ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯಗೆ ಮೀಟರ್ ಬಡ್ಡಿ ದಂಧೆಕೋರರ ಕಾಟ : ಪೊಲೀಸ್ ಠಾಣೆಗೆ ದೂರು..!

1 Min Read

 

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಇವರದ್ದು. ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಅವತಾರ ಪುರುಷ 1 & 2 ಸಿನಿಮಾಗಳನ್ನು ನಿರ್ಮಾಣ ಮಾಡಿದವರು. ನಿರ್ಮಾಪಕನಾಗಿ ದೊಡ್ಡ ಹೆಸರನ್ನೇ ಪಡೆದುಕೊಂಡಿದ್ದಾರೆ. ಆದರೆ ಇದೀಗ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ ಮೀಟರ್ ಬಡ್ಡಿ ದಂಧೆಕೋರ ಕಾಟ ಶುರುವಾಗಿದೆ.

ಬಡ್ಡಿ ದಂಧೆಕೋರರ ಕಾಟದಿಂದ ಬೇಸತ್ತ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪುಷ್ಕರ್, ಹತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿ, ಪ್ರಶಸ್ತಿಯನ್ನು ಪಡೆದಿದ್ದಾರೆ. ಆದರ್ಶ್, ಹರ್ಷ, ಶಿವು ಹಾಗೂ ಹರ್ಷ ಡಿ. ಎಂಬುವವರಿಂದ ಕಾಟ ಶುರುವಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಕೊಟ್ಟ ಸಾಲಕ್ಕಿಂತ, ತೀರಿಸಿದ ಸಾಲಕ್ಕಿಂತ ಕೋಟಿ ಕೋಟಿ ಹಣ ಮತ್ತೆ ಕೇಳುತ್ತಿದ್ದಾರೆಂದು ದೂರು ನೀಡಿದ್ದಾರೆ.

ಪುಷ್ಕರ್‌ ಮಲ್ಲಿಕಾರ್ಜುನಯ್ಯ ಸಿನಿಮಾ ಮಾಡುವುದಕ್ಕೆ ಈ ಮೀಟರ್ ಬಡ್ಡಿಯವರಿಂದ ಐದು ಕೋಟಿ ಸಾಲ ಪಡೆದುಕೊಂಡಿದ್ದರಂತೆ. ಆದರೆ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳು ಸೋಲು ಕಂಡಿವೆ. ಹೀಗಾಗಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಾಲದ ಸುಳಿಯಲ್ಲಿ ಸಿಲುಕಿದ್ದರು. ಆದರೂ ಬಡ್ಡಿಗಿಡ್ಡಿ ಸೇರಿ ತೆಗೆದುಕೊಂಡ ಐದು ಕೋಟಿಗೆ ಹನ್ನೊಂದು ಕೋಟಿ ಕಟ್ಟಿದ್ದಾರಂತೆ. ಇನ್ನೂ ಹದಿಮೂರು ಕೋಟಿ ಹಣ ಕಟ್ಟು ಎಂದು ಹಿಂಸೆ ಕೊಡುತ್ತಿದ್ದಾರಂತೆ. ಹಣ ಕಟ್ಟದೇ ಇದ್ದಾಗ ಹುಡುಗರನ್ನು ಕಳುಹಿಸಿ ಬೆದರಿಕೆ ಹಾಕಿದ್ದಾರಂತೆ. ಈ ಸಂಬಂಧ ಇದೀಗ ಪುಷ್ಕರ್ ಮಲ್ಲಿಕಾರ್ಜುನಯ್ಯ ದೂರು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *