ಎತ್ತಿನ ಹೊಳೆ ಯೋಜನೆಗೆ ನೀಡಿದ ಪ್ರಾಧಾನ್ಯತೆ ಭದ್ರಾ ಮೇಲ್ದಂಡೆ ಯೋಜನೆಗಿಲ್ಲ : ನೀರಾವರಿ ಅನುಷ್ಠಾನ ಸಮಿತಿಯಿಂದ ತಮಟೆ ಚಳವಳಿ

3 Min Read

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 29 :  ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ತಾರದ ಜನ ಪ್ರತಿನಿಧಿಗಳ ನಿದ್ರಾವಸ್ಥೆ ಸ್ಥಿತಿ ಖಂಡಿಸಿ ಜಿಲ್ಲಾ ನೀರಾವರಿ ಅನು್ಷ್ಠಾನ ಹೋರಾಟ ಸಮಿತಿ ಗುರುವಾರ ಸಂಸದ ಗೋವಿಂದ ಕಾರಜೋಳ ಅವರ ನಿವಾಸದ ಮುಂಭಾಗ ತಮಟೆ ಚಳವಳಿ ನಡೆಸುವುದರ ಮೂಲಕ ಎಚ್ಚರಿಸುವ ಕೆಲಸ ಮಾಡಿತು.

 

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ನೇತೃತ್ವದಲ್ಲಿ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರು ಜೆಸಿಆರ್ ಬಡಾವಣೆಯಲ್ಲಿರುವ ಸಂಸದರ ನಿವಾಸದ ಮುಂಭಾಗ ಧರಣಿ ನಡೆಸಿ ತಮಟೆ ಚಳವಳಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ಮಾಡದ ಕಾರಣ ಅವರು ಕೆಲಸ ಬಿಟ್ಟು ಹೋಗಲು ನಿರ್ಧರಿಸಿದ್ದಾರೆ. ಈಗಾಗಲೇ ನೀರಾವರಿ ನಿಗಮದ ಮುಖ್ಯ  ಇಂಜಿನಿಯರ್ ಗೆ ಪತ್ರ ಬರೆದು ಅಭಿಪ್ರಾಯ ತಿಳಿಸಿದ್ದಾರೆ. ಗುತ್ತಿಗೆದಾರರ ಉಳಿಸಿಕೊಳ್ಳುವ ಪ್ರಯತ್ನಗಳು ಕಾಣಿಸುತ್ತಿಲ್ಲ. ಹಾಗೇನಾದರೂ ಅವರು ಕೆಲಸ ನಿಲ್ಲಿಸಿ ಹೋದಲ್ಲಿ ಯೋಜನೆಗೆ ಮತ್ತಷ್ಟು ಹಿನ್ನಡೆಯಾಗುತ್ತದೆ. ಗುತ್ತಿಗೆದಾರರ ತಡೆಯುವ ಕೆಲಸ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಲಿ ಎಂದರು.
ಅಬ್ಬಿನಹೊಳಲು ಬಳಿ ಕಾಲುವೆ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೂರು ತಿಂಗಳ ಹಿಂದೆ  ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಿದ್ದರೂ ಸಾಧ್ಯವಾಗದೇ ಹೋಗಿದೆ. ಎರಡು ಸಾವಿರ ಕೋಟಿ ರುಪಾಯಿ ಬಿಲ್ ಬಾಕಿ ಇರುವುದರಿಂದ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಎತ್ತಿನ ಹೊಳೆ ಯೋಜನೆಗೆ ನೀಡಿದ ಪ್ರಾಧಾನ್ಯತೆಯ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆಗೆ ನೀಡುತ್ತಿಲ್ಲವೆಂದರು.

