ ಹೆರಿಗೆಯಾದ ಆರು ತಿಂಗಳ ಕಾಲ ಮಗುವಿನ ಪೋಷಣೆಯಲ್ಲಿ ತೊಡಗಿರುತ್ತಾಳೆ. ಅಂತಹ ಮಹಿಳೆಗೆ ಪ್ರತ್ಯೇಕವಾಗಿ ಅರವತ್ತು ಸಾವಿರ ರೂ.ಗಳನ್ನು ಮಂಜೂರು ಮಾಡಬೇಕು. ಈ ಹಿಂದಿನ ಆದೇಶದ ಪ್ರತಿಯಲ್ಲಿ ಕೆಲವು ನಿಬಂಧನೆಗಳಿದ್ದು, ತಾಯಿ ಮತ್ತು ಮಗುವಿನ ಹೆಸರಿನಲ್ಲಿರುವ ಬಾಂಡ್ ಹೊರತುಪಡಿಸಿ ಪ್ರತ್ಯೇಕ ಹಣ ನೀಡಬೇಕು.

ನೊಂದಾಯಿತ ಕಟ್ಟಡ ಕಾರ್ಮಿಕ ಅರವತ್ತು ವರ್ಷಗಳನ್ನು ಪೂರೈಸಿದ ನಂತರ ಮೂರು ಸಾವಿರ ರೂ. ಪಿಂಚಣಿ ಪಡೆಯುತ್ತಿರುವುದನ್ನು ಐದು ಸಾವಿರ ರೂ.ಗಳಿಗೆ ಏರಿಸಬೇಕು. ಕಾರ್ಮಿಕನ ಸಹಜ ಸಾವಿಗೆ ಎರಡು ಲಕ್ಷ ರೂ. ಸಹಾಯ ಧನ ಹೆಚ್ಚಿಸಬೇಕು. ಕೆಲಸದ ಸಮಯದಲ್ಲಿ ಅಪಘಾತ ಸಂಭವಿಸಿ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಹತ್ತು ಲಕ್ಷ ರೂ.ಗಳ ಪರಿಹಾರ ಕೊಡಬೇಕು. ಆರೋಗ್ಯ ಹದಗೆಟ್ಟರೆ ಚಿಕಿತ್ಸೆಗಾಗಿ ಇ.ಎಸ್.ಐ. ಸೌಲಭ್ಯ ಒದಗಿಸಬೇಕು.

ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಲಕ್ಷ ಅರವತ್ತು ಸಾವಿರಕ್ಕಿಂತ ಹೆಚ್ಚಿನ ಕಾರ್ಮಿಕರು ಮಂಡಳಿಯಲ್ಲಿ ನೊಂದಾಯಿಸಿದ್ದು, ಸರ್ಕಾರ ಜಮೀನು ಖರೀಧಿಸಿ ನಿವೇಶನ ನೀಡಿ ಕಾರ್ಮಿಕರ ಕಾಲೋನಿ ಎಂದು ಹೆಸರಿಡಬೇಕೆಂದು ಪ್ರತಿಭಟನಾನಿರತ ಕಾರ್ಮಿಕರು ಒತ್ತಾಯಿಸಿದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಎ.ನಾಗರಾಜ್, ತಾಲ್ಲೂಕು ಅಧ್ಯಕ್ಷ ಜಾವಿದ್ ಪಾಷ, ಗೌರವಾಧ್ಯಕ್ಷ ಹೆಚ್.ಹಾಲೇಶಪ್ಪ, ಮಹಿಳಾ ಪ್ರಧಾನ ಕಾರ್ಯದರ್ಶಿ ಪಿ.ಲಕ್ಷ್ಮಿದೇವಿ, ಟಿ.ಬಸವರಾಜ್, ಅಂಜಿನಪ್ಪ, ತಿಪ್ಪೇಸ್ವಾಮಿ, ಮನ್ಸೂರ್‍ಭಾಷ, ಎಂ.ರಾಜಣ್ಣ, ಎಂ.ಮಲ್ಲಿಕಾರ್ಜುನ, ಸನಾವುಲ್ಲಾ, ಅಶೋಕ್, ಹಚ್.ರಮೇಶ್, ರಾಜು ಪಿ. ನಾಗೇಶ್, ಈರೇಶ್, ಡಿ.ಲಕ್ಷ್ಮಣ, ಎಂ.ಸುರೇಶ್, ಜೆ.ಎಂ.ರಾಜು, ಅಂಜಿನಪ್ಪ, ಓಂಕಾರಪ್ಪ, ನಾಗಭೂಷಣ್, ಜಗದೀಶ್, ಶಿವಮೂರ್ತಿ, ಚಳ್ಳಕೇರಪ್ಪ, ಹನುಮಂತಪ್ಪ, ಎಂ.ತಿಪ್ಪೇಸ್ವಾಮಿ, ಹೆಚ್.ಸುರೇಶ, ಮೈಲಾರಪ್ಪ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *