ಪ್ರಜಾಪ್ರಭುತ್ವ ಆಶಯ ರಕ್ಷಣೆ ಎಲ್ಲರ ಜವಾಬ್ದಾರಿ : ತಹಶೀಲ್ದಾರ್ ಎಂ. ಸಿದ್ದೇಶ್

2 Min Read

ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 15 : ಪ್ರಜಾಪ್ರಭುತ್ವದ ರಕ್ಷಣೆ ಎಲ್ಲರ ಕರ್ತವ್ಯವಾಗಿದ್ದು, ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವದಾದ್ಯಂತ ಸೆಪ್ಟೆಂಬರ್ 15ರಂದು ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಹಶೀಲ್ದಾರ್ ಎಂ. ಸಿದ್ದೇಶ್ ತಿಳಿಸಿದರು.

ನಗರದ ಬಿಟಿ ಸರ್ಕಲ್ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ ಸಮಾನತೆ ಮತ್ತು ಬಾಂಧವ್ಯ ಈ ಮೂರು ಮೌಲ್ಯಗಳೇ ಪ್ರಜಾಪ್ರಭುತ್ವದ ನಿಜವಾದ ಮೂಲ ಅಡಿಪಾಯ. ಪ್ರಜಾಪ್ರಭುತ್ವ ಕೇವಲ ಹಕ್ಕು ಮಾತ್ರವಲ್ಲ ಅದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

ಡಿವೈಎಸ್ಪಿ ಶಿವಕುಮಾರ್ ಮಾತನಾಡಿ ಜನರಿಂದ ಜನರಿಗಾಗಿ, ಜನರ ಆಡಳಿತವೇ ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವದ ಮೌಲ್ಯ ಎಂದರೆ ಭಾವನೆಗಳ ಸ್ವಾತಂತ್ರ್ಯ, ಮತದಾನದ ಹಕ್ಕು, ಸಮಾನ ಅವಕಾಶಗಳು ಎಲ್ಲರಿಗೂ ಸಮಾನವಾದ ನ್ಯಾಯ ಕಲ್ಪಿಸುವುದೇ ಪ್ರಜಾಪ್ರಭುತ್ವ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜೆ. ದಿನೇಶ್ ಮಾತನಾಡಿ ಭಾರತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. 1893ರಲ್ಲಿ ಸ್ವಿಡ್ಜರ್‍ಲ್ಯಾಂಡಿನಲ್ಲಿ ಮೊದಲಬಾರಿಗೆ ಪ್ರಜಾಪ್ರಭುತ್ವ ಜಾರಿಯಾಯಿತು. ಪ್ರಸ್ತುತ 90 ರಿಂದ 110 ದೇಶಗಳಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಇದೆ. ಪ್ರಜಾಪ್ರಭುತ್ವದಡಿ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ, ಪ್ರಜೆಗಳಿಂದ ರಚಿತವಾದ ಸರ್ಕಾರವೇ ಆಡಳಿತ ನಡೆಸಲಿದೆ. ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವಂತಹ ನಿಟ್ಟಿನಲ್ಲಿ ನನ್ನ ಮತ, ನನ್ನ ಹಕ್ಕು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕು. ಸಂವಿಧಾನ ರಚನೆ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಕೊಟ್ಟಿದ್ದಾರೆ. ಎಲ್ಲರಿಗೂ ಸಮಾನತೆ, ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳನ್ನು ನೀಡಿದ ಅಂಬೇಡ್ಕರ್ ಅವರನ್ನು ಸ್ಮರಿಸುತ್ತ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸೆಪ್ಟೆಂಬರ್ 15ರಂದು ಪ್ರತಿವರ್ಷ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ನಗರಸಭೆ ಅಧ್ಯಕ್ಷ ಆರ್. ಬಾಲಕೃಷ್ಣ, ಪಂಚಾಯಿತಿ ಇಒ ಡಾ. ಪ್ರಮೋದ್, ಸಿಡಿಪಿಓ ರಾಘವೇಂದ್ರ, ಮುಖಂಡರಾದ ಕಣ್ಮೇಶ್, ಮಾರುತೇಶ್ ಸೇರಿದಂತೆ ಅಂಬೇಡ್ಕರ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಇತರರಿದ್ದರು.

Share This Article
Enable Notifications OK No thanks