ಸಿಪಿಐ ಮುಖಂಡ ಸುರೇಶ್ ಬಾಬು ಮಾತನಾಡಿ ಭದ್ರಾ ಕಾಮಗಾರಿ ಆರಂಭವಾಗಿ 17 ವರ್ಷಗಳಾಗಿದ್ದು ಇದುರೆಗೂ ಪೂರ್ಣಗೊಂಡಿಲ್ಲ. ಜಿಲ್ಲೆಯ ಜನರ ತಾಳ್ಮೆ ಪರೀಕ್ಷಿಸಿದರೆ ಮುಂದಿನ ಪರಿಣಾಮಗಳ ಎದುರಿಸಬೇಕಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಅನುದಾನ ಬಿಡುಗಡೆ ಮಾ್ಡಿ ಕಾಮಗಾರಿ ಪೂರ್ಣಗೊಳಿಸಬೇಕೆಂದರು.
ಸರ್ವೋದಯ ಕರ್ನಾಟಕದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ ಚಿತ್ರದುರ್ಗ ಜಿಲ್ಲೆಗೆ ಆಳುವ ಸರ್ಕಾರಗಳು ಮೋಸ ಮಾಡಿಕೊಂಡೇ ಬಂದಿವೆ. ಕಾವೇರಿ ಕೊಳ್ಳದ ಯೋಜನೆಗಳಿಗೆ ಕೊಟ್ಟಷ್ಟು ಗಮನವ ಭದ್ರಾ ಮೇಲ್ದಂಡೆಗೆ ಕೊಡುತ್ತಿಲ್ಲ. ಈ ಭಾಗದ ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆ ಕಾರಣಕ್ಕೆ ಜನ ನೋವು ಅನುಭವಿಸುವಂತಾಗಿದೆ ಎಂದರು.

ರೈತ ಸಂಘದ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಇದವರೆಗೂ ಸುಳ್ಳು ಭರವಸೆಯಲ್ಲಿಯೇ ದಿನಗಳ ನೂಕಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಲು ಯಾರಿಗೂ ಆಸಕ್ತಿ ಇಲ್ಲ.ನಾನು ಯುವಕನಾಗಿದ್ದಾಗ ಆರಂಭವಾದ ಚಳವಳಿ ಮೊಮ್ಮಕ್ಕಳಾದ ಮೇಲೂ ನೀರು ಬಂದಿಲ್ಲ.  ರಾಜಕಾರಣದ ಅವಮಾನಕರ ಸಂಗತಿ ಇದು ಎಂದರು.

ಪ್ರತಿಭಟನಾಕಾರರ ಅಹವಾಲು ಆಲಿಸಿ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ರಾಜ್ಯದಲ್ಲಿ ಇದುವರೆಗೂ ಆಳಿದ ಸರ್ಕಾರಗಳು ಕಾವೇರಿಗೆ ನೀಡಿದಷ್ಟು ಆಧ್ಯತೆ ಕೃಷ್ಣೆಗೆ ನೀಡಿಲ್ಲ. ಈ ತಾರತಮ್ಯ ನಿವಾರಣೆಯಾಗಿಲ್ಲ.ಬಸವರಾಜ ಬೊಮ್ಮಾಯಿ ಸಿಎಂ ಆದಾಗ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ಹೆಚ್ಚು ಅನುದಾನ ನೀಡಿದರು. ಭದ್ರಾ ಮೇಲ್ದಂಡೆಗೆ 3100 ಕೋಟಿ ನೀಡಿದ್ದರೆಂದು ಹೇಳಿದರು.

ಭದ್ರಾ ಮೇಲ್ದಂಡೆಗೆ ಇದುವರೆಗೂ 9500 ಕೋಟಿ  ರು ಖರ್ಚಾಗಿದ್ದು ಇದರಲ್ಲಿ ಐದುವರೆ ಸಾವಿರ ಕೋಟಿ ರುಪಾಯಿಯಷ್ಟು ದೊಡ್ಡ ಮೊತ್ತವ ಬಿಜೆಪಿ ಸರ್ಕಾರ ನೀಡಿದೆ. ಉಳಿದ ಸರ್ಕಾರಗಳ ನಮ್ಮ ರೀತಿ ಬದ್ದತೆ ಪ್ರದರ್ಶಿಸಿಲ್ಲ. ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯನ್ನಾಗಿಸುವ ನಿಟ್ಟಿನಲ್ಲಿ ರಾಜ್ಯದ ಜಲ ಸಂಪನ್ಮೂಲ ಸಚಿವನಾಗಿ ಕೇಂದ್ರಕ್ಕೆ ಪ್ರಸ್ತಾವನೆ ಒಯ್ದು ಜಲಶಕ್ತಿ ಸಚಿವರ ಕಂಡು  ಎಲ್ಲ ಕಮಿಟಿಗಳ ಕ್ಲಿಯರೆನ್ಸ್ ಮಾಡಿ ಕೇಂದ್ರ ಬಜೆಟ್ ಮುಂದೆ ಕಡತ ಮಂಡಿಸಲಾಗಿತ್ತು. ಈ ಕಾರಣಕ್ಕಾಗಿಯೇರ 2023-24 ರ ಕೇಂದ್ರ ಬಜೆಟ್ ನಲ್ಲಿ 5300ಕೋಟಿ ರು ಅನುದಾನ ಕಾಯ್ದರಿಸಿಲಾಗಿತ್ತೆಂದರು.

ಭದ್ರಾ ಮೇಲ್ದಂಡೆಗೆ ಕೇಂದ್ರ ಬಜೆಟ್ ನಲ್ಲಿ ಅನುದಾನ ಘೋಷಿಸಲಾಗಿದೆ. ಕೆಲ ತಾಂತ್ರಿಕ ಕಾರಣಗಳ ಕೇಂದ್ರ ಮುಂದಿಟ್ಟಿದೆ. ಅನುದಾನ ಪಡೆಯಲು ಪ್ರತ್ಯೇಕ ಖಾತೆ ತೆರೆಯುವಂತೆ ಸೂಚಿಸಿದೆ. ತಾವು ಮುಂದಿನ ವಾರ ಸಿಎ ಹಾಗೂ ಕೇಂದ್ರ ಜಲ ಶಕ್ತಿಸಚಿವರ ಜೊತೆ ಮಾತನಾಡಿ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನಮಾಡುವೆ. ಸಿಎಂ ಸಿದ್ದರಾಮಯ್ಯ  ಗುತ್ತಿಗೆದಾರರ ಬಾಕಿ ಹಣ ಪಾವತಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಹೋರಾಟಕ್ಕೆ ತಾನೂ ಕೂಡಾ  ಬೆಂಬಲವಾಗಿ ನಿಲ್ಲುವುದಾಗಿ ಘೋಷಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ  ಪ್ರಧಾನ ಕಾರ್ಯದರ್ಶಿ ಕೆ.ಆರ್.ಧನಂಜಯ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ,ಮಾಜಿ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಕಾರ್ಯಾಧ್ಯಕ್ಷ ಹೊರಕೇರಪ್ಪ, ಕರುನಾಡು ಸೇನೆಯ ಶಿವಕುಮಾರ್, ಸಿಪಿಐನ ಶಿವರುದ್ರಪ್ಪ,ದೊಡ್ಡಉಳ್ಳಾರ್ತಿ ಕರಿಯಣ್ಣ, ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ,  ಹಿರಿಯೂರು ತಾಲೂಕು ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್, ಚೇತನ ಯಳನಾಡು, ಜಾನುಕೊಂಡ ತಿಪ್ಪೇಸ್ವಾಮಿ, ಸಿದ್ದೇಶ್ ಜಾನುಕೊಂಡ, ತಾಲೂಕು ಅಧ್ಯಕ್ಷ ಇಸಾಮುದ್ರ ಪ್ರಭು, ಮುದ್ದಾಪುರ ನಾಗಣ್ಣ, ರಂಗೇಗೌಡ, ಚಿಕ್ಕಪ್ಪನಹಳ್ಳಿ ರವಿ ಕುಮಾರ್, ಚಿದಾನಂದ, ಶೇಖರ್,ಲಕ್ಷ್ಮಣರೆಡ್ಡಿ ತಮಟೆ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